Saturday, December 25, 2010

Vishnu sahasranama-Phala-Shruti

ಫಲಶ್ರುತಿಃ
ವಿಷ್ಣು ಸಹಸ್ರನಾಮ ಪಠಿಸುವುದರ ಮಹತ್ವ ಹಾಗು ಅದರ ಉಪಯೋಗವನ್ನು ಇಲ್ಲಿ ವಿವರಿಸಲಾಗಿದೆ: 
ಇತೀದಂ ಕೀರ್ತನೀಯಸ್ಯ ಕೇಶವಸ್ಯ ಮಹಾತ್ಮನಃ |
ನಾಮ್ನಾಂ ಸಹಸ್ರಂ ದಿವ್ಯಾನಾಮಶೇಷೇಣ ಪ್ರಕೀರ್ತಿತಮ್ || ||
ಜಗತ್ತಿನ ಸೃಷ್ಟಿ-ಸ್ಥಿತಿ-ಸಂಹಾರ -ನಿಯಮನಕ್ಕೆ ಕಾರಣನಾದ ಕೇಶವ ನಾಮಕ ಭಗವಂತನನ್ನು ಅವನ ಕೀರ್ತಿಯನ್ನು ಕೊಂಡಾಡುವ ಶ್ರೇಷ್ಠವಾದ ಸಹಸ್ರ ನಾಮ ವಿಷ್ಣು ಸಹಸ್ರನಾಮ. ಇದೊಂದು ಮಹಾಮಂತ್ರ. ಮಾನವನಿಂದ ಹಿಡಿದು ಚತುರ್ಮುಖನವರೆಗಿನ ಸಮಸ್ತ ಜೀವ ಜಾತಗಳಿಗೂ ಹಿರಿಯ ಶಕ್ತಿಯಾದ ಪರಮಾತ್ಮನ ಹೆಸರಿದು.
ನಾಮಗಳಲ್ಲಿ ಎರಡು ವಿಧ. ಒಂದು ಲೌಕಿಕ ನಾಮ, ಇನ್ನೊಂದು ದಿವ್ಯನಾಮ; ಉದಾಹರಣೆಗೆ ವಸುದೇವ ಮಗ ವಾಸುದೇವ ಎನ್ನುವುದು ಲೌಕಿಕ ನಾಮ.  
ಈ ಎಲ್ಲಾ ಭಗವಂತನ ನಾಮಗಳು ದಿವ್ಯ ನಾಮಗಳು; ಅನಾದಿನಿತ್ಯ, ಅಪ್ರಾಕೃತ(divine)ವಾದ ದಿವ್ಯ ನಾಮಗಳಿವು.ಇದು ಕೇವಲ ಸಾವಿರ ನಾಮವಷ್ಟೇ ಅಲ್ಲ, ಅನಂತನಾದ ಭಗವಂತನನ್ನು ಈ ಸಾವಿರ ನಾಮದಲ್ಲಿ ಚಿಂತನೆ ಮಾಡಬಹುದು. ಸಹಸ್ರ ಎಂದರೆ ಸಹ-ಸರಣ, ಭಗವಂತನ ಜೊತೆಗೆ/ಒಟ್ಟಿಗೆ ಆತನ ಅನಂತಗುಣಗಾನ ಈ ಸಹಸ್ರನಾಮ.      
ಯ ಇದಂ ಶೃಣುಯಾನ್ನಿತ್ಯಂ ಯಶ್ಚಾಪಿ ಪರಿಕೀರ್ತಯೇತ್ |
ನಾಶುಭಂ ಪ್ರಾಪ್ನುಯಾತ್ ಕಿಂಚಿತ್ ಸೋಮುತ್ರೇಹ ಚ ಮಾನವಃ || ||
ಯಾರು ಇದನ್ನು ಕೇಳುತ್ತಾರೋ, ಯಾರು ಇದನ್ನು ಭಕ್ತಿಯಿಂದ ತಿಳಿದು  ಪಠಿಸುತ್ತಾರೋ,ಅವರಿಗೆ ಎಂದೂ ಕೂಡಾ ಕೆಡುಕಾಗುವುದಿಲ್ಲ. ವಿಷ್ಣು ಸಹಸ್ರನಾಮವನ್ನು ಯಾರು ಬೇಕಾದರೂ ಪಠಿಸಬಹುದು. ಸಮಾಜದಲ್ಲಿ "ಹೆಂಗಸರು ವಿಷ್ಣು ಸಹಸ್ರನಾಮವನ್ನು ಪಠಿಸಬಾರದು" ಎನ್ನುವ ಮೂಢನಂಬಿಕೆ ಇದೆ. ಆದರೆ ಇಂತಹ ನಿರ್ಬಂಧವಿಲ್ಲ. ವಿಷ್ಣುಸಹಸ್ರನಾಮವನ್ನು ಯಾರು ಬೇಕಾದರೂ ಏಲ್ಲಿ ಬೇಕಾದರೂ ಪಠಿಸಬಹುದು. ಇದಕ್ಕೆ ಬೇಕಾಗಿರುವುದು ಕೇವಲ ಭಕ್ತಿಮಾತ್ರ. ಅದರಿಂದ ಎಂದೂ ಕೆಡುಕಾಗುವುದಿಲ್ಲ. ದೇವರ ನಾಮ ಇರುವುದೇ ನಮಗೆ. ನಮ್ಮ ಬದುಕಿನಲ್ಲಿ ಧೈರ್ಯ-ಆತ್ಮ ವಿಶ್ವಾಸ ತುಂಬಲು, ಭಯ ಪರಿಹರಿಸಲು. ಯಾರು ದೇವರನ್ನು ನಂಬುತ್ತಾನೋ ಅವನು ಎಂದೂ ಯಾವುದಕ್ಕೂ ಭಯಪಡಬೇಕಾಗಿಲ್ಲ. ಜಾತಿ-ಲಿಂಗ ಭೇದವಿಲ್ಲದೆ ಎಲ್ಲರೂ ಪಠಿಸಬಹುದಾದ ಸಹಸ್ರನಾಮ ವಿಷ್ಣುಸಹಸ್ರನಾಮ.              
ಯಾರು ಇದನ್ನು ಆಲಿಸುತ್ತಾರೆ ಮತ್ತು ಯಾರು ಇದನ್ನು  ಪಠಿಸುತ್ತಾರೆ ಆ ಮಾನವನು ಇಹ-ಪರದಲ್ಲಿ  ಕೆಡುಕನ್ನು ಹೊಂದಲಾರ. ನಾಮದ ಅರ್ಥವನ್ನು ತಿಳಿದು ಪಾರಾಯಣ ಮಾಡುವುದು ಮುಖ್ಯ.  
ವೇದಾಂತಗೋ ಬ್ರಾಹ್ಮಣಃ ಸ್ಯಾತ್ ಕ್ಷತ್ರಿಯೋ ವಿಜಯೀ ಭವೇತ್ |
ವೈಶ್ಯೋ ಧನಸಮೃದ್ಧಃ ಸ್ಯಾತ್ ಶೂದ್ರಸ್ಸುಖಮವಾಪ್ನುಯಾತ್ || ||  
ವಿಷ್ಣು ಸಹಸ್ರನಾಮವನ್ನು  ಎಲ್ಲಾ ವರ್ಣದವರೂ  ಪಠಿಸಬಹುದು. ಇಲ್ಲಿ ವರ್ಣ ಎಂದರೆ ಜಾತಿ ಅಲ್ಲ. ಹಿಂದೆ ಹೇಳಿದಂತೆ ಮಾನವನ ಸ್ವಭಾವಕ್ಕೆ ಅನುಗುಣವಾಗಿ ಪ್ರಾಚೀನರು ನಾಲ್ಕು ವರ್ಣವನ್ನು ಗುರುತಿಸಿದರು. ಜ್ಞಾನಾರ್ಜನೆ, ಅಧ್ಯಯನ ಮತ್ತು  ಚಿಂತನೆಯಲ್ಲಿ ಆಸಕ್ತಿ ಉಳ್ಳವ ಬ್ರಾಹ್ಮಣ(ಬೃಹತ್ ಆದುದ್ದನ್ನು ಅನ್ವೇಷಣೆ ಮಾಡುವವ-Intelligence); ಇನ್ನೊಬ್ಬರು ತೊಂದರೆಯಲ್ಲಿದ್ದಾಗ ರಕ್ಷಣೆ(Protection) ಮಾಡುವವ ಕ್ಷತ್ರಿಯ. ಆತನಲ್ಲಿ ಆಡಳಿತ(Administration) ಗುಣವಿರುತ್ತದೆ. ವೈಶ್ಯ ಹೊಟ್ಟೆಗೆ ಬೇಕಾದುದ್ದನ್ನು ಕೊಡುವ ವ್ಯಾಪಾರ ಮನೋವೃತ್ತಿ ಇರುವವರು(Production). ಆಹಾರ ಉತ್ಪತ್ತಿ, ಗೋವುಗಳನ್ನು ಸಾಕಿ ಹಾಲು ಮಾರುವುದು ಇತ್ಯಾದಿ. ಶೂದ್ರ ಅಂದರೆ ಇನ್ನೊಬ್ಬರ ಕಷ್ಟಕ್ಕೆ ಕರಗುವವ (Service). ಯಾರು  ಶೂದ್ರನಲ್ಲವೋ  ಅವನು ಮನುಷ್ಯನೇ ಅಲ್ಲ. ಈ ವರ್ಣ ಪದ್ಧತಿ ಪ್ರಪಂಚದ ಎಲ್ಲಾ ಭಾಗದಲ್ಲೂ ಇದೆ. ಬ್ರಾಹ್ಮಣನ ಮಗ ಕ್ಷತ್ರಿಯನಾಗಬಹುದು, ಇಲ್ಲಿ ಜೀವ ಸ್ವಭಾವ ಮುಖ್ಯ. ತಂದೆ-ತಾಯಿ ಜಾತಿ ಅಲ್ಲ! ಯಾರೂ ಏಕವರ್ಣದವನಲ್ಲ. ಎಲ್ಲರಲ್ಲೂ ಎಲ್ಲ ಸ್ವಭಾವವಿರುತ್ತದೆ. ಯಾವ ಸ್ವಭಾವ ನಮ್ಮಲ್ಲಿ ಹೆಚ್ಚಗಿದೆಯೋ ನಾವು ಆ ವರ್ಣಕ್ಕೆ ಸೇರುತ್ತೇವೆ.ಸ್ವಭಾವ ನೈಸರ್ಗಿಕ.
ವಿಷ್ಣು ಸಹಸ್ರನಾಮ ಕೇಳುವುದರಿಂದ, ಪಠಿಸುವುದರಿಂದ ಬ್ರಾಹ್ಮಣನ ಜ್ಞಾನ ವೃದ್ಧಿಯಾಗುತ್ತದೆ, ವೈಶ್ಯನ ವ್ಯಾಪಾರ ಹೆಚ್ಚುತ್ತದೆ, ಕ್ಷತ್ರಿಯನ ಶತ್ರು ನಿಗ್ರಹಕ್ಕೆ ಬೇಕಾದ ಬಲವೃದ್ಧಿಯಾಗುತ್ತದೆ. ಶೂದ್ರ ಸುಖವಾಗಿ ಬದುಕುತ್ತಾನೆ.
ಹೀಗೆ ದೇವರ ನಾಮ ಪಠಿಸಲು ಯಾವ ವರ್ಣ ಭೇದವಿಲ್ಲ.               
ಬ್ರಾಹ್ಮಣನು ವೇದಗಳ ನಿರ್ಣಯವನ್ನು ಬಲ್ಲವನಾದಾನು; ಕ್ಷತ್ರಿಯನು ಗೆಲುವನ್ನು ಪಡೆದಾನು; ವೈಶ್ಯನು ತುಂಬು ಸಿರಿವಂತನಾದಾನು; ಶೂದ್ರನು ಸುಖವನ್ನು ಪಡೆದಾನು.  
ಧರ್ಮಾರ್ಥೀ ಪ್ರಾಪ್ನುಯಾದ್ಧರ್ಮಂ ಅರ್ಥಾರ್ಥೀ ಚಾರ್ಥಮಾಪ್ನುಯಾತ್ |
ಕಾಮಾನವಾಪ್ನುಯಾತ್ ಕಾಮೀ ಪ್ರಜಾರ್ಥೀ ಚಾಪ್ನುಯಾತ್ ಪ್ರಜಾಮ್ || ||
ಮನುಷ್ಯ ಪಡೆಯಲಿಕ್ಕೆ ಬಯಸುವುದು ಧರ್ಮ, ಅರ್ಥ, ಕಾಮ, ಮೋಕ್ಷ  ಈ ನಾಲ್ಕನ್ನು. ಇದರಲ್ಲಿ ಕಾಮ ಮತ್ತು ಅರ್ಥ ಲೌಕಿಕವಾದದ್ದು. ಸಾಮಾನ್ಯವಾಗಿ ಧಾರ್ಮಿಕ ಪ್ರವೃತ್ತಿಯುಳ್ಳ(Elevated Souls)ವರು ಲೌಕಿಕವಾದದ್ದನ್ನು  ಬಯಸದೇ ದೇವರನ್ನು ತಿಳಿಯುವ ಧರ್ಮ ಹಾಗು ಅದರಾಚೆಗಿನ ಮೋಕ್ಷವನ್ನು ಸುಖವೆಂದು ತಿಳಿದಿರುತ್ತಾರೆ. ಬಯಕೆಗಳೇ ಇಲ್ಲದಿರುವುದು ನಿಜವಾದ ಸುಖ.
ವಿಷ್ಣು ಸಹಸ್ರನಾಮ ಪಠಿಸುವುದು ಅಂದರೆ ಪ್ರತಿ ನಾಮದ ಉಚ್ಛಾರ ಹಾಗು ಅದರ ಹಿಂದಿನ ಅರ್ಥ ಸ್ಮರಣೆ.ಒಂದು ನಾಮ ಸ್ಮರಣೆ ಮಾಡಿದರೂ ಸಾಕು ನಮ್ಮ ಬದುಕು ಪಾವನವಾಗುತ್ತದೆ, ಧರ್ಮಮಯವಾಗುತ್ತದೆ . ಒಂದು ವೇಳೆ ನಮಗೆ ಅತೀ ಕಷ್ಟವಿದ್ದು ದುಡ್ಡಿನ ಅಗತ್ಯ ಇದ್ದಲ್ಲಿ ವಿಷ್ಣು ಸಹಸ್ರನಾಮವನ್ನು ಯಾವುದೇ ಲೋಭವಿಲ್ಲದೆ ನಿರ್ಮಲ ಮನಸ್ಸಿನಿಂದ ಭಕ್ತಿ ಪೂರ್ವಕವಾಗಿ ಚಿಂತನೆ ಮಾಡಿದರೆ ಖಂಡಿತ ನಾವು ಆ ಚಿಂತೆಯಿಂದ ಪಾರಾಗುತ್ತೇವೆ. ಆದರೂ ನಾವು ಏನನ್ನೂ ಬಯಸದೇ ದೇವರ ಸ್ಮರಣೆ ಮಾಡುವುದು ಅತೀ ಶ್ರೇಷ್ಠ. ಬಯಕೆಗಳಿಲ್ಲದೆ   ಸ್ಮರಿಸಿದರೆ ನಾವು ಮಹಾಫಲವನ್ನು ಪಡೆಯುತ್ತೇವೆ; ಅರಿವನ್ನು ಪಡೆದು ಮೋಕ್ಷವನ್ನು ಪಡೆಯುತ್ತೇವೆ.
ಧರ್ಮ ಬೇಕೆನ್ನುವವನು ಪಡೆದಾನು ಧರ್ಮವನ್ನು;ಅರ್ಥ ಬೇಕೆನ್ನುವವನು ಪಡೆದಾನು ಅರ್ಥವನ್ನು. ಕಾಮಗಳನ್ನು ಪಡೆದಾನು-ಕಾಮ ಬೇಕೆನುವವನು. ಪ್ರಜ್ಞೆ ಬೇಕೆನುವವನು ಪಡೆದಾನು ಪ್ರಜ್ಞೆಯನ್ನು. 
ಭಕ್ತಿಮಾನ್ ಯಃ ಸದೋತ್ಥಾಯ ಶುಚಿಸ್ತದ್ಗತಮಾನಸಃ |
ಸಹಸ್ರಂ ವಾಸುದೇವಸ್ಯ ನಾಮ್ನಾಮೇತತ್ ಪ್ರಕೀರ್ತಯೇತ್ || ||
ವಿಷ್ಣು ಸಹಸ್ರನಾಮ ಯಾವಾಗ ಪಠಿಸಬೇಕು ಎನ್ನುವ ಪ್ರಶ್ನೆಯನ್ನು ಎಲ್ಲರೂ ಕೇಳುತ್ತಾರೆ. ಈ ಪ್ರಶ್ನೆಗೆ ಇಲ್ಲಿ ಉತ್ತರವಿದೆ.  ವಿಷ್ಣು ಸಹಸ್ರನಾಮ ಪಾರಾಯಣಕ್ಕೆ ಬೇಕಾಗಿರುವುದು ಸಮಯ-ಗಳಿಗೆ ಅಲ್ಲ, ಬೇಕಾಗಿರುವುದು ಒಂದೇ ಒಂದು-ಅದು ಭಕ್ತಿ. ಬೆಳಿಗ್ಗೆ ಎದ್ದ ತಕ್ಷಣ ನಿರ್ಮಲವಾದ ಮನಸ್ಸಿನಿಂದ ಭಕ್ತಿಪೂರ್ವಕವಾಗಿ ಪಠಿಸಬಹುದು. ಇಲ್ಲಿ ಮನಶುದ್ಧಿ ಮುಖ್ಯ, ಅದೇ ಮಡಿ.  
ಭಕ್ತಿಯಿಂದ ಯಾರು ದಿನವು ಬೆಳಗೆದ್ದು ನಿರ್ಮಲನಾಗಿ ಭಗವಂತನಲ್ಲಿ ಸಂಪೂರ್ಣ ಮನಸ್ಸಿಟ್ಟು  ವಾಸುದೇವನ ಈ ಸಾವಿರ ಹೆಸರನ್ನು ಹೇಳುತ್ತಾನೆ ಅವನು ಯಶವನ್ನು ಕೀರ್ತಿಯನ್ನು ಗಳಿಸುತ್ತಾನೆ ಎನ್ನುವುದನ್ನು ಮುಂದಿನ ಶ್ಲೋಕ ಹೇಳುತ್ತದೆ. 
ಯಶಃ ಪ್ರಾಪ್ನೋತಿ ವಿಪುಲಂ ಯಾತಿ ಪ್ರಾಧಾನ್ಯಮೇವ ಚ |
ಅಚಲಾಂ ಶ್ರಿಯಮಾಪ್ನೋತಿ ಶ್ರೇಯಃ ಪ್ರಾಪ್ನೋತ್ಯನುತ್ತಮಮ್ || ||
ಈ ಸಹಸ್ರ ನಾಮ ಜಪದಿಂದ ಕೀರ್ತಿ ಬರುತ್ತದೆ. ಇಲ್ಲಿ ಕೀರ್ತಿ ಎಂದರೆ ಭಗವಂತನ ಅರಿವು. ಇದರಿಂದ ಸಮುದಾಯದಲ್ಲಿ ಹಿರಿಯನಾಗಿ ಎಲ್ಲರೂ ಗೌರವದಿಂದ ಕಾಣುವಂತಾಗುತ್ತದೆ. ಎಂದೂ ಕರಗದ ಜ್ಞಾನ ಸಂಪತ್ತನ್ನು ಪಡೆದು ಶ್ರೇಯಸ್ಸನ್ನು ಪಡೆಯುತ್ತೇವೆ.   
ಹಬ್ಬಿದ ಜಸವನ್ನು ಗಳಿಸುತ್ತಾನೆ; ಬಂಧುಗಳಲ್ಲಿ ಮುಂದಾಳುತನ ಪಡೆಯುತ್ತಾನೆ; ಅಳಿಯದ ಸಿರಿಯನ್ನು ಪಡೆಯುತ್ತಾನೆ; ಮುಗಿಲಿಲ್ಲದ ಶ್ರೇಯಸ್ಸನ್ನು (ಮುಕ್ತಿಯನ್ನು) ಪಡೆಯುತ್ತಾನೆ.
ನ ಭಯಂ ಕ್ವಚಿದಾಪ್ನೋತಿ ವೀರ್ಯಂ ತೇಜಶ್ಚ ವಿಂದತಿ |
ಭವತ್ಯರೋಗೋ ದ್ಯುತಿಮಾನ್ ಬಲರೂಪಗುಣಾನ್ವಿತಃ || ||
ವಿಷ್ಣು ಸಹಸ್ರನಾಮ ಪಠಿಸುವ ಭಕ್ತರಿಗೆ ಎಂದೂ ಭಯವಿಲ್ಲ. ನನ್ನನ್ನು ನಿರಂತರವಾಗಿ ಕಾಯುವ ಪರಶಕ್ತಿಯೊಂದಿದೆ ಎನ್ನುವ ಆತ್ಮವಿಶ್ವಾಸ ಮೂಡುತ್ತದೆ. ಇದರಿಂದ ವಿಶೇಷ ಕಾಂತಿ, ವರ್ಚಸ್ಸು,ಮನೋಬಲ, ದೇಹಬಲ ಇಂದ್ರಿಯಬಲ ಬರುತ್ತದೆ.    
ಎಂದೂ ಯಾವುದಕ್ಕೂ ಹೆದರುವುದಿಲ್ಲ; ಬೀರವನ್ನು ಗಳಿಸುತ್ತಾನೆ; ತೇಜಸ್ವಿಯಾಗುತ್ತಾನೆ; ಆರೋಗ್ಯವಂತನಾಗಿ ಕಾಂತಿಯನ್ನು ಪಡೆಯುತ್ತಾನೆ.  ಬಲ-ರೂಪ-ಗುಣಗಳಿಂದ ಕೂಡಿದವನಾಗುತ್ತಾನೆ.  
ರೋಗಾರ್ತೋ ಮುಚ್ಯತೇ ರೋಗಾದ್ಬದ್ಧೋ ಮುಚ್ಯೇತ ಬಂಧನಾತ್ |
ಭಯಾನ್ಮುಚ್ಯೇತ ಭೀತಸ್ತು ಮುಚ್ಯೇತಾಪನ್ನ ಆಪದಃ || ||
ರೋಗ ಪೀಡಿತನು ರೋಗದಿಂದ ಪಾರಾದಾನು; ಸೆರೆಯಲ್ಲಿರುವವನು ಪಡೆದಾನು ಬಿಡುಗಡೆ ಸೆರೆಯಿಂದ; ಭಯದಿಂದ ಪಾರಾದಾನು ಹೆದರಿಕೊಂವನು; ಪಾರಾದಾನು ತೊಂದರೆಗೊಳಗಾದವನು ತೊಂದರೆಯಿಂದ.    
ದುರ್ಗಾಣ್ಯತಿತರತ್ಯಾಶು ಪುರುಷಃ ಪುರುಷೋತ್ತಮಮ್ |
ಸ್ತುವನ್ನಾಮಸಹಸ್ರೇಣ ನಿತ್ಯಂ ಭಕ್ತಿಸಮನ್ವಿತಃ || ||
ಸಾಧಕನಾದ ಜೀವಿ ಪುರುಷೋತ್ತಮನನ್ನು ಸ್ತುತಿಸುತ್ತ ಸಾವಿರ ಹೆಸರಿನಿಂದ, ಅನುದಿನ, ಭಕ್ತಿಯಿಂದ ಕೂಡಿದವನಾಗಿ, ಬಲು ಬೇಗನೆ ದುಗುಡವನ್ನು ದಾಟುತ್ತಾನೆ . 
ವಾಸುದೇವಾಶ್ರಯೋ ಮರ್ತ್ಯೋ ವಾಸುದೇವಪರಾಯಣಃ |
ಸರ್ವಪಾಪವಿಶುದ್ಧಾತ್ಮಾ ಯಾತಿ ಬ್ರಹ್ಮ ಸನಾತನಮ್ || ೧೦ ||
ವಾಸುದೇವನನ್ನು ಆಶ್ರಯಿಸಿದ ಮಾನವನು, ವಾಸುದೇವನೆ ಕೊನೆಯಾಸರೆ ಎಂದು ನಂಬಿದವನು,ಎಲ್ಲಾ ಪಾಪಗಳನ್ನು ತೊಡೆದು ಪರಿಶುದ್ಧ ಸ್ವರೂಪನಾಗಿ ಎಂದೆಂದೂ ಇರುವ ಪರತತ್ವವನ್ನು ಸೇರುತ್ತಾನೆ . 
ನ ವಾಸುದೇವಭಕ್ತಾನಾಮಶುಭಂ ವಿದ್ಯತೇ ಕ್ವಚಿತ್ |
ಜನ್ಮಮೃತ್ಯುಜರಾವ್ಯಾಧಿಭಯಂ ನೈವೋಪಜಾಯತೇ || ೧೧ ||
ವಾಸುದೇವನ ಭಕ್ತರಿಗೆ ಎಲ್ಲೂ ಕೇಡು ಎನ್ನುವುದು ಇರುವುದಿಲ್ಲ . ಹುಟ್ಟು-ಸಾವು-ಮುಪ್ಪು-ರುಜಿನ ಭಯ ಉಂಟಾಗುವುದೇ ಇಲ್ಲ.  
ಇಮಂ ಸ್ತವಮಧೀಯಾನಃ ಶ್ರದ್ಧಾಭಕ್ತಿಸಮನ್ವಿತಃ |
ಯುಜ್ಯೇತಾತ್ಮಾಸುಖಕ್ಷಾಂತಿಶ್ರೀಧೃತಿಸ್ಮೃತಿಕೀರ್ತಿಭಿಃ || ೧೨ ||
ಶ್ರದ್ಧೆ-ಭಕ್ತಿಗಳಿಂದೊಡಗೂಡಿ ಈ ಸ್ತೋತ್ರವನ್ನು ಅರಿತರೆ ; ಸುಖ, ಕ್ಷಮೆ, ಸಂಪತ್ತು, ಧೈರ್ಯ, ನೆನಪು ಮತ್ತು ಕೀರ್ತಿಗಳು ಲಭಿಸುತ್ತವೆ.      
ನ ಕ್ರೋಧೋ ನ ಚ ಮಾತ್ಸರ್ಯಂ ನ ಲೋಭೋ ನಾಶುಭಾ ಮತಿಃ |
ಭವಂತಿ ಕೃತಪುಣ್ಯಾನಾಂ ಭಕ್ತಾನಾಂ ಪುರುಷೋತ್ತಮೇ || ೧೩ ||
ಪುಣ್ಯವಂತರಿಗೆ, ಪುರುಷೋತ್ತಮನಲ್ಲಿ ಬಗೆಯನಿಟ್ಟವರಿಗೆ ಸಿಟ್ಟು ಬರದು, ಹೊಟ್ಟೆಕಿಚ್ಚೂ ಇರದು; ಆಸೆಬುರುಕತನ ಕಾಡದು; ಕೆಟ್ಟ ಬುದ್ಧಿ ಮೂಡದು . ಆದರೆ ಎಲ್ಲವುದಕ್ಕೂ ಭಕ್ತಿ ಮುಖ್ಯ.     
ದ್ಯೌಸ್ಸಚಂದ್ರಾರ್ಕನಕ್ಷತ್ರಾ ಖಂ ದಿಶೋ ಭೂರ್ಮಹೋದಧಿಃ |
ವಾಸುದೇವಸ್ಯ ವೀರ್ಯೇಣ ವಿಧೃತಾನಿ ಮಹಾತ್ಮನಃ || ೧೪ ||
ಸ್ವರ್ಗ, ಚಂದ್ರ-ಸೂರ್ಯ-ನಕ್ಷತ್ರಗಳೊಡನೆ, ಆಕಾಶ, ದಿಕ್ಕುಗಳು, ನೆಲ, ಕಡಲು ಎಲ್ಲ ಮಹಾತ್ಮನಾದ ವಾಸುದೇವನ ಸಾಮರ್ಥ್ಯದಿಂದ ಧರಿಸಲ್ಪಟ್ಟಿವೆ.  
ಸಸುರಾಸುರಗಂಧರ್ವಂ ಸಯಕ್ಷೋರಗರಾಕ್ಷಸಮ್ |
ಜಗದ್ವಶೇ ವರ್ತತೇದಂ ಕೃಷ್ಣಸ್ಯ ಸಚರಾಚರಮ್ || ೧೫ ||
ದೇವ -ದಾನವ-ಗಂಧರ್ವರೊಡನೆ, ಯಕ್ಷರು, ಹಾವುಗಳು, ರಕ್ಕಸರೊಡನೆ, ಚರ-ಆಚರಗಳೊಡನೆ ಈ ಎಲ್ಲ ಜಗತ್ತು ಆತನ ಅಂಕೆಯಲ್ಲಿದೆ.  
ಇಂದ್ರಿಯಾಣಿ ಮನೋ ಬುದ್ಧಿಃ ಸತ್ತ್ವಂ ತೇಜೋ ಬಲಂ ಧೃತಿಃ |
ವಾಸುದೇವಾತ್ಮಕಾನ್ಯಾಹುಃ, ಕ್ಷೇತ್ರಂ ಕ್ಷೇತ್ರಜ್ಞ ಏವ ಚ || ೧೬ ||
ಇಂದ್ರಿಯಗಳು,ಮನಸ್ಸು,ಬುದ್ಧಿ, ಸ್ವಭಾವ, ತೇಜಸ್ಸು, ಬಲ,ಧೈರ್ಯ,ಎಲ್ಲ ವಾಸುದೇವನ ಅಧೀನದಲ್ಲಿವೆ ; ಈ ಶರೀರ ಮತ್ತು ಇಲ್ಲಿರುವ ಜೀವ ಕೂಡ. ಇದನ್ನೆಲ್ಲ ಬಲ್ಲ ಅವನೆ ನಿಜವಾದ ಕ್ಷೇತ್ರಜ್ಞ ಕೂಡ.     
ಸರ್ವಾಗಮಾನಾಮಾಚಾರಃ ಪ್ರಥಮಂ ಪರಿಕಲ್ಯ್ಪತೇ |
ಆಚಾರಪ್ರಭವೋ ಧರ್ಮೋ ಧರ್ಮಸ್ಯ ಪ್ರಭುರಚ್ಯುತಃ || ೧೭ ||
ಎಲ್ಲ ಶಾಸ್ತ್ರಗಳ ಮೂಲಕ ಒಳ್ಳೆಯ ನಡೆಯ ಕಲ್ಪನೆ ಮೊದಲು ಮೂಡುತ್ತದೆ. ಒಳ್ಳೆಯ ನಡೆಯಿಂದ ಸಿಗುವುದು ಧರ್ಮ. ಧರ್ಮದ ಒಡೆಯನೆ ಕುಂದಿರದ ನಾರಾಯಣ. 
ಋಷಯಃ ಪಿತರೋ ದೇವಾ ಮಹಾಭೂತಾನಿ ಧಾತವಃ |
ಜಂಗಮಾಜಂಗಮಂ ಚೇದಂ ಜಗನ್ನಾರಾಯಣೋದ್ಭವಮ್ || ೧೮ ||
ಋಷಿಗಳು, ಪಿತೃಗಳು ದೇವತೆಗಳು,ಮಣ್ಣು-ನೀರು-ಬೆಂಕಿ-ಗಾಳಿ-ಆಕಾಶ ಎಂಬ ಐದು ಮಹಾ ಭೂತಗಳು, ತ್ವಕ್,ಚರ್ಮ ಮಾಂಸ ರುದಿರ ಮಜ್ಜಾ ಮೇದಸ್ಸು ಅಸ್ಥಿಗಳೆಂಬ ಏಳು ಧಾತುಗಳು, ಚಲಿಸುವ ಚಲಿಸದ ಈ ಎಲ್ಲ ವಿಶ್ವವೂ ನಾರಾಯಣನಿಂದ ಹುಟ್ಟಿ ಬಂದದ್ದು.      
ಯೋಗೋ ಜ್ಞಾನಂ ತಥಾ ಸಾಂಖ್ಯಂ ವಿದ್ಯಾಃ ಶಿಲ್ಪಾದಿಕರ್ಮ ಚ |
ವೇದಾಶ್ಶಾಸ್ತ್ರಾಣಿ ವಿಜ್ಞಾನಮೇತತ್ಸರ್ವಂ ಜನಾರ್ದನಾತ್ || ೧೯ ||
ಯೋಗ, ಜ್ಞಾನ ಮಾರ್ಗ , ಅಂತೆ ಆತ್ಮದ ಅರಿವು, ಲಲಿತ ವಿದ್ಯೆಗಳು, ಶಿಲ್ಪಿ ಮುಂತಾದ ಕುಸುರು ಕೆಲಸ, ವೇದಗಳು, ಶಾಸ್ತ್ರಗಳು, ವಿಜ್ಞಾನ, ಇದೆಲ್ಲವೂ ಜನಾರ್ದನನಿಂದ.    
ಏಕೋ ವಿಷ್ಣುರ್ಮಹದ್ಭೂತಂ ಪೃಥಗ್ಭೂತಾನ್ಯನೇಕಶಃ |
ತ್ರೀನ್‌ಲೋಕಾನ್ವ್ಯಾಪ್ಯ ಭೂತಾತ್ಮಾ ಭುಂಕ್ತೇ ವಿಶ್ವಭುಗವ್ಯಯಃ || ೨೦ ||
ಒಬ್ಬನೇ ಒಬ್ಬ ವಿಷ್ಣು ಹಿರಿಯ ಚೇತನ; ಅಲ್ಪ ಚೇತನಗಳು ಹಲವಾರು. ಮೂರು ಲೋಕಗಳನ್ನು ತುಂಬಿದ, ಎಲ್ಲ ಜೀವರ ಅಂತರ್ಯಾಮಿ, ಅಳಿವಿರದ ನಾರಾಯಣ ಎಲ್ಲ ವಿಶ್ವವನ್ನು ಪಾಲಿಸುತ್ತಾನೆ. ಕೊನೆಗೆ ಕಬಳಿಸುತ್ತಾನೆ.   
ಇಮಂ ಸ್ತವಂ ಭಗವತೋ ವಿಷ್ಣೋರ್ವ್ಯಾಸೇನ ಕೀರ್ತಿತಮ್ |
ಪಠೇದ್ಯ ಇಚ್ಛೇತ್ಪುರುಷಃ ಶ್ರೇಯಃ ಪ್ರಾಪ್ತುಂ ಸುಖಾನಿ ಚ || ೨೧ ||
ಭಗವಾನ್ ವಿಷ್ಣುವಿನ ಈ ಸ್ತೋತ್ರವನ್ನು, ಸ್ವತಃ ವ್ಯಾಸರೆ ನುಡಿದಿರುವುದು . ನಿಜವಾದ ಶ್ರೇಯಸ್ಸನ್ನು ಸುಖವನ್ನು ಸಾಧಕನು ಇದರಿಂದ ಪಡೆಯತ್ತಾನೆ.   
ವಿಶ್ವೇಶ್ವರಮಜಂ ದೇವಂ ಜಗತಃ ಪ್ರಭವಾಪ್ಯಯಮ್ |
ಭಜಂತಿ ಯೇ ಪುಷ್ಕರಾಕ್ಷಂ ನ ತೇ ಯಾಂತಿ ಪರಾಭವಮ್ || ೨೨ ||
ಜಗದೊಡೆಯನನ್ನು, ಹುಟ್ಟಿರದ ದೇವನನ್ನು, ಜಗದ ಹುಟ್ಟು-ಸಾವುಗಳಿಗೆ ಕಾರಣನಾದ ತಾವರೆಗಣ್ಣಿನ ನಾರಾಯಣನನ್ನು ಯಾರು ಭಜಿಸುತ್ತಾರೆ ಅವರು ಎಂದೆಂದೂ ಸೋಲನ್ನು ಕಾಣುವುದಿಲ್ಲ. 
ಇತಿ ಶ್ರೀಮನ್ಮಹಾಭಾರತೇ  ಅನುಶಾಸನಪರ್ವಣಿ ಶ್ರೀವಿಷ್ಣುಸಹಸ್ರನಾಮ ಸ್ತೋತ್ರಂ ಸಂಪೂರ್ಣಮ್.
ಹೀಗೆ ಮಹಾಭಾರತದ ಅನುಶಾಸನ ಪರ್ವದಲ್ಲಿ ದೇವರ ಸಾವಿರ ಹೆಸರಿನ ಹಾಡು ಮುಗಿಯಿತು.
 
||ಸರ್ವೇ ಜನಾಃ ಸುಖಿನೋ ಭವಂತು||
|| ಶ್ರೀ ಕೃಷ್ಣಾರ್ಪಣ ಮಸ್ತು||

Thursday, December 23, 2010

Vishnu sahasranama 993-1000

ವಿಷ್ಣು ಸಹಸ್ರನಾಮ:
ಶಂಖಭೃನ್ನಂದಕೀ ಚಕ್ರೀ ಶಾರ್ಙ್ಗಧನ್ವಾ ಗದಾಧರಃ
ರಥಾಂಗಪಾಣಿರಕ್ಷೋಭ್ಯಃ ಸರ್ವಪ್ರಹರಣಾಯುಧಃ
ನಾಮಶ್ಲೋಕದ ಕೊನೆಯ ಈ ಶ್ಲೋಕದಲ್ಲಿ- ದುಷ್ಟಶಕ್ತಿಯ  ನಿರ್ನಾಮಕ್ಕಾಗಿ, ಪಾಪಿಗಳ ಸಂಹಾರಕ್ಕಾಗಿ, ಭಗವಂತ ಬಳಸುವ ಆಯುದಕ್ಕೆ ಸಂಬಂಧಪಟ್ಟ ಹೆಸರುಗಳಿವೆ.     
993) ಶಂಖಭೃತ್
ಶಂಖ ಬಹಳ ದೊಡ್ಡ ದುಷ್ಟ ಸಂಹಾರಕ ಶಕ್ತಿ. ಹಿಂದಿನ ಕಾಲದಲ್ಲಿ ಬೆಳಿಗ್ಗೆ ಮತ್ತು ಸಂಜೆ ತಪ್ಪದೆ ಮನೆಯಲ್ಲಿ, ಮನೆಯ ಮೂಲೆ-ಮೂಲೆಯಿಂದ, ಅಷ್ಟ ದಿಕ್ಕುಗಳಿಗೂ ಕೇಳುವಂತೆ ಶಂಖನಾದ ಮಾಡುತ್ತಿದ್ದರು. ಇದಕ್ಕೆ ಕಾರಣ ಶಂಖ ನಾದಕ್ಕೆ ದುಷ್ಟ ಶಕ್ತಿಯ ಎದೆಯೊಡೆಯುವ ಶಕ್ತಿ ಇದೆ. ಶಂಖದ ನಾದ ಎಲ್ಲಿಯವರೆಗೆ ಕೇಳಿಸುತ್ತದೋ, ಅಲ್ಲಿಯ ತನಕ ಯಾವ ದುಷ್ಟ ಶಕ್ತಿಗಳೂ ಸುಳಿಯಲಾರವು. ಇದೇ ಕಾರಣಕ್ಕಾಗಿ ದೇವಸ್ಥಾನಗಳಲ್ಲಿ ಗಂಟಾನಾದವನ್ನು ಮಾಡುತ್ತಾರೆ. ಗಂಟೆಯನ್ನು ನಿದಾನವಾಗಿ ಓಂ.ಽಽ..ಓಂ ಎನ್ನುವ ನಾದ ಬರುವಂತೆ ಮೆಲ್ಲಗೆ ಹೊಡೆಯಬೇಕು, ಶಂಖವನ್ನು ಓ..ಽಽ..ಮ್ ಎನ್ನುವಂತೆ ನಾದ ಮಾಡಬೇಕು. ಯುದ್ಧ ರಂಗದಲ್ಲಿ ಶಂಖನಾದ ಎದುರಿನ ಸೈನ್ಯೆಕ್ಕೆ ಸಿದ್ದತೆಯ ಸಂಕೇತ ಹಾಗು ತಮ್ಮ ಸೇನೆಗೆ ಸಿದ್ದವಿರುವಂತೆ ಆಜ್ಞೆ. ಶಂಖದ ಅಭಿಮಾನಿ ದೇವತೆ ಲಕ್ಷ್ಮಿ. ಆಕೆ ಸಂಪತ್ತಿನ ದೇವತೆಯಾದ ವೇದಮಾನಿನಿ. ಈ ಕಾರಣಕ್ಕಾಗಿ ಶಂಖ 'ಅರ್ಥ'ದ ಸಂಕೇತ ಕೂಡಾ ಹೌದು.  ಶಂಖವನ್ನು ತೊಟ್ಟ ಭಗವಂತ ಶಂಖಭೃತ್.
994) ನಂದಕೀ
ನಂದಕ ಎನ್ನುವ ಖಡ್ಗವನ್ನು ಹಿಡಿದ ಭಗವಂತ ನಂದಕೀ. ಖಡ್ಗದ ಅಭಿಮಾನಿ ದೇವತೆ ರಮೆ(ಭೂ ಮಾತೆ). ನಂದಕ ಎಂದರೆ ಆನಂದ. ದುಷ್ಟ ಶಕ್ತಿಯನ್ನು ಸಂಹಾರ ಮಾಡಿ ನಮಗೆ ಆನಂದ ಕೊಡುವ ಖಡ್ಗ ಹಿಡಿದ ಭಗವಂತ ನಂದಕೀ.  
995) ಚಕ್ರೀ
ಅಧರ್ಮ ನಾಶಕ್ಕಾಗಿ, ಧರ್ಮ ಸಂಸ್ಥಾಪನೆಗಾಗಿ  ಚಕ್ರ ಹಿಡಿದ ಭಗವಂತ ಚಕ್ರೀ. ಚಕ್ರ ಧರ್ಮದ ಸಂಕೇತ. ಚಕ್ರದ ಅಭಿಮಾನಿ ದೇವತೆ ದುರ್ಗೆ.  
996) ಶಾರ್ಙ್ಗಧನ್ವಾ
ಶಾರ್ಙ್ಗವೆಂಬ ಬಿಲ್ಲನ್ನು ಹೊತ್ತ ಭಗವಂತ ಶಾರ್ಙ್ಗಧನ್ವಾ. ಬಿಲ್ಲಿನ ಅಭಿಮಾನಿ ದೇವತೆ ಭಲ ಸ್ವರೂಪಿ ಪ್ರಾಣದೇವರು. ಶಾರ್ಙ್ಗ ಎಂದರೆ ತುತ್ತ ತುದಿ. ಆಯುದಗಳಲ್ಲೇ ಅತ್ಯಂತ ಹಿರಿದಾದ ಆಯುದ ಶಾರ್ಙ್ಗ. 
997) ಗದಾಧರಃ
ಸಂಯಮದ ಸಂಕೇತವಾದ ಗದೆಯನ್ನು ಧರಿಸಿದ ಭಗವಂತ ಗದಾಧರಃ. ಗದೆ ಸ್ವಚ್ಚಂದಕಾಮದ ನಿಯಂತ್ರಣದ ಸಂಕೇತ. ಗದೆಯ ಅಭಿಮಾನಿ ದೇವತೆ 'ಪ್ರಾಣ'. 
998) ರಥಾಂಗಪಾಣಿಃ
ಮಹಾಭಾರತ ಯುದ್ಧದಲ್ಲಿ ರಥದ ಗಾಲಿಯನ್ನು ಆಯುದವಾಗಿ ಹಿಡಿದ ಭಗವಂತ ರಥಾಂಗಪಾಣಿಃ. ಇದು ಮಹಾಭಾರತ ಯುದ್ಧದಲ್ಲಿ ಅರ್ಜುನ ಮತ್ತು  ಭೀಷ್ಮ ಪಿತಾಮಹರ ನಡುವೆ ಯುದ್ಧ  ಪ್ರಾರಂಭವಾದಾಗ ನಡೆದ ಒಂದು ಘಟನೆ. ಅರ್ಜುನ ತನ್ನನ್ನು ಮುದ್ದಿಸಿ ಆಡಿಸಿ ಬೆಳೆಸಿದ ಪಿತಾಮಹನೊಂದಿಗೆ ಮನಸ್ಸಿಲ್ಲದ ಮನಸ್ಸಿನಿಂದ ಯುದ್ಧ ಮಾಡುತ್ತಿರುತ್ತಾನೆ.  ಇದನ್ನು  ಗಮನಿಸಿದ  ಸಾರಥಿ  ಕೃಷ್ಣ  ಕೋಪಗೊಳ್ಳುತ್ತಾನೆ. ಮಹಾಭಾರತ ಯುದ್ಧದ ಮೊದಲು ತಾನು ಶಸ್ತ್ರ ಹಿಡಿಯುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದ ಕೃಷ್ಣ, ಕೋಪಾವೇಶದಿಂದ  ಭೀಷ್ಮನನ್ನು ಸಾಯಿಸಲೆಂಬಂತೆ ರಥದಚಕ್ರವೊಂದನ್ನು ಹಿಡಿದು ಮುಂದೊತ್ತಿ ಬರುತ್ತಾನೆ! ಇದನ್ನು ನೋಡಿದ ಬೀಷ್ಮ  ತನ್ನ ಎರಡೂ ಕೈಗಳನ್ನು ಜೋಡಿಸಿ  ಹೀಗೆ ಹೇಳುತ್ತಾನೆ: 
" ಓ ಭಗವಂತ; ನಿನ್ನ ಕೈಯಲ್ಲಿ ಚಕ್ರ ಹಿಡಿಸುತ್ತೇನೆ, ಹಾಗೆ ಯುದ್ಧ ಮಾಡುತ್ತೇನೆ ಎಂದು ನಾನು ಪ್ರತಿಜ್ಞೆ ಮಾಡಿದ್ದೆ.  ಚಕ್ರ ಹಿಡಿಯುವುದಿಲ್ಲ ಎಂದಿದ್ದೆ ನೀನು. ಆದರೆ ಈಗ ನನ್ನ ಪ್ರತಿಜ್ಞೆಯನ್ನು ಈಡೇರಿಸಲು ನೀನು ಚಕ್ರ ಹಿಡಿದಿರುವೆ. ನಿನ್ನನ್ನೇ ನೀನು ಮರೆತಿರುವೆ, ಆದರೆ  ನಿನ್ನ ಭಕ್ತನನ್ನು  ಮರೆತಿಲ್ಲ; ನೀನಲ್ಲದೆ  ನಮಗೆ  ಗತಿ ಇನ್ಯಾರು? "ಎನ್ನುತ್ತಾನೆ.  ಈ ಘಟನೆಯಲ್ಲಿ ಲೋಕಕಲ್ಯಾಣಕ್ಕಾಗಿ ಭಗವಂತನ ಕೋಪ ಮತ್ತು ಅದರ ಹಿಂದಿರುವ ಕರುಣೆ  ವ್ಯಕ್ತವಾಗಿದೆ.
ರಥಾಂಗರು  ಎಂದರೆ ಪಾಂಡವರು ಅಥವಾ ಧರ್ಮ ಯುದ್ಧ ಮಾಡುವವರು, ಅಂಥವರಿಗೆ 'ಆಣಿ' ಅಂದರೆ ಆಧಾರವಾಗಿ ನಿಲ್ಲುವ ಭಗವಂತ ರಥಾಂಗಪಾಣಿಃ.
999) ಅಕ್ಷೋಭ್ಯಃ
ಯಾರೂ ಮಣಿಸಲಾಗದ, ಕಂಗೆಡಿಸಲಾಗದ, ಯಾವ ಸಂಧರ್ಭದಲ್ಲೂ ಎದೆಗೆಡದ, ಎಂದೂ ನಿರ್ದಾರ ಬದಲಿಸದ ಸರ್ವಸಮರ್ಥ ಭಗವಂತ ಅಕ್ಷೋಭ್ಯಃ.   
1000) ಸರ್ವಪ್ರಹರಣಾಯುಧಃ
ದುಷ್ಟರ ದಮನಕ್ಕಾಗಿ ಎಲ್ಲಾ ಶಸ್ತ್ರಾಸ್ತ್ರಗಳನ್ನು ಆಯುಧವಾಗಿ ತೊಟ್ಟ ಭಗವಂತ ಸರ್ವಪ್ರಹರಣಾಯುಧಃ.
|| ಸರ್ವಪ್ರಹರಣಾಯುಧೋಂ ನಮಃ ಇತಿ ||
ಎಲ್ಲಾ ಶಸ್ತ್ರಾಸ್ತ್ರಗಳನ್ನು ಆಯುಧವನ್ನಾಗಿ ತೊಟ್ಟವನೆ ಓಂಕಾರವಾಚ್ಯನಾದವನು   ಎನ್ನುತ್ತ ಇದು ಅವನಿಗೆ ಅರ್ಪಿತವಾಗಿದೆ    

Vishnu sahasranama 985-992

ವಿಷ್ಣು ಸಹಸ್ರನಾಮ:
ಆತ್ಮಯೋನಿಃ ಸ್ವಯಂಜಾತೋ ವೈಖಾನಃ ಸಾಮಗಾಯನಃ
ದೇವಕೀನಂದನಃ ಸ್ರಷ್ಟಾ ಕ್ಷಿತೀಶಃ ಪಾಪನಾಶನಃ
985) ಆತ್ಮಯೋನಿಃ
ಆತ್ಮ ಎನ್ನುವುದಕ್ಕೆ ಅನೇಕ ಅರ್ಥಗಳಿವೆ, 'ಆತ್ಮನಸ್ತು  ಕಾಮಾಯ ಸರ್ವಮ್ ಪ್ರಿಯಮ್ ಭವತಿ' ಎಂದಿದ್ದಾರೆ. ಇಷ್ಟೇ ಅಲ್ಲದೆ ಯಾಜ್ಞವಲ್ಕ್ಯ ಹೇಳುವಂತೆ: "ಆತ್ಮಾವಾರೆ ದ್ರುಷ್ಟವ್ಯೋ, ಶ್ರೋತವ್ಯೋ ,ಮಂತವ್ಯೋ, ನಿದಿಧ್ಯಾಸಿತವ್ಯಃ". ಆತ್ಮ ಶಬ್ದ ಮೇಲ್ನೋಟಕ್ಕೆ ಶರೀರ,ಇನ್ನೂ ಆಳವಾಗಿ ಚಿಂತಿಸಿದರೆ ಮನಸ್ಸು, ಜೀವ, ಜೀವಾಭಿಮಾನಿ ದೇವತೆ ಚತುರ್ಮುಖ, ಗರುಡ-ಶೇಷರು, ಕೊನೆಗೆ ಪರಮಾತ್ಮ. ಪ್ರತಿಯೊಂದು ಜೀವಕ್ಕೆ ದೇಹವೆಂಬ ಮನೆಯನ್ನು ಕೊಟ್ಟು, ಅದರ ಮಧ್ಯದಲ್ಲಿ ಅನಾಹತ ಚಕ್ರವೆಂಬ ಶಕ್ತಿ ಕೇಂದ್ರ ನಿರ್ಮಿಸಿ, ಜೀವನನ್ನು  ಅಲ್ಲಿ ಕುಳ್ಳಿರಿಸಿ, ಪ್ರಾಣದೇವರ ಸಮೇತನಾಗಿ ಹೃತ್ಕಮಲ ಮಧ್ಯ ನೆಲೆಸಿ ನಮ್ಮನ್ನು ನಡೆಸುವ ಭಗವಂತ ಆತ್ಮಯೋನಿಃ.
986) ಸ್ವಯಂಜಾತಃ 
ತಾನೇ ತಾನಾಗಿ ಆವಿರ್ಭೂತನಾಗುವ ಭಗವಂತ ಸ್ವಯಂಜಾತಃ. ಆತನಿಗೆ ಆತನೇ ತಂದೆ-ತಾಯಿ. ಆದರೆ ಭಕ್ತವತ್ಸಲನಾದ ಭಗವಂತನಿಗೆ ಹೆಸರಿಡುವ ತಂದೆ ಮಾತ್ರ ಜ್ಞಾನಿಗಳು ಅಥವಾ ಆತನ ಭಕ್ತರು! 
987) ವೈಖಾನಃ
ಈ ಸಂಸಾರ ಬಂಧದಿಂದ ಬಿಡುಗಡೆಹೊಂದಿದ ವಿಖನಸರಿಗೂ ಕೂಡಾ ಆರಾಧ್ಯನಾದ ಮುಕ್ತಿ ನಿಯಾಮಕ ಭಗವಂತ ವೈಖಾನಃ.
988) ಸಾಮಗಾಯನಃ
ಸೃಷ್ಟಿಯ ಆದಿಯಲ್ಲಿ ಎಲ್ಲಾ ವೇದವನ್ನು ಚತುರ್ಮುಖನಿಗೆ ಹೇಳಿದ ಭಗವಂತನಿಗೆ ಸಾಮವೇದವೆಂದರೆ ಬಹಳ ಪ್ರೀತಿ. ಕೃಷ್ಣಾವತಾರದಲ್ಲಿ ತನ್ನ ಕೊಳಲಿನಿಂದ ಸಮಗಾನವನ್ನು ನುಡಿಸಿದ ಭಗವಂತ, ಸಾಮಗಃ (ಸಾಮಗಾನವನ್ನು ಹಾಡುವವ)ರಿಗೆ ಅಯನ(ಆಸರೆ).    
989) ದೇವಕೀನಂದನಃ
ಕೊಳಲಿನ ನಾದದಿಂದ ಸಾಮವನ್ನು ಹಾಡುವ ಕೃಷ್ಣ ದೇವಕೀನಂದನನಾಗಿ ಅವತರಿಸಿ ಬಂದ ಸೌಂದರ್ಯ ಮೂರ್ತಿ ಎನ್ನುವುದು ಈ ನಾಮದ ಮೇಲ್ನೋಟದ ಅರ್ಥ. ಇಲ್ಲಿ 'ದೇವ' ಎಂದರೆ ದೇವತೆಗಳು, 'ಕಂ' ಎಂದರೆ ಆನಂದ. ದೇವತೆಗಳಿಗೆ ಆನಂದವನ್ನು ಕೊಡುವ ವೇದವಾಗ್ಮಯ(ದೇವಕೀ)ವನ್ನು ಕೇಳಿ ಕುಣಿದಾಡುವ ಭಗವಂತ, ವೈದಿಕ ಸಾಹಿತ್ಯವೆಂಬ ಗರುಡನನ್ನೇರಿ ನಮ್ಮ ಬಳಿಗೆ ಬರುವ ದೇವಕೀನಂದನಃ.
990) ಸ್ರಷ್ಟಾ
ಎಲ್ಲವನ್ನು ಸೃಷ್ಟಿಮಾಡಿದ ಭಗವಂತ ಸ್ರಷ್ಟಾ.
991) ಕ್ಷಿತೀಶಃ
ಕ್ಷಿತಿ ಎಂದರೆ ಭೂಮಿ, ಅಥವಾ ಸಮಸ್ತ ಬ್ರಹ್ಮಾಂಡ. ಇಂತಹ ಬ್ರಹ್ಮಾಂಡದ ಒಡೆಯ ಭಗವಂತ ಕ್ಷಿತೀಶಃ. ಪ್ರತಿಯೊಂದು ವಸ್ತುವಿನ ಅಳಿವು-ಉಳಿವು ಆತನ ಅಧೀನ. ಪ್ರತಿಯೊಂದು ಕ್ರಿಯೆಯನ್ನು ಮಾಡಿಸುವ ಪ್ರೇರಕ ಭಗವಂತ ಕ್ಷಿತೀಶಃ.   
992) ಪಾಪನಾಶನಃ
ನಮಗೆ ಪಾಪದ ಲೇಪ ಅಂಟುವುದು  'ನಾನು' ಎನ್ನುವ ಅಹಂಕಾರವಿದ್ದಾಗ ಮಾತ್ರ. ನಾನು ಏನೂ ಅಲ್ಲ, ನನ್ನೊಳಗಿರುವ ಭಗವಂತ ಸರ್ವ ನಿಯಾಮಕ ಎಂದು ಅರಿತಾಗ, ಭಗವಂತ ಸರ್ವ ಪಾಪಗಳನ್ನು ನಾಶ ಮಾಡುತ್ತಾನೆ. ಅಥವಾ ನಮಗೆ ಪಾಪದ ಲೇಪವಿಲ್ಲದಂತೆ ಮಾಡುತ್ತಾನೆ. ಇದೇ ಮಾತನ್ನು ಶ್ರೀಕೃಷ್ಣ ಪಾಪಪ್ರಜ್ಞೆಯಲ್ಲಿ ನಿಂತ ಅರ್ಜುನನಿಗೆ ಯುದ್ಧರಂಗದಲ್ಲಿ ಉಪದೇಶಿಸುತ್ತಾನೆ. ಆ ಕಾರಣಕ್ಕಾಗಿ ಅರ್ಜುನ ಮಾಡಿದ ಯುದ್ಧ ಧರ್ಮವಾಯಿತು, ಅಹಂಕಾರದಿಂದ ಯುದ್ಧ ಮಾಡಿದ ದುರ್ಯೋದನನಿಗೆ ಯುದ್ಧದ ಸರ್ವ ಪಾಪವು ಅಂಟಿತು. ಹೀಗೆ ಅಹಂಕಾರವಿಲ್ಲದೆ ಭಗವಂತನಲ್ಲಿ ಶರಣಾದ ಭಕ್ತರ ಪಾಪವನ್ನು ಕಳೆದು, ಪಾಪಿಗಳ ಸಂಹಾರ ಮಾಡುವ ಭಗವಂತ ಪಾಪನಾಶನಃ.

Vishnu Sahasranama 976-984

ವಿಷ್ಣು ಸಹಸ್ರನಾಮ:
ಯಜ್ಞಭೃದ್ಯಜ್ಞಕೃದ್ಯಜ್ಞೀ ಯಜ್ಞಭುಗ್ಯಜ್ಞಸಾಧನಃ
ಯಜ್ಞಾಂತಕೃದ್ಯಜ್ಞಗುಹ್ಯಮನ್ನಮನ್ನಾದ ಏವ ಚ
976) ಯಜ್ಞಭೃತ್
ಯಜ್ಞವನ್ನು ಹಾಗು ಯಜ್ಞಾಭಿಮಾನಿ ದೇವತೆಯನ್ನು ಧಾರಣೆ ಮಾಡಿದ ಭಗವಂತ ಯಜ್ಞಭೃತ್. ಭಗವಂತ ಯಜ್ಞ ಪಾಲಕ, ಇಂದ್ರ ಹಾಗು ಇಂದ್ರಪುತ್ರ (ಜಯಂತ ಅಥವಾ ಯಜ್ಞ)ನ ಪಾಲಕ.
977) ಜ್ಞಕೃತ್
ಇಲ್ಲಿ  'ಕೃತ್' ಎಂದರೆ ಮಾಡಗೊಡುವವನು ಎನ್ನುವುದು ಒಂದು ಅರ್ಥವಾದರೆ ಇನ್ನೊಂದು ಅರ್ಥದಲ್ಲಿ 'ಮಾಡದಂತೆ ಮಾಡುವವನು'; ಯಜ್ಞವನ್ನು ಮಾಗೊಡುವವನೂ ಭಗವಂತ, ಯಜ್ಞ ಮಾಡದಂತೆ ಮಾಡುವವನೂ ಅವನೇ!  
978) ಜ್ಞೀ
ಯಜ್ಞಉಳ್ಳವನು, ಯಜ್ಞಗಳ ಒಡೆಯ. ಯಜ್ಞದ ಎಲ್ಲಾ ಹೊಣೆಗಾರಿಕೆ, ಅದರ ಸ್ವಾತಂತ್ರ್ಯ, ಫಲವನ್ನು ಕೊಡುವವನು, ಯಜ್ಞವನ್ನು ಸ್ವೀಕರಿಸುವವನು, ನಮ್ಮ ಒಳಗೆ-ಹೊರಗೆ ಇದ್ದು ಯಜ್ಞದ ಒಂದೊಂದು ಕ್ರಿಯೆಯಲ್ಲಿ ತುಂಬಿ ಯಜ್ಞವನ್ನು ನಿರ್ವಹಣೆ ಮಾಡುವ ಭಗವಂತ ಜ್ಞೀ.
979) ಯಜ್ಞಭುಕ್
ಹಿಂದೆ ಹೇಳಿದಂತೆ ಯಜ್ಞದಲ್ಲಿ ಯಾವ ಆಹುತಿಯನ್ನು ಯಾವ ದೇವತೆಯ ಹೆಸರಿನಲ್ಲಿ ಅರ್ಪಿಸಿದರೂ ಅದು ಮೊದಲು ಸೇರುವುದು ಭಗವಂತನನ್ನು. ಗೀತೆಯಲ್ಲಿ ಹೇಳಿದಂತೆ :
ಅಹಂ ಹಿ ಸರ್ವಯಜ್ಞಾನಾಂ ಭೋಕ್ತಾ ಚ ಪ್ರಭುರೇವ ಚ    ।
ನ ತು ಮಾಮಭಿಜಾನನ್ತಿ ತತ್ತ್ವೇನಾತಶ್ಚ್ಯವನ್ತಿ ತೇ ॥ಅ-೯, ಶ್ಲೋ-೨೪॥
ಯಜ್ಞದಲ್ಲಿ ಅರ್ಪಿಸುವ ಸರ್ವ ಹವಿಸ್ಸು ಭಗವಂತನ ಮುಖೇನವೇ ಇತರ ದೇವತೆಗಳನ್ನು ಸೇರುವುದು. ಆತ ಯಜ್ಞ ಪಾಲಕ; ಸರ್ವ ಯಜ್ಞ ಭೋಕ್ತಾರ.
ಕರೋಮಿ  ಯದ್ಯತ್  ಸಕಲಂ  ಪರಸ್ಮೈ  ನಾರಾಯಣಾಯೇತಿ  ಸಮರ್ಪಯಾಮಿ.
ನಾವು ಏನು ಮಾಡಿದರೂ ಅದು ನಾರಾಯಣನಿಗೆ ಅರ್ಪಿತ.
980) ಜ್ಞಸಾಧನಃ
ನಿಯಮಿತವಾದ ಯಜ್ಞದಲ್ಲಿ ಒಟ್ಟು ಹದಿನೆಂಟು ಮಂದಿ ಸೇರಿ ಯಜ್ಞ ಮಾಡುತ್ತಾರೆ. ನಾಲ್ಕು ಮಂದಿ ಋಗ್ವೇದದವರು, ನಾಲ್ಕು ಮಂದಿ ಯಜುರ್ವೇದದವರು.ನಾಲ್ಕು ಮಂದಿ ಸಾಮ ವೇದದವರು, ಬ್ರಹ್ಮತ್ತ್ವಕ್ಕೆ ಒಬ್ಬ ಮುಖ್ಯಸ್ತ ಹಾಗು ಆತನಿಗೆ ಮೂರು ಮಂದಿ ಸಹಾಯಕರು. ಇನ್ನು ಯಜ್ಞ ಮಾಡಿಸುವ ಯಜಮಾನ ಹಾಗು ಆತನ ಪತ್ನಿ. ಒಟ್ಟಿಗೆ ಹದಿನೆಂಟು ಮಂದಿ. ಇಲ್ಲಿ ಬ್ರಹ್ಮತ್ತ್ವ ವಹಿಸಿರುವವನು ಯಾವ ಮಂತ್ರವನ್ನೂ ಹೇಳುವುದಿಲ್ಲ, ಆದರೆ ಯಜ್ಞದ ವಿಧಿ-ವಿಧಾನದಲ್ಲಿ  ಯಾವುದೇ ಲೋಪವಾದರೂ ಸಹ ಆತ ಜವಾಬ್ದಾರಿ.
ಹಿಂದೆ ಪ್ರಮುಖವಾಗಿ ಎರಡು ತರಹದ ಯಾಗ ಮಾಡುತ್ತಿದ್ದರು. ಒಂದು ಶುದ್ಧ ಶಾಖಾಹಾರಿಗಳ ಯಾಗ ಹಾಗು ಇನ್ನೊಂದು ಮಾಂಸಾಹಾರಿಗಳು ಮಾಡುವ ಯಾಗ. ಆಗಿನ ಕಾಲದಲ್ಲಿ ಪ್ರಮುಖವಾಗಿ ಯಾಗ ಮಾಡುತ್ತಿದ್ದವರು ಕ್ಷತ್ರಿಯರು, ಅವರು ಮಾಂಸಹಾರಿಗಳಾಗಿದ್ದರು. ನಾವು ಏನು ತಿನ್ನುತ್ತೆವೋ ಅದನ್ನು ದೇವರಿಗೆ ಅರ್ಪಿಸಿ ಯಜ್ಞಶೇಷವೆಂದು ತಿನ್ನುವುದು ಪ್ರಾಚೀನ ಸಂಪ್ರದಾಯವಾಗಿತ್ತು. ಕ್ಷತ್ರಿಯರು ಯಾಗದಲ್ಲಿ ಹದಿನೆಂಟು ಬಗೆಯ ಪ್ರಾಣಿಗಳನ್ನು (ಒಂಬತ್ತು ಸಾಕು ಪ್ರಾಣಿ ಹಾಗು ಒಂಬತ್ತು ಕಾಡು ಪ್ರಾಣಿ) ಭಗವಂತನಿಗೆ ಬಲಿಯಾಗಿ ಅರ್ಪಿಸಿ ಯಾಗ ಮಾಡುತ್ತಿದ್ದರು.
ಭಗವಂತ, ಯಜ್ಞ ಮಾಡುವವರಲ್ಲಿರುವವನೂ ಅವನೇ, ಹವಿಸ್ಸಿನಲ್ಲಿರುವವನೂ ಅವನೇ, ಯಜ್ಞವನ್ನು ಸ್ವೀಕಾರ ಮಾಡುವವನೂ ಅವನೇ. ಇಂತಹ ಭಗವಂತ ಯಜ್ಞ ಸಾಧನಃ.  
981) ಯಜ್ಞಾಂತಕೃತ್
ಯಾವುದು ನಿಜವಾದ ಯಜ್ಞ, ಯಾವುದು ತಪ್ಪು, ಯಾವುದು ಸರಿ, ಯಾವುದು ಯಜ್ಞವಲ್ಲ ಎಂದು ಕೊನೆಯದಾಗಿ ನಿರ್ಧರಿಸುವವನು ಭಗವಂತ. ಆತ ಮೆಚ್ಚದ ಯಾವುದೇ ಪೂಜೆ ಯಜ್ಞವಾಗದು. ಧರ್ಮಕ್ಕೆ ಚ್ಯುತಿಬರುವಂತಹ, ಸ್ವಾರ್ಥದಿಂದ ಅಹಂಕಾರದಿಂದ ಮಾಡುವ ಯಜ್ಞವನ್ನು ಆತ ಸ್ವೀಕರಿಸದೇ ದ್ವಂಸ ಮಾಡುತ್ತಾನೆ. ಇದಕ್ಕೆ ಉತ್ತಮ ಉದಾಹರಣೆ ದಕ್ಷಯಜ್ಞ. ದಕ್ಷ ನಿಯಮಿತವಾಗಿ ಯಜ್ಞ ಪ್ರಾರಂಬಿಸಿದ. ಆದರೆ ಅಹಂಕಾರದಿಂದ ಶಿವನನ್ನು ಅಪಮಾನ ಮಾಡಿದ. ಇಂತಹ ಅಹಂಕಾರಬರಿತ ಯಜ್ಞವನ್ನು ಭಗವಂತ ಸ್ವೀಕರಿಸದೇ ವೀರಭದ್ರನ ಮುಖೇನ ಸಂಪೂರ್ಣ ಯಜ್ಞವನ್ನು ದ್ವಂಸ ಮಾಡಿದ. ಹಿಂದೆ ಹೇಳಿದಂತೆ ಶಿವಶಕ್ತಿ-ವಿಷ್ಣುಶಕ್ತಿ ಹಾಲಿನಲ್ಲಿರುವ ಬೆಣ್ಣೆಯಂತೆ, ಇಲ್ಲಿ ನಾವು ಅಪಮಾನವಾಗುವಂತೆ ವರ್ತಿಸಿದರೆ ಅದನ್ನು ಭಗವಂತ ಎಂದೂ ಮೆಚ್ಚುವುದಿಲ್ಲ. ಭಗವಂತನಿಗೆ ಅರ್ಪಿಸಿ ಮಾಡುವ ಪ್ರತಿಯೊಂದು ಕೆಲಸವೂ ಯಜ್ಞ. ಅಹಂಕಾರದಿಂದ ಮಾಡುವ ಯಾವ ಯಜ್ಞವೂ ಯಜ್ಞವಲ್ಲ. ಹೀಗೆ ಯಜ್ಞದ ಅಂತ್ಯವನ್ನು ನಿರ್ಧರಿಸುವ ಭಗವಂತ ಯಜ್ಞಾಂತಕೃತ್.
982) ಜ್ಞಗುಹ್ಯಮ್
ಜಗತ್ತಿನಲ್ಲಿ ನಡೆಯುವ ಎಲ್ಲಾ ಯಜ್ಞದ ರಹಸ್ಯ ತಿಳಿದ, ಯಜ್ಞದಲ್ಲಿ ನಿಗೂಢವಾಗಿ ತುಂಬಿರುವ ಭಗವಂತ ಜ್ಞಗುಹ್ಯಮ್.
983) ಅನ್ನಮ್
ಅನ್ನಮ್ ಅಂದರೆ ಭೋಜ್ಯ. ತೈತ್ತಿರೀಯ  ಉಪನಿಷತ್ತಿನಲ್ಲಿ  ಬರುವ ಈ ಶ್ಲೋಕ ಈ ನಾಮವನ್ನು ಹಾಗು ಮುಂದಿನ ನಾಮವನ್ನು ಸ್ಪಷ್ಟವಾಗಿ ಹೇಳುತ್ತದೆ. 
ಅಹಮ್  ಅನ್ನಮ್  ಅಹಮ್  ಅನ್ನಮ್  ಅಹಮ್  ಅನ್ನಮ್  |
ಅಹಮ್ ಅನ್ನಾ
ದೋऽಹಮ್  ಅನ್ನಾದೋऽಹಮ್ ಅನ್ನಾದಃ   |
"ನಾನೆ ಅನ್ನ ನಾನೆ ಅನ್ನಾದ"; ಭೋಜ್ಯವಾಗಿ ಈ ಪ್ರಪಂಚದಲ್ಲಿ ತುಂಬಿರುವ ಸಮಸ್ತ ವಸ್ತುಗಳ ಒಳಗೆ ಚೈತನ್ಯವಾಗಿ ತುಂಬಿರುವ ಭಗವಂತ ಅನ್ನಮ್. ಅನ್ನದ ಅಭಿಮಾನಿ ದೇವತೆಯಾದ ಚತುರ್ಮುಖನಲ್ಲಿ ಸನ್ನಿಹಿತನಾಗಿರುವ ಭಗವಂತ ಅನ್ನಮ್.
984) ಅನ್ನಾದ
ಸರ್ವ
ಭೂಜ್ಯವನ್ನು ಜೀವದೊಳಗಿದ್ದು ಭೋಗಿಸುವ, ಅನ್ನದ ಅಭಿಮಾನಿ ದೇವತೆ ಚತುರ್ಮುಖನನ್ನೂ  ಕೂಡಾ ಮಹಾ ಪ್ರಳಯದಲ್ಲಿ ಕಬಳಿಸುವ ಭಗವಂತ ಅನ್ನಾದ.
ಈ ಶ್ಲೋಕದಲ್ಲಿ ಪರಸ್ಪರ ವಿರುದ್ಧ ಅರ್ಥವನ್ನು ಕೊಡುವ
'ಏವ, ಚ' ಎನ್ನುವ ಎರಡು ಅವ್ಯಯಗಳಿವೆ. ಎಂದರೆ ಕೂಡಾ, ಏವ ಎಂದರೆ ಅವನದ್ದೇ ಎನ್ನುವ ಅರ್ಥವನ್ನು ಕೊಡುತ್ತವೆ. ಅಂದರೆ ಈ ಎಲ್ಲಾ ಹೆಸರುಗಳೂ ನಿನ್ನವೇ ಆದರೂ ಕೂಡಾ ಬೇರೆಯವರದ್ದೂ ಹೌದು. ಏಕೆಂದರೆ ಭಗವಂತನನ್ನು ಹೇಳದ ಶಬ್ಧ ಈ ಪ್ರಪಂಚದಲ್ಲಿಲ್ಲ. ಸರ್ವ ಶಬ್ಧವೂ ಕೂಡಾ ಮುಖ್ಯವಾಗಿ ಭಗವಂತನನ್ನು ಹೇಳುತ್ತವೆ-ನಂತರ ಇತರರನ್ನು ಹೇಳುತ್ತವೆ.

Wednesday, December 22, 2010

Vishnu Sahasranama 967-975

ವಿಷ್ಣು ಸಹಸ್ರನಾಮ :
ಭೂರ್ಭುವಃಸ್ವಸ್ತರುಸ್ತಾರಃ ಸವಿತಾ ಪ್ರಪಿತಾಮಹಃ
ಯಜ್ಞೋ ಯಜ್ಞಪತಿರ್ಯಜ್ವಾ ಯಜ್ಞಾಂಗೋ ಯಜ್ಞವಾಹನಃ
967) ಭೂರ್ಭುವಃಸ್ವಸ್ತರುಃ
ಭೂಃ+ಭುವಃ+ಸುವಃ+ಸ್ತರುಃ; ಈ ನಾಮವನ್ನು ನಾಲ್ಕು ನಾಮವಾಗಿ ಕಾಣಬಹುದು.  ಭೂಮಿ,ಆಕಾಶ ಹಾಗು ಸ್ವರ್ಗದಲ್ಲಿ ತುಂಬಿ ನಿಂತಿರುವ ಭಗವಂತನ ವಿಶ್ವ ರೂಪದ ವಿರಾಟ ಸ್ವರೂಪದ ಕಲ್ಪನೆಯನ್ನು ಈ ನಾಮ ಕೊಡುತ್ತದೆ. ಭೂಮಿ ಆಕಾಶ ಹಾಗು ಸ್ವರ್ಗದಲ್ಲಿ ತುಂಬಿರುವ, ಜ್ಞಾನಾನಂದದಿಂದ ಪರಿಪೂರ್ಣನಾದ  ಭಗವಂತ ನಮ್ಮನ್ನು ಸಂಸಾರ ಸಾಗರದಿಂದ ಪಾರು ಮಾಡುವವನು.     
968) ತಾರಃ
ಎಲ್ಲರನ್ನೂ ಸಂಸಾರ ದುಃಖದಿಂದ, ಸಮಸ್ಯೆಯಿಂದ ಪಾರುಮಾಡುವ, ಸಂಸಾರದಿಂದ ದಾಟಿಸಿ ನಮಗೆ ಸಂಪೂರ್ಣವಾದ ಸ್ವರೂಪಾನಂದವನ್ನು ಕೊಡುವ ಭಗವಂತ ತಾರಃ.
969) ಸವಿತಾ
ಸೂರ್ಯನಾರಾಯಣನಲ್ಲಿ ಸನ್ನಿಹಿತನಾಗಿರುವ ಗಾಯತ್ರಿಪ್ರತಿಪಾಧ್ಯ ಭಗವಂತ ಈ ಜಗತ್ತನ್ನು ಹೆತ್ತ ತಂದೆ. ಈ ಲೋಕದ ತಂದೆಯೂ-ತಾಯಿಯೂ ಅವನೇ .
970) ಪ್ರಪಿತಾಮಹಃ
ಎಲ್ಲರಿಗೂ ಮೂಲ ಕಾರಣನಾದ ಭಗವಂತ ಜಗದ ಮುತ್ತಜ್ಜ.  
971) ಯಜ್ಞಃ
ಜ್ಞಾನರೂಪಿಯಾಗಿ ಎಲ್ಲೆಡೆ ಇರುವ ಭಗವಂತ, ಎಲ್ಲಾ ಕ್ರಿಯೆಗಳಿಂದ ಎಲ್ಲರೂ ಆರಾಧಿಸಬೇಕಾದ, ಯಜ್ಞದ ಅಂತರ್ಯಾಮಿ.  
972) ಯಜ್ಞಪತಿಃ
ಯಜ್ಞಗಳ ಸ್ವಾಮಿ ಹಾಗು ಪಾಲಕ ಭಗವಂತ ಯಜ್ಞಪತಿಃ. ಯಜ್ಞವನ್ನು ಸ್ವೀಕರಿಸಿ ಫಲ ಕೊಡುವವನು.
973) ಜ್ವಾ
ನಮ್ಮಿಂದ ಯಜ್ಞ ಮಾಡಿಸುವ ಭಗವಂತ ಜ್ವಾ. ಯಜ್ಞ ಮಾಡುವ ಯಜಮಾನನೊಳಗೆ ಅಂತರ್ಯಾಮಿಯಾಗಿದ್ದು ಯಜ್ಞ ಮಾಡಿಸುವವನೂ ಅವನೇ!
974) ಯಜ್ಞಾಂಗಃ
ಯಜ್ಞದಲ್ಲಿ ಬಳಸುವ ಹವಿಸ್ಸುಗಳನ್ನು ತನ್ನ ಅಂಗಗಳಿಂದ ಸೃಷ್ಟಿಸಿದ ಭಗವಂತ ಯಜ್ಞಾಂಗಃ.
975) ಯಜ್ಞವಾಹನಃ
ಯಜ್ಞವನ್ನು ವಾಹನವಾಗಿಸಿಕೊಂಡು ಬರುವವ. ಏಲ್ಲಿ ಯಜ್ಞ ನೆಡೆಯುತ್ತಿರುತ್ತದೋ ಅಲ್ಲಿ ಭಗವಂತನ ವಿಶೇಷ ಸನ್ನಿಧಾನವಿರುತ್ತದೆ. ಇಲ್ಲಿ ಯಜ್ಞ ಅಂದರೆ ಅಗ್ನಿ ಮುಖೇನ ಮಾಡುವ ಯಜ್ಞ ಮಾತ್ರ ಅಲ್ಲ, ಜ್ಞಾನಯಜ್ಞ ಕೂಡಾ ಒಂದು ವಿಶಿಷ್ಟವಾದ ಯಜ್ಞ,    

Vishnu Sahasranama 959-966

ವಿಷ್ಣು ಸಹಸ್ರನಾಮ:
ಪ್ರಮಾಣಂ ಪ್ರಾಣನಿಲಯಃ ಪ್ರಾಣಭೃತ್ ಪ್ರಾಣಜೀವನಃ
ತತ್ತ್ವಂ ತತ್ತ್ವವಿದೇಕಾತ್ಮಾ ಜನ್ಮಮೃತ್ಯುಜರಾತಿಗಃ
959) ಪ್ರಮಾಣಮ್
ಭಗವಂತ ಸರ್ವ ಪ್ರಮಾಣಗಳ ನೆಲೆ. ಎಲ್ಲವನ್ನು ಹುಟ್ಟಿಸುವವನು, ಎಲ್ಲವನ್ನು ಮುಗಿಸುವವನು ಆದ, ಎಲ್ಲಾ ಯಥಾರ್ಥಜ್ಞಾನದ ಕಡಲಾದ ಭಗವಂತ  ಪ್ರಮಾಣಮ್. ನಚಿಕೇತನಿಗೆ ಯಮ- ಎಲ್ಲಾ ಪ್ರಶ್ನೆಗಳಿಗೆ ಉತ್ತರವಿರುವ, ಪ್ರಪಂಚದ ಸಾರ ಸಂಗ್ರಹವಾದ ಬೀಜಾಕ್ಷರವನ್ನು ಹೇಳುವಾಗ ಭಗವಂತನನ್ನು ಕುರಿತು ಈ ರೀತಿ ಹೇಳುತ್ತಾನೆ: 
ಸರ್ವೇ ವೇದಾ ಯತ್ ಪದಮಾನನಂತಿ
ತಪಮ್ಸಿ  ಸರ್ವಾಣಿ ಚ ಯದ್ ವದಂತಿ ,
ಯದ್  ಇಚ್ಚಂತೋ   ಬ್ರಹ್ಮಚರ್ಯಂ   ಚರಂತಿ ,
ತತ್  ತೇ  ಪದಂ  ಸಂಗ್ರಹೇನ  ಬ್ರವೀಮಿ:
ಓಂ ಇತ್ಯೇತತ್.
ಅಂದರೆ " ಸಮಸ್ತ ವೇದದ ಸಮಸ್ತ ಮಂತ್ರ, ವೇದದ ಪ್ರತಿಯೊಂದು ವಾಕ್ಯ, ಪ್ರತಿಯೊಂದು ಶಬ್ಧ, ಈ ಪ್ರಪಂಚದಲ್ಲಿರುವ ಪ್ರತಿಯೊಂದು ನಾದ ಅಂತತಃ ಭಗವಂತನನ್ನು ಹೇಳುತ್ತದೆ. ಸರ್ವ ತಪಗಳು(ಆಲೋಚನೆಗಳು), ಭಗವಂತನನ್ನೇ ಹೇಳುತ್ತವೆ. ಇಂತಹ ಭಗವಂತನ ಅರಿವು ಬಂದಾಗ ಈ ಪ್ರಪಂಚದಲ್ಲಿರುವ ಪ್ರತಿಯೊಂದು ತರ್ಕಗಳು ಆ ಭಗವಂತನನ್ನೇ ಪ್ರಮಾಣಿಕರಿಸುತ್ತವೆ".     
960) ಪ್ರಾಣನಿಲಯಃ.
ಭಗವಂತ ಇರುವುದು ಪ್ರಾಣತತ್ವದಲ್ಲಿ. ಭಗವಂತನನ್ನು ಅರಿಯಬೇಕಾದರೆ ಮೊದಲು ಪ್ರಾಣತತ್ವದ ಅರಿವು ಬೇಕು. ನಮ್ಮೊಳಗಿದ್ದು, ನಮಗೆ ಉಸಿರಾಡಿಸುವ ಪ್ರಾಣದೇವರೊಳಗೆ ಭಗವಂತನಿದ್ದಾನೆ. ಆತ ಪ್ರಾಣನಿಲಯಃ.
961) ಪ್ರಾಣಭೃತ್
ನಮ್ಮನ್ನು ಧರಿಸಿದವನು ಪ್ರಾಣನಾದರೆ, ಪ್ರಾಣದೇವರನ್ನು ಧರಿಸಿದವನು ಭಗವಂತ. ಆತ ಪ್ರಾಣಭೃತ್.
962) ಪ್ರಾಣಜೀವನಃ
ಪ್ರಾಣ ಶಕ್ತಿಯ ಮೂಲಕ ನಮಗೆಲ್ಲಾ ಬದುಕು ಕೊಟ್ಟವ, ಪ್ರಾಣ ದೇವರಿಗೂ ಕೂಡಾ ಬದುಕು ಕೊಟ್ಟವ ಭಗವಂತ. ಪ್ರಾಣ ದೇವರು ನಮ್ಮನ್ನು ಉಸಿರಾಡಿಸಿದರೆ, ಪ್ರಾಣದೇವರನ್ನು ಉಸಿರಾಡಿಸುವವನು ಪ್ರಾಣಜೀವನಃ ಭಗವಂತ.
963) ತತ್ವಮ್
ತತವಾದ 'ವಾ'; ವಾ ಎಂದರೆ ವಿಜ್ಞಾನ. ಭಗವಂತ ಜ್ಞಾನದ ಕಡಲು. ಅಂತಹ ಭಗವಂತನನ್ನು ಹುಡುಕಿ ಅನುಭವಿಸಬೇಕು. ಅದು ಕಣ್ಣಿಗೆ ಕಾಣುವ ವಸ್ತುವಲ್ಲ. ಅಪರಂಪಾರವಾದ ಜ್ಞಾನದ ಕಡಲನ್ನು ನಾವು ಸ್ವರೂಪಭೂತವಾಗಿ ಅನುಭವಿಸಬೇಕು.    
964) ತತ್ವವಿತ್
ಜ್ಞಾನದ ಕಡಲಾದ ಮಹಾ ತತ್ವವನ್ನು ಸಂಪೂರ್ಣ ತಿಳಿದವರಿಲ್ಲ. ಅದನ್ನು ಸಂಪೂರ್ಣ ಬಲ್ಲವನು ಅವನೊಬ್ಬನೆ. 
965) ಎಕಾತ್ಮಾ
ಭಗವಂತನೊಬ್ಬನೇ ಆತ್ಮ ಶಬ್ಧವಾಚ್ಯ. ಸರ್ವ ಆತ್ಮಗಳ ಪ್ರಧಾನ. ಅನಂತ ಸುಖವನ್ನು ಕೊಡಬಲ್ಲ, ಜ್ಞಾನಾನಂದಮಯವಾದ ಏಕೈಕ ತತ್ವ ಭಗವಂತ ಎಕಾತ್ಮಾ.
966) ಜನ್ಮಮೃತ್ಯುಜರಾತಿಗಃ
ಜನ್ಮ-ಮೃತ್ಯ-ಷಡಾತ್ಮಗಳನ್ನು ದಾಟಿದವನು. ಇಲ್ಲಿ ಜರಾ ಷಡಾತ್ಮವನ್ನು ಸೂಚಿಸುತ್ತದೆ. ಅವುಗಳೆಂದರೆ ಮೋಹ , ಶೋಕ ,ಕ್ಷುತ್ (ಹಸಿವು), ಪಿಪಾಸು(ಬಾಯಾರಿಕೆ) , ಜರ(ಅಜ್ಞಾನ)  ಮತ್ತು ವ್ಯಾಧಿ. ಭಗವಂತ ಇವುಗಳೆಲ್ಲವುದರ ಆಚೆಗಿರುವವನು ಹಾಗು ನಮ್ಮನ್ನು ಇದರಿಂದ ಪಾರುಮಾಡುವವನು. ನಮ್ಮೊಳಗೆ ಇರುವ ಭಗವಂತನಿಗೆ ಎಂದೂ ಇದರ ಲೇಪವಿಲ್ಲ. ಆತ ಸರ್ವವನ್ನೂ ಮೀರಿನಿಂತ ಜನ್ಮಮೃತ್ಯುಜರಾತಿಗಃ.

Tuesday, December 21, 2010

Vishnu Sahasranama 950-958

ವಿಷ್ಣು ಸಹಸ್ರನಾಮ:
ಆಧಾರನಿಲಯೋಧಾತಾ ಪುಷ್ಪಹಾಸಃ ಪ್ರಜಾಗರಃ
ಊರ್ಧ್ವಗಸ್ಸತ್ಪಥಾಚಾರಃ ಪ್ರಾಣದಃ ಪ್ರಣವಃ ಪಣಃ
950) ಆಧಾರನಿಲಯಃ
ಇಡೀ ಜಗತ್ತಿನ ಆಧಾರ ಭಗವಂತ. ಆತ ಜಗತ್ತಿಗೆ ಶಾಶ್ವತ ನೆಲೆಕೂಡಾ ಹೌದು.
951) ಧಾತಾ(ಅಧಾತಾ)
ಜಗತ್ತನ್ನು ಧರಿಸಿ ಪೋಷಣೆ ಮಾಡುವ ಭಗವಂತ ಧಾತಾ. ಸಂಸಾರದಲ್ಲಿ ಜೀವರನ್ನು ಧರಿಸಿ, ಮುಕ್ತಿಯಲ್ಲಿ ಪೋಷಿಸುವ ಭಗವಂತ ಅಧಾತ ಕೂಡಾ ಹೌದು. ಏಕೆಂದರೆ ಆತನನ್ನು ಧರಿಸಿದ ಇನ್ನೊಂದು ಶಕ್ತಿ ಇಲ್ಲ. ತಾನೇ ತಾನಾಗಿ ನಿಂತು ವಿಶ್ವ ಧಾರಣೆ ಮಾಡಿದ ಭಗವಂತ ಅಧಾತ.   
952) ಪುಷ್ಪಹಾಸಃ
ಈ ನಾಮವನ್ನು ಕೇಳಿದ ತಕ್ಷಣ ಹೊಳೆಯುವ ಅರ್ಥ 'ಹೂವಿನಂತಹ ನಗುಮೊಗದವನು'. ಭಗವಂತನ ಮುಖದಲ್ಲಿ ಸದಾ ತುಂಬಿದ ಮಂದಹಾಸವಿರುತ್ತದೆ. ನೋಡಿದವರ ಹೃದಯವನ್ನು ಸೂರೆಗೊಳ್ಳುವ ಚೆಲುನಗು. ಭಗವಂತನ ಮೊಗದಲ್ಲಿ ನಗುವಿರದ ಕ್ಷಣವಿಲ್ಲ. ಮಹಾಭಾರತದ ಘೋರಯುದ್ಧದ ಮೊದಲು ಅರ್ಜುನ ಕುಸಿದುಬಿದ್ದಾಗಲೂ ಸಹ ಕೃಷ್ಣ ನಗುತ್ತಿದ್ದ! ಆತನ ನಗು ಎಲ್ಲರನ್ನೂ ಮರಳುಗೊಳಿಸುವ,ನಮ್ಮನ್ನು ಪರಿಪುಷ್ಟರನ್ನಾಗಿ ಮಾಡುವ ಮಾಂಗಲಿಕ ನಗು. ಇಂತಹ ನಗುವಿನ ಮೂರ್ತಿಯನ್ನು ನಮ್ಮ ಧ್ಯಾನದಲ್ಲಿ ಕಾಣುವ ಪ್ರಯತ್ನಮಾಡಬೇಕು.         
953) ಪ್ರಜಾಗರಃ
ಭಕ್ತ ಜನರ ಭಕ್ತಿಯ ಕರೆಗೆ ಸದಾ ಎಚ್ಚರದಲ್ಲಿದ್ದು ಕಾಯುವ ಭಗವಂತ ಎಂದೂ ನಿದ್ರಿಸುವುದಿಲ್ಲ. ಆತನ ನಿದ್ರೆ ಎಂದರೆ ಕೇವಲ ಯೋಗನಿದ್ರೆ. ಸೃಷ್ಟಿ-ಸ್ಥಿತಿಯಲ್ಲಿ ಜನರಕ್ಷಕನಾಗಿದ್ದು, ಪ್ರಳಯ ಕಾಲದಲ್ಲಿ ಪ್ರಜಾ 'ಗರಣ' ಮಾಡುವ ಭಗವಂತ ಮೋಕ್ಷಪ್ರದ.      
954) ಊರ್ಧ್ವಗಃ
ಭಗವಂತ  ಎಲ್ಲಕ್ಕಿಂತ ಮೇಲಿರುವವನು. ಗೀತೆಯಲ್ಲಿ ಹೇಳಿದಂತೆ:
ಊರ್ಧ್ವಮೂಲಮಧಃಶಾಖಮಶ್ವತ್ಥಂ ಪ್ರಾಹುರವ್ಯಯಮ್    ।
ಛನ್ದಾಂಸಿ ಯಸ್ಯ ಪರ್ಣಾನಿ ಯಸ್ತಂ ವೇದ ಸ ವೇದವಿತ್    ॥ ಅ-೧೫, ಶ್ಲೋ-೧॥
ಸಂಸಾರ ವೃಕ್ಷದ ಬುಡ ಭಗವಂತ. ಆತ ಸದಾ ಉನ್ನತಿಯಲ್ಲಿರುತ್ತಾನೆ.ನಾವು ಎತ್ತರಕ್ಕೇರಿದಾಗ(ಮುಕ್ತಿ), ಅಲ್ಲಿಯೂ ಕೂಡಾ ಆತ ಎತ್ತರದಲ್ಲಿದ್ದು ನಮ್ಮನ್ನು ಪೋಷಿಸುತ್ತಾನೆ. ಇಂತಹ ಭಗವಂತ. ಊರ್ಧ್ವಗಃ.
955) ಸತ್ಪಥಾಚಾರಃ
ಸತ್+ಪಥ ಎಂದರೆ ಪ್ರಾಚೀನ ಸಂಸ್ಕೃತದಲ್ಲಿ 'ನಕ್ಷತ್ರ-ಪಥ'. ನಕ್ಷತ್ರ ಪಥದಲ್ಲಿ ನೆಲಿಸಿದವನು, ನಕ್ಷತ್ರಪಥದ ಕೇಂದ್ರಬಿಂದು ಭಗವಂತ ಸತ್ಪಥಾಚಾರಃ. ಧ್ರುವ ನಕ್ಷತ್ರದಲ್ಲಿ ನೆಲೆಸಿರುವ ಶಿಂಶುಮಾರ ನಾಮಕ ಭಗವಂತ ನಕ್ಷತ್ರ ಪಥದ ಕೇಂದ್ರ. 'ಸತ್ಪಥ' ಎಂದರೆ ಸಜ್ಜನರು ನಡೆಯುವ ದಾರಿ, ಇಂತಹ ಸತ್ಪಥದ ನಡೆಯನ್ನು ನಡೆಸುವ ಭಗವಂತ ಸತ್ಪಥಾಚಾರಃ.
956) ಪ್ರಾಣದಃ
 ನಿಷ್ಕ್ರೀಯವಾದ ಜಡ ಪ್ರಪಂಚಕ್ಕೆ ಚಲನೆ ಕೊಟ್ಟ ಭಗವಂತ ಪ್ರಾಣದಃ. ಈ ಜಗತ್ತಿನ ಸಮಸ್ತ ಚಲನೆಯ ಮೂಲಶಕ್ತಿ.   "ಅಗ್ನಿಮೀಳೇ ಪುರೋಹಿತಂ " ಸ್ವತಃ ಚಲಿಸಲಾಗದ ಪ್ರಪಂಚಕ್ಕೆ ಚಲನೆ ಕೊಡುವ ಶಕ್ತಿ.
957) ಪ್ರಣವಃ
ಸರ್ವ ಶಬ್ಧಗಳಿಂದ ಸ್ತುತಿಸಲ್ಪಡುವವನು.ಮೂರು ಅವಸ್ಥೆಗಳಲ್ಲಿ(ಎಚ್ಚರ, ಕನಸು ಹಾಗು ನಿದ್ದೆ) ಮೂರು ರೀತಿಯ ಅನುಭೂತಿಯನ್ನು ಕೊಡುವ ಓಂಕಾರ ವಾಚ್ಯ ಭಗವಂತ ಪ್ರಣವಃ.
958) ಪಣಃ
ಜಗತ್ತಿನ ಸಮಸ್ತ ವ್ಯವಹಾರವನ್ನು ನಡೆಸುವವನು ಹಾಗು ಸಮಸ್ತ ಶಾಸ್ತ್ರಗಳಿಂದ ಸ್ತುತಿಸಲ್ಪ
ಡುವವನು. 

Vishnu Sahasranama 942-949

ವಿಷ್ಣು ಸಹಸ್ರನಾಮ:
ಅನಾದಿರ್ಭೂರ್ಭುವೋ ಲಕ್ಷ್ಮೀಸ್ಸುವೀರೋ ರುಚಿರಾಂಗದಃ
ಜನನೋ ಜನಜನ್ಮಾದಿರ್ಭೀಮೋ ಭೀಮಪರಾಕ್ರಮಃ
942) ಅನಾದಿಃ
ಭಗವಂತ ಆದಿ-ಅಂತ ಇಲ್ಲದವನು, ಆತನ ಸೃಷ್ಟಿ ಅನಾದಿನಿತ್ಯ. 
943) ರ್ಭೂರ್ಭುವೋ ಲಕ್ಷ್ಮೀಃ
ಈ ನಾಮವನ್ನು ಅನೇಕರೀತಿಯಲ್ಲಿ ಒಡೆದು ಬೇರೆ ಬೇರೆ ಅರ್ಥವನ್ನು ಕಾಣಬಹುದು. ಭೂಃ, ಭುವಃ, ಲಕ್ಷ್ಮೀಃ, ರ್ಭೂಭುವಃ, ಭುವೋ ಲಕ್ಷ್ಮೀಃ, ರ್ಭೂರ್ಭುವೋ ಲಕ್ಷ್ಮೀಃ ಇತ್ಯಾದಿ. ಭೂಃ ಎಂದರೆ ಸದಾ ಭವತಿ, ಎಂದೆಂದೂ ಆನಂದಮಯನಾಗಿರುವ ಪರಿಪೂರ್ಣ ಸ್ವರೂಪ; ಭುವಃ ಎಂದರೆ ಜಗತ್ತಿನಲ್ಲಿರುವ ಸರ್ವ ಉನ್ನತಿಕೆಯ ಉನ್ನತಿಯಲ್ಲಿರುವವನು, ಅದಕ್ಕಿಂತ ಮೇಲಿರುವ ಇನ್ನೊಂದು ವಸ್ತುವಿಲ್ಲ; ಲಕ್ಷ್ಮೀಃ ಎಂದರೆ ಸರ್ವ ಲಕ್ಷಣಗಳ ಸಾಕಾರ ಮೂರ್ತಿ. ರ್ಭೂರ್ಭುವೋ ಲಕ್ಷ್ಮೀಃ ಎಂದರೆ ಭೂಃ, ಭುವಃ ಸುವಃ -ಈ ಮೂರು ಲೋಕಗಳ ಸಂಪತ್ತಿನ ಒಡೆಯ.
944) ಸವೀರಃ
ಪ್ರತಿಯೊಬ್ಬರೊಳಗಿದ್ದು, ಒಬ್ಬೊಬ್ಬರಲ್ಲಿ ಅವರವ ಚೇತನದ ಸ್ಥಿತಿ-ಗತಿಗೆ ತಕ್ಕಂತೆ ಪ್ರೇರಣೆಯನ್ನು ಕೊಟ್ಟು ಆನಂದವನ್ನು ಕೊಡುವವನು ಸವೀರಃ. ಇಂತಹ ಸುಖ ಕಾರ್ಯಕ್ಕೆ ಅಡ್ಡಗಾಲಾಗಿ ಬರುವ ದುಷ್ಟ ಶಕ್ತಿಯನ್ನು ದಮನಮಾಡುವ ವೀರ ಭಗವಂತ ಸವೀರಃ. ಮಹಾ ವೀರರಾದ ಗರುಡ(ವಿ) ಮತ್ತು ಪ್ರಾಣ(ಈರ) ದೇವರಿಂದ ಸದಾ ಸುತ್ತುವರಿದಿರುವ ಭಗವಂತ ಸವೀರಃ.
945) ರುಚಿರಾಂಗದಃ
ಸುಂದರವಾದ ತೊಳ್ಭಂದಿ ತೊಟ್ಟವನು. ಸದಾ ಬೆಳಕನ್ನು ಕೊಡುವ ಜ್ಞಾನಾನಂದಮಯವಾದ ಆಭರಣ ತೊಟ್ಟ ಭಗವಂತ ರುಚಿರಾಂಗದಃ. ಹೀಗೆ ಆನಂದಮಯವಾದ ಸ್ವರೂಪಭೂತವಾದ ಅಂಗವುಳ್ಳ ಭಗವಂತ ನಮಗೆ ಮೋಕ್ಷದಲ್ಲಿ ಸ್ವರೂಪಭೂತ ಶರೀರವನ್ನು ಕರುಣಿಸುವ ಕರುಣಾಮೂರ್ತಿ.
946) ಜನನಃ
ಜನಯತೀತಿ ಜನನಃ; ಇಡೀ ಜಗತ್ತಿನ ಸೃಷ್ಟಿಗೆ ಕಾರಣನಾದ ಭಗವಂತ ಜನನಃ. ಅದೇ ರೀತಿ ಆತ ನಜನಯತಿ ಕೂಡಾ ಹೌದು. ಅಂದರೆ ನಮಗೆ ಹುಟ್ಟು ಇಲ್ಲದ ಮೋಕ್ಷ ಸ್ಥಿತಿಯನ್ನು ದಯಪಾಲಿಸುವವನು.   
947) ಜನಜನ್ಮಾದಿಃ
ಜೀವದ ಹುಟ್ಟಿಗೆ ಮೂಲ ಕಾರಣ ಭಗವಂತ-ಜನಜನ್ಮಾದಿಃ. ಪ್ರತಿಯೊಂದು ಜೀವಕ್ಕೆ ಒಂದು ಜನ್ಮವಿದೆ. ಈ ಜನ್ಮಕ್ಕೆ ಆದಿ ಕಾರಣ ಭಗವಂತ. ಜೀವದ ಹುಟ್ಟನ್ನು ಸ್ವೀಕಾರಮಾಡಿ ಮುಂದೆ ಹುಟ್ಟಿಲ್ಲದ ಮೋಕ್ಷವನ್ನು ಕರುಣಿಸುವ ಭಗವಂತ ಜನಜನ್ಮಾದಿಃ  
948) ಭೀಮಃ
ತಪ್ಪು ಮಾಡಿದವರಿಗೆ ಭಯಂಕರ ಹಾಗು ಸಜ್ಜನರಿಗೆ ಅಭಯಂಕರನಾದ ಭಗವಂತ  ಭೀಮಃ
949) ಭೀಮಪರಾಕ್ರಮಃ
ಭಗವಂತನ ಪೌರುಷಕ್ಕೆ ಸಾಟಿ ಇಲ್ಲ. ಭಯ ಬರಿಸುವ ಪೌರುಷವುಳ್ಳ, ಸಜ್ಜನರಿಗೆ ಅಭಯಪ್ರದನಾದ ಭಗವಂತ
ಭೀಮಪರಾಕ್ರಮಃ

Vishnu Sahasranama 933-941

ವಿಷ್ಣು ಸಹಸ್ರನಾಮ:
ಅನಂತರೂಪೋನಂತಶ್ರೀರ್ಜಿತಮನ್ಯುರ್ಭಯಾಪಹಃ
ಚತುರಶ್ರೋ ಗಭೀರಾತ್ಮಾ ವಿದಿಶೋ ವ್ಯಾದಿಶೋ ದಿಶಃ
933) ಅನಂತರೂಪಃ
ಭಗವಂತ  ಒಬ್ಬನೆ, ಆದರೆ ಆತನ ರೂಪ ಹಲವು.ಅನೇಕ ರೂಪದಲ್ಲಿ ಜಗತ್ತಿನಾದ್ಯಂತ ತುಂಬಿರುವ ಭಗವಂತ ಅನಂತರೂಪಃ. ನಮ್ಮ ದೇಹದಲ್ಲಿ ಕೂಡಾ ಆತ ಅನೇಕ ರೂಪದಲ್ಲಿ ತುಂಬಿ ನಡೆಸುತ್ತಿದ್ದಾನೆ.
934) ಅನಂತಶ್ರೀಃ
ಶ್ರೀ ಎಂದರೆ ಸಂಪತ್ತು. ಆಚಲವೂ ಅನಂತವೂ ಆದ ಹಿರಿಯ ತತ್ವ ಭಗವಂತ ಅನಂತಶ್ರೀಃ.
935) ಜಿತಮನ್ಯುಃ
ಭಗವಂತನಿಗೆ ಅಹಂಕಾರವಾಗಲಿ, ಕೋಪವಾಗಲಿ, ಆಕ್ರೋಶವಾಗಲಿ ಇಲ್ಲ. ಇಲ್ಲಿ 'ಮನ್ಯು' ಎನ್ನುವ ಪದಕ್ಕೆ ಸಿಟ್ಟು ಎನ್ನುವುದು ಒಂದು ಅರ್ಥವಾದರೆ ಇನ್ನೊಂದು ಮುಖದಲ್ಲಿ 'ಮನ್ಯು' ಎನ್ನುವುದಕ್ಕೆ  ಯಜ್ಞ ಹಾಗು ಜ್ಞಾನ ಎನ್ನುವ ಇತರ ಅರ್ಥವಿದೆ. 'ಮನ್ಯುಸೂಕ್ತ' ಭಗವಂತನ ಮಾಂಗಲಿಕ ಕೋಪವನ್ನು ಹೊಗಳುವ ಸೂಕ್ತ. ಭಗವಂತ ಜ್ಞಾನಸ್ವರೂಪನಾಗಿ ಎಲ್ಲಾ ಯಜ್ಞಗಳನ್ನು ಸ್ವೀಕರಿಸುವ ಕೋಪವೇ ಇಲ್ಲದ ಯಜ್ಞಗಳ ಸ್ವಾಮಿ.     
936) ಭಯಾಪಹಃ
ನಮ್ಮನ್ನು ಭಯದಿಂದ ಪಾರು ಮಾಡುವ ಭಗವಂತ ಭಯಾಪಹಃ. ದೇವರಿದ್ದಾನೆ, ಆತ ನಮ್ಮನ್ನು ಎಂದೂ ಕೈಬಿಡುವುದಿಲ್ಲ ಎಂದು ಸಂಪೂರ್ಣ ನಂಬಿದರೆ ನಾವು ಎಂದೂ ಯಾವುದಕ್ಕೂ ಭಯಪಡುವ ಅಗತ್ಯವಿಲ್ಲ. ಆತ  ಭಯಾಪಹಃ, ಆತ ನಮ್ಮನ್ನು ಭಯದಿಂದ ಪಾರುಮಾಡುತ್ತಾನೆ. ಉದಾಹರಣೆಗೆ ಒಂದು ಪುಟ್ಟ ಮಗು. ಅದು ಒಂಟಿಯಾಗಿದ್ದಾಗ ಒಂದು ಚಿಕ್ಕ ಹುಳವನ್ನು ಕಂಡರೂ ಭಯಪಡುತ್ತದೆ, ಆದರೆ ಅದೇ ಮಗು ತಾಯಿಯ ಮಡಿಲಲ್ಲಿದ್ದಾಗ ಎದುರಿಗೆ ಹುಲಿ ಚಿರತೆ ಬಂದರೂ ನಗುತ್ತಿರುತ್ತದೆ!  ಹೀಗೆ ನಾವು ಮಗುವಿನಂತೆ ಭಗವಂತನ ಮಡಿಲಲ್ಲಿ ಆಸರೆ ಕೋರಿದರೆ ಆತ ನಮಗೆ ರಕ್ಷಾ ಕವಚವಾಗುತ್ತಾನೆ.   
937) ಚತುರಶ್ರಃ
ಸಾಮಾನ್ಯವಾಗಿ ಒಂದು ಕೆಲಸ ತುಂಬಾ ಚೊಕ್ಕವಾಗಿ ಅಚ್ಚುಕಟ್ಟಾಗಿ ಆದರೆ ನಾವು 'ಸರ್ವಂ ಚತುರಶ್ರಮ್' ಎನ್ನುತ್ತೇವೆ.  ಆದರೆ ನಾವು ಮಾಡುವ ಯಾವುದೇ ಕೆಲಸ ನೂರಕ್ಕೆ ನೂರು ಚೊಕ್ಕವಾಗಿ ಅಚ್ಚುಕಟ್ಟಾಗಿ ಆಗುವುದೇ ಇಲ್ಲ. ಅಲ್ಲಿ ಯಾವುದಾದರೂ ಒಂದು ದೋಷ ಇದ್ದೇ ಇರುತ್ತದೆ. ಇದನ್ನು ಗೀತೆಯಲ್ಲಿ ಶ್ರೀಕೃಷ್ಣ ಹೀಗೆ ಹೇಳಿದ್ದಾನೆ:
ಸಹಜಂ ಕರ್ಮ ಕೌಂತೇಯ ಸದೋಷಮಪಿ ನ ತ್ಯಜೇತ್ ।
ಸರ್ವಾರಂಭಾ ಹಿ ದೋಷೇಣ ಧೂಮೇನಾಗ್ನಿರಿವಾವೃತಾಃ    ॥ಅ-೧೮, ಶ್ಲೋ-೪೮॥ 
ಅಂದರೆ " ಬೆಂಕಿಯಿದ್ದಲ್ಲಿ ಹೊಗೆ ಇದ್ದಂತೆ ಸಕಲ ಕರ್ಮಗಳಲ್ಲಿ ದೋಷವಿದ್ದೇ ಇರುತ್ತದೆ, ಆದರೆ ನಾವು ಸಹಜವಾದ ಕರ್ಮವನ್ನು ಎಂದೂ ಬಿಡಬಾರದು"
ನಮ್ಮ ಪ್ರತಿಯೊಂದು ಕರ್ಮದಲ್ಲಿ ದೋಷವಿದ್ದಂತೆ ಭಗವಂತನ ಕರ್ಮದಲ್ಲಿ ದೋಷವಿರುವುದಿಲ್ಲ. ಆತ ಚತುರಶ್ರಃ.
ಅನಿರುದ್ಧ, ಸಂಕರ್ಷಣ ಪ್ರದ್ಯುಮ್ನ ಮತ್ತು ವಾಸುದೇವ ಎನ್ನುವ ನಾಲ್ಕು ರೂಪದಲ್ಲಿದ್ದು, ಚತುರತೆಯಿಂದ ಲೋಕದ ಸೃಷ್ಟಿಮಾಡಿ, ನಾಲ್ಕು ಅವಸ್ಥೆಗಳನ್ನು(ಎಚ್ಚರ, ಕನಸು, ನಿದ್ದೆ ಹಾಗು ತುರಿಯ), ದೇಹವೆಂಬ ಹನ್ನೊಂದು ಬಾಗಿಲಿನ ನಗರವನ್ನು(ನವರಂದ್ರಗಳು, ಹೊಕ್ಕುಳು ಮತ್ತು ನೆತ್ತಿಯಲ್ಲಿನ ಬ್ರಹ್ಮರಂದ್ರ) ಅಚ್ಚುಕಟ್ಟಾಗಿ ನಿಯಂತ್ರಿಸುವ ಭಗವಂತ, ಜೀವನಿಗೆ ಮೋಕ್ಷದ ಮಾರ್ಗವನ್ನು ತೋರುವ ಕಾರುಣ್ಯಮೂರ್ತಿ.
938) ಗಭೀರಾತ್ಮಾ
ಸರ್ವಾಂತರ್ಯಾಮಿ; ನಮ್ಮ ದೇಹದಲ್ಲಿ ಗುಪ್ತವಾಗಿ, ಅಳೆಯಲು ಅಸಾಧ್ಯವಾದ ಆಳದಲ್ಲಿ ಅಡಗಿರುವ ಸ್ವರೂಪಭೂತವಾದ ಮಹಾ ತತ್ವ ಭಗವಂತ ಗಭೀರಾತ್ಮಾ.
939) ವಿದಿಶಃ
ವಿವಿಧವಾದ ಸಂದೇಶಗಳನ್ನು, ವಿವಿಧ ಮಾಧ್ಯಮದ ಮೂಲಕ ನಿರಂತರ ಕಳುಹಿಸುವ ಭಗವಂತ ವಿದಿಶಃ. ಭಗವಂತನ ಅವತಾರದಲ್ಲಿ ಕೂಡಾ ಇದನ್ನು ಕಾಣಬಹುದು. ಶ್ರೀಕೃಷ್ಣ ತನ್ನ ಅವತಾರ ಕಾಲದಲ್ಲಿ ನಮಗೆ ಕೊಟ್ಟ ಸಂದೇಶ ಅಪರಿಮಿತ. ಯುದ್ಧ ಭೂಮಿಯಲ್ಲಿ ಆತ ಕೊಟ್ಟ ಸಂದೇಶ ಭಗವದ್ ಗೀತೆ, ಆನಂತರ ಅರ್ಜುನನಿಗೆ ಏಕಾಂತದಲ್ಲಿ ಭೋದಿಸಿದ 'ಅನುಗೀತೆ'; ಇಷ್ಟೇ ಅಲ್ಲದೆ, ತನ್ನ ಅವತಾರ ಸಮಾಪ್ತಿಯ ನಂತರ ತನ್ನ ಸಂದೇಶವನ್ನು ದೇಶದ ಮೂಲೆ-ಮೂಲೆಗೆ ತಲುಪಿಸುವಂತೆ ಉದ್ಧವನಿಗೆ ಭೋದಿಸಿದ ಉದ್ಧವ ಗೀತೆ. ಹೀಗೆ ಆತ ಕೆಲವೊಮ್ಮೆ ಸ್ವಯಂ ಸಂದೇಶವನ್ನು ಸಾರಿದರೆ, ಇನ್ನು ಕೆಲವೊಮ್ಮೆ ತನ್ನ ಪ್ರತಿನಿಧಿಗಳನ್ನು ಕಳುಹಿಸಿ ಸಂದೇಶವನ್ನು ತಲುಪಿಸುತ್ತಾನೆ.     
940) ವ್ಯಾದಿಶಃ
ನಿರಂತರ ಸಂದೇಶವನ್ನು ಕಳುಹಿಸುವ ಭಗವಂತ ಕೆಲವೊಮ್ಮೆ ತನ್ನ ಆದೇಶವನ್ನು ಕೂಡಾ ರವಾನಿಸುತ್ತಾನೆ. ವಿವಿಧ ಆಜ್ಞೆಗಳನ್ನೀಯುವ ಭಗವಂತ  ವ್ಯಾದಿಶಃ
941) ದಿಶಃ
ಭಗವಂತನ ಸಂದೇಶ, ಆಜ್ಞೆ, ಕೇವಲ ಒಂದು ಪ್ರದೇಶಕ್ಕೆ , ಒಂದು ದೇಶಕ್ಕೆ ಮೀಸಲಾಗಿಲ್ಲ. ಆತ ದಿಕ್ಕು ದಿಕ್ಕಿನಲ್ಲಿ ತುಂಬಿದ್ದಾನೆ. ಸರ್ವರಿಗೂ ಫಲವನ್ನೀಯುವ, ಉಪದೇಶಿಸುವ ಭಗವಂತ
ದಿಶಃ.

Vishnu Sahasranaama 924-932

ವಿಷ್ಣು ಸಹಸ್ರನಾಮ:
ಉತ್ತಾರಣೋ ದುಷ್ಕೃತಿಹಾ ಪುಣ್ಯೋ ದುಃಸ್ವಪ್ನನಾಶನಃ
ವೀರಹಾ ರಕ್ಷಣಸ್ಸಂತೋ ಜೀವನಃ ಪರ್ಯವಸ್ಥಿತಃ 
924) ಉತ್ತಾರಣಃ
ಸಂಸಾರದಿಂದ ನಮ್ಮನ್ನು ಮೇಲೆತ್ತಿ ಪಾರುಮಾಡುವ ಭಗವಂತ ಉತ್ತಾರಣಃ. ಸಂಸಾರವೆಂಬ ಈ ಮಹಾ ಕಡಲಿನಲ್ಲಿ ದಡಸಿಗದೆ ಒದ್ದಾಡುತ್ತಿರುವ ನಮ್ಮನ್ನು ದಡಸೇರಿಸುವ ಏಕೈಕ ಶಕ್ತಿ.
925) ದುಷ್ಕೃತಿಹಾ
ನಮ್ಮ ಪಾಪಗಳನ್ನು ಪರಿಹರಿಸುವವನು. ದುಷ್ಟರನ್ನು ಪಾಪಿಗಳನ್ನು ಕೊಲ್ಲುವವನು.
926) ಪುಣ್ಯಃ
ಪುಣ್ಯ ಎಂದರೆ ಪಾವನ ಅಥವಾ ಪರಮ ಸುಂದರ. ಭೀಷ್ಮಾಚಾರ್ಯರು ವಿಷ್ಣು ಸಹಸ್ರನಾಮವನ್ನು ಧರ್ಮರಾಯನಿಗೆ ಹೇಳುವ ಮೊದಲು ಈ ರೀತಿ ಹೇಳುತ್ತಾರೆ ಪವಿತ್ರಾಣಾಂ ಪವಿತ್ರಂ ಯೋ ಮಂಗಲಾನಾಂ ಚ ಮಂಗಲಮ್. ಭಗವಂತನ ನಾಮಕ್ಕೇ ಅಷ್ಟೊಂದು ಭಲವಿರುವಾಗ ಇನ್ನು ಆತನನ್ನು ನಾವು ಊಹಿಸುವುದೂ ಕಷ್ಟ. ಆತ ಪವಿತ್ರ ಹಾಗು ಪರಮ ಸುಂದರ. ಆತ ಪುಣ್ಯಃ. ಅಗ್ನಿ ಮತ್ತು ತೀರ್ಥಗಳಲ್ಲಿ ಶುದ್ಧಿಕಾರಕನಾಗಿ, ಪಾವನನನಾಗಿ ತುಂಬಿದ ಭಗವಂತ ಪುಣ್ಯಃ. ನಮ್ಮೊಳಗೆ  ನಿಂತು ನಮ್ಮಿಂದ ಪುಣ್ಯ ಕರ್ಮಗಳನ್ನು ಮಾಡಿಸಿ ಮೋಕ್ಷ ಕೊಡುವ ಭಗವಂತ ಪುಣ್ಯಃ.  
927) ದುಃಸ್ವಪ್ನನಾಶನಃ
ನಮಗೆ ಕನಸು ಬೀಳುತ್ತದೆ, ಎಲ್ಲಾ ಕನಸುಗಳಿಗೆ ಅರ್ಥವಿದೆ ಎಂದು ಹೇಳುವುದಕ್ಕೆ ಬರುವುದಿಲ್ಲ. ಆದರೆ ಅಪರೂಪಕ್ಕೆ ಬೀಳುವ ಕನಸು, ಬೆಳಗಿನ ಜಾವದ ಕನಸು ಅರ್ಥಪೂರ್ಣವಾಗಿರುತ್ತದೆ.  ಕೆಲವರು  ರಾತ್ರಿಯಿಂದ ಬೆಳಗಿನತನಕ ಕನಸಿನಲ್ಲೇ ಇರುತ್ತಾರೆ, ಇದು ಕೇವಲ ಮಾನಸಿಕ ಸಮಸ್ಯೆ. ಕೆಲವು ಅರ್ಥಪೂರ್ಣ ಕನಸು ನಮಗೆ ನಮ್ಮ ಜೀವನದಲ್ಲಿ ಮುಂದೆ ಆಗತಕ್ಕಂತಹ ಒಳಿತು ಕೆಡುಕುಗಳ ಬಗ್ಗೆ ಮುನ್ಸೂಚನೆ ಕೊಡುತ್ತವೆ. ಇನ್ನು ಕೆಲವೊಮ್ಮೆ ನಮಗೆ ಕನಸಿನ ಮುಖೇನ ದೈವವಾಣಿ (Divine message)  ಕೂಡಾ ಬರುತ್ತದೆ. ಕನಸಿಗೆ ಅದರದ್ದೇ ಆದ ಬಾಷೆ ಇದೆ. ಇದನ್ನು ಕನಸಿನ ಮನಃಶಾಸ್ತ್ರ (Dream Psychology) ಎನ್ನುತ್ತಾರೆ. ಇದನ್ನು ಪುರಾಣಗಳಲ್ಲಿ, ಉಪನಿಷತ್ತಿನಲ್ಲಿ ವಿವರವಾಗಿ ಹೇಳಿದ್ದಾರೆ. ಕನಸಿನಲ್ಲಿ ಬಣ್ಣಕ್ಕೆ ವಿಶೇಷ ಅರ್ಥವಿದೆ. ಉದಾಹರಣೆಗೆ ಕನಸಿನಲ್ಲಿ ಬಿಳಿ ಬಣ್ಣದ ಯಾವ ವಸ್ತುವನ್ನು ಕಂಡರೂ ಅದು ಮುಂದೆ ಆಗತಕ್ಕ ಶುಭವನ್ನು ಸೂಚಿಸುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ ಕೆಂಪುಬಣ್ಣದ ಯಾವ ವಸ್ತುವನ್ನು ಕಂಡರೂ ಕೆಟ್ಟದ್ದು. ಕನಸಿನ 'ಕೆಂಪು' ಸಾವಿನ ಸಂಕೇತ. ಕೆಂಪು ತಾವರೆಯ ಒಂದೇ ಹೂ ಕನಸಿನಲ್ಲಿ ಯಾವಾಗಲೂ ಬಂದರೆ ಖಂಡಿತವಾಗಿಯೂ ಅದು ಸಾವಿನ ಸಂಕೇತ. ಎಣ್ಣೆ ಹಾಕಿ ಅಭ್ಯಂಜನ ಸ್ನಾನಮಾಡಿದಂತೆ ಕನಸು ಬಿದ್ದರೆ ಒಳ್ಳೆಯದು, ಮೈತುಂಬ ಎಣ್ಣೆ ಹಚ್ಚಿದಂತೆ ಕನಸುಬಿದ್ದರೆ ಅದು ರೋಗದ ಮುನ್ಸೂಚನೆ. ಇನ್ನು 'ದಿಕ್ಕು'; ಕನಸಿನಲ್ಲಿ ಪೂರ್ವಕ್ಕೆ ಅಥವಾ  ಉತ್ತರಕ್ಕೆ ನಡೆದುಕೊಂಡು ಹೋದಂತೆ ಕನಸುಬಿದ್ದರೆ ಒಳ್ಳೆಯದು. ಆದರೆ ಒಂದುವೇಳೆ ದಕ್ಷಿಣ ದಿಕ್ಕಿಗೆ ನಡೆದುಕೊಂಡು ಹೋದಂತೆ ಕನಸುಬಿದ್ದರೆ ಅದು ಪರಲೋಕ ಯಾತ್ರೆಯ ಸಂಕೇತ!  ಬಿಳಿ ಆನೆ ಒಳ್ಳೆಯದು, ಕಪ್ಪು ಆನೆ ಕೆಟ್ಟದ್ದು. ಇನ್ನು ಕೆಲವೊಮ್ಮೆ ಮುಂದೆ ಆಗುವ ಯಥಾಸ್ಥಿತಿ ಕನಸಿನಲ್ಲಿ ಬರುತ್ತದೆ. ಹೀಗೆ ಕನಸು ನಮಗೆ ಮುಂದೆ ಆಗುವ ಅನಿಷ್ಟದ ಎಚ್ಚರಿಕೆ ಕೂಡಾ ಹೌದು. ಅದಕ್ಕೆ ಸರಿಯಾದ ಪರಿಹಾರ ಕಂಡುಕೊಳ್ಳಲು ಅವಕಾಶ ಕೂಡಾ ಹೌದು. ಈ ರೀತಿ ದುಃಸ್ವಪ್ನ ಬಿದ್ದಾಗ ಆ ಬಗ್ಗೆ ಎಂದೂ ಭಯಪಡಬೇಕಾಗಿಲ್ಲ. ಏಕೆಂದರೆ ಇದು ಭಗವಂತ ನಮಗೆ ಕೊಟ್ಟ ಮುನ್ಸೂಚನೆ.  ಇಂತಹ ಸಂಧರ್ಭದಲ್ಲಿ ಆ ಭಗವಂತನಲ್ಲಿ ಸಂಪೂರ್ಣ ಶರಣಾದರೆ ಆತ ಖಂಡಿತವಾಗಿ ನಮಗೆ ಪರಿಹಾರವನ್ನು ತೋರಿಸುತ್ತಾನೆ. ಮುಂದೆ ಆಗತಕ್ಕಂತಹ ಅನಿಷ್ಟದಿಂದ ನಮ್ಮನ್ನು ಪಾರು ಮಾಡುತ್ತಾನೆ. ಇಂತಹ ಭಗವಂತನಿಗೆ ದುಃಸ್ವಪ್ನನಾಶನಃ ಅನ್ವರ್ಥನಾಮ.  
928) ವೀರಹಾ
ವೀರ+ಹಾ-ವೀರಹಾ; ಯಾರ ಪೌರುಷ ಸಮಾಜಭಾದಕವೋ ಅಂತಹ ಲೋಕಕಂಟಕರನ್ನು ನಾಶ ಮಾಡುವ ಭಗವಂತ ವೀರಹಾ. ಇಷ್ಟೇ ಅಲ್ಲ, ಲೋಕಕಂಟಕರಿಗೆ ಸಹಾಯಕನಾಗಿ ನಿಲ್ಲುವವರನ್ನೂ ಕೂಡಾ ಭಗವಂತ ನಿಗ್ರಹ ಮಾಡುತ್ತಾನೆ. ಕೆಲವೊಮ್ಮೆ ಕಾರುಣ್ಯದಿಂದ ಇನ್ನು ಕೆಲವೊಮ್ಮೆ ಧರ್ಮ ರಕ್ಷಣೆಗಾಗಿ. ಶ್ರೀ ಕೃಷ್ಣ - ಭೀಷ್ಮ, ದ್ರೋಣರನ್ನು ಕೊಲ್ಲುವ ಮುಖೇನ ಅಂಥಹ ಧಿವ್ಯ ಚೇನತ ಮತ್ತೆ ತಪ್ಪು ಮಾಡಿ ಪಾಪ ಕಟ್ಟಿಕೊಳ್ಳದಂತೆ ತಡೆದ.
ವೀರೇಶು ಹಂತಿ ಗಚ್ಛತಿ. ವೀರರಲ್ಲಿ ಸನ್ನಿಹಿತನಾಗಿರುವ ಭಗವಂತ ವೀರಹಾ. 
929) ರಕ್ಷಣಃ
ಇಡೀ ಜಗತ್ತಿನ ಸಂರಕ್ಷಕ ಭಗವಂತ ರಕ್ಷಣಃ.
930) ಸಂತಃ
ಅನೇಕ ರೂಪದಲ್ಲಿ ಸಜ್ಜನರೊಳಗೆ ತುಂಬಿ ಪಾಲನೆ ಮಾಡುವ ಭಗವಂತ  ಸಂತಃ. ಆತ "ಸಮ್ಯಕ್ ತತಃ" ಎಲ್ಲೆಡೆಯೂ ವ್ಯಾಪ್ತನಾದವನು. 
931) ಜೀವನಃ
ಪ್ರತಿಯೊಬ್ಬರಿಗೂ ಬದುಕು ಕೊಡುವವ. ಜಗತ್ತಿನ ಸಮಸ್ತ ಜೀವ ಜಾತಕ್ಕೆ ಬದುಕು ಕೊಡುವ ಪ್ರತಿಯೊಂದು ಜೀವವನ್ನು ನಿಯಂತ್ರಿಸುವ ಭಗವಂತ ಜೀವನಃ.
932) ಪರ್ಯವಸ್ಥಿತಃ
ಎಲ್ಲೆಡೆ ನೆಲೆಸಿರುವವನು, ನಮ್ಮ ಪಂಚ ಕೋಶದಲ್ಲಿ, ಪಂಚ ಜ್ಞಾನೇಂದ್ರಿಯದಲ್ಲಿ, ಪಂಚಪ್ರಾಣದಲ್ಲಿ, ಪಂಚ ಭೂತದಲ್ಲಿ ಪಂಚ ರೂಪದಲ್ಲಿ ಅನಂತರೂಪದಲ್ಲಿ ತುಂಬಿರುವ ಭಗವಂತ
ಪರ್ಯವಸ್ಥಿತಃ.