Monday, May 31, 2010
Vishnu Sahasranamam 16 to 17
16)ಕ್ಷೇತ್ರಜ್ಞ ಅಂದರೆ
ಕ್ಷೇತ್ರವನ್ನು ತಿಳಿದವನು. ಕ್ಷೇತ್ರ ಅಂದರೆ ನಾವು ವಾಸ ಮಾಡುವ ನೆಲೆ . ನಾವು ವಾಸ ಮಾಡುವುದು ಈ ಬ್ರಹ್ಮಾಂಡದಲ್ಲಿ(ಚತುರ್ಮುಖನ ಕ್ಷೇತ್ರ) ಮತ್ತು ಜೀವದ ನೆಲೆ ಶರೀರ (ನಮ್ಮ ಕ್ಷೇತ್ರ).
ಕ್ಷೇತ್ರಜ್ಞ ಅಂದರೆ ,ಈ ಬ್ರಹ್ಮಾಂಡವನ್ನು ಮತ್ತು ಈ ಶರೀರವನ್ನು ,ಈ ಪ್ರಪಂಚದ ರಹಸ್ಯವನ್ನು ಸಂಪೂರ್ಣ ತಿಳಿದವನು.
17)ಅಕ್ಷರ
ಅಕ್ಷರ ಅಂದರೆ ನಾಶವಿಲ್ಲದ್ದು ಲಿಪಿ ಅಕ್ಷರ ಅಲ್ಲ. ಲಿಪಿ ಕೇವಲ ಅಕ್ಷರದ ಪ್ರತೀಕ. ಲಿಪಿ ನಾಶವಾಗಬಹುದು ಆದರೆ ಅಕ್ಷರಗಳಿಗೆ ನಾಶವಿಲ್ಲ. ನಮ್ಮಿಂದ ಹೊರಹೊಮ್ಮುವ ಎಲ್ಲಾ ನುಡಿ ಈ ಆಕಾಶದಲ್ಲಿ ಧ್ವನಿಮುದ್ರಿತ ಆಗಿ ಶಾಶ್ವತವಾಗಿ ಇರುತ್ತದೆ.
೧. ಅಕ್ಷರ ಅಂದರೆ ಯಾವುದು ಎಲ್ಲಾ ಕಡೆ ವ್ಯಾಪಿಸಿದೆಯೋ ಅದು ಅಕ್ಷರ (Omnipresence)೨>ಕ್ಷರ ಅಂದರೆ ನಾಶ, ಅ+ಕ್ಷರ =>ನಾಶವಿಲ್ಲದ್ದು
೩. ಕ್ಷರಣ ಅಂದರೆ => ಸುರಿಸುವವನು. ಅಕ್ಷರ ಅಂದರೆ ಯುಗ ಯುಗಾಂತರದಲ್ಲಿ ನಮ್ಮ ಮೇಲೆ ಕರುಣೆಯ ಮಳೆ ಸುರಿಸುವವನು.
೪. ಅಕ್ಷ ಅಂದರೆ ಇಂದ್ರಿಯ,ರ =>ರಮಣ ಅಂದರೆ ರಮಿಸುವವನು. ಅಕ್ಷ+ರ =>ಅಕ್ಷರ ಅಂದರೆ ಆನಂದಮಯನಾಗಿ ಇಂದ್ರಿಯದಲ್ಲಿ ನೆಲೆಸಿರುವವನು
೫. ಅಕ್ಷರ ಅಂದರೆ ಅ ನಿಂದ ಕ್ಷ ವರೆಗೆ ಇರುವ ಎಲ್ಲಾ ವರ್ಣಗಳಿಂದ ಉತ್ಪನ್ನವಾಗುವ ಅನಂತಾನಂತ ಶಬ್ದಗಳಲ್ಲಿ ರಮಿಸುವವನು.
೬. ಅ => ಅಲ್ಲ/ಇಲ್ಲ -ಭಗವಂತ ಅಲ್ಲ , ಭಗವಂತ ಇಲ್ಲ !!! ಅಂದರೆ ಭಗವಂತ ನಮಗೆ ಕಾಣುವ ಯಾವುದೇ ವಸ್ತು ಅಲ್ಲ ಅವನಲ್ಲಿ ದೋಷವಿಲ್ಲ.
Sunday, May 30, 2010
Vishnu Sahasranama 8 to 15
ಭೂತಾತ್ಮಾ ಭೂತಭಾವನಃ
ಪೂತಾತ್ಮಾ ಪರಮಾತ್ಮಾ ಚ ಮುಕ್ತಾನಾಂ ಪರಮಾ ಗತಿಃ
ಅವ್ಯಯಃ ಪುರುಷಃ ಸಾಕ್ಷೀ
8)ಭೂತಾತ್ಮಾ
ಪಂಚಭೂತಗಳಲ್ಲಿ ವ್ಯಾಪಿಸಿದವ, ಬ್ರಹ್ಮಾಂಡದಲ್ಲಿ ವ್ಯಾಪಿಸಿದವ, ಪಿಂಡಾ0ಡದಲ್ಲಿ ತುಂಬಿರುವವ,ಎಲ್ಲಾ ಜೀವದಲ್ಲಿ ಅಂತರ್ಯಾಮಿ ಆಗಿ ತುಂಬಿರುವವ.ಭೂತಿಯನ್ನು( ಉನ್ನತಿ) ಹೊಂದಿದ ಜೀವಿಗಳಿಗೆ ಮುಕ್ತಿಯನ್ನು ಕರುಣಿಸುವವ ಭೂತಾತ್ಮಾ.
9)ಭೂತಭಾವನಃ
ಸೃಷ್ಟಿ-ಸ್ಥಿತಿ-ಸoಹಾರಗಳಿಗೆ ಕಾರಣವಾದವ ,ಜೀವಿಗಳಿಗೆ ಸುಖ-ದುಃಖ ಕೊಡುವವ ಭೂತಭಾವನಃ.
10)ಪೂತಾತ್ಮಾ 11)ಪರಮಾತ್ಮಾ
ಆತ್ಮ- ಅಂದರೆ ->ದೇಹ ? ಅಲ್ಲ !!! ಭಾವನೆಗಳ ಗೂಡಾದ ಮನಸ್ಸು? ಅಲ್ಲ !! ಏಕೆಂದರೆ ಮನಸ್ಸಿನಿಂದ ಯೋಚಿಸುವುದರಿಂದ ಮನಸ್ಸನ್ನು ನಿಯಂತ್ರಿಸುವವ ಯಾರು ? ಅದೇ ಜೀವ -ಆತ್ಮ. ಆದರೆ ಈ ಜೀವವನ್ನು ನಿಯಂತ್ರಿಸುವ ಶಕ್ತಿ ಯಾರು ? ಆತನೇ -ಪರಮಾತ್ಮ (ಎಲ್ಲಾ ಆತ್ಮಗಳಿಗೂ ಪರಮವಾದ ಆತ್ಮ)
12)ಮುಕ್ತಾನಾಂ ಪರಮಾ ಗತಿಃ
ಚತುರ್ಮುಖನ ಆಯಸ್ಸು ನೂರು ಕಲ್ಪ.ಒಂದು ಕಲ್ಪ (काल्प/kālpa)ಅಂದರೆ 31 ಸಾವಿರದ 104 ಸಾವಿರ ಕೊಟಿ ವರ್ಷ .ಮಾನವನ ಸಾಧನೆ ಒಂದು ಕಲ್ಪ. ಮುಕ್ತಿ ಸ್ಥಿತಿಯಲ್ಲಿ ಮಾನವನ ಜೊತೆಗೆ ಚತುರ್ಮುಖ ಬ್ರಹ್ಮರು (ಮುಕ್ತಿಯಲ್ಲಿರುವ ಚತುರ್ಮುಖರು) ಮಾರ್ಗದರ್ಶಕನಾಗಿ ಇರುತ್ತಾರೆ.ಮುಕ್ತಾನಾಂ ಪರಮಾ ಗತಿಃ ಅಂದರೆ :ಮುಕ್ತಿ ಪಡೆದವರಿಗೆ ಮುಕ್ತಿಯಲ್ಲೂ ಚತುರ್ಮುಖ ಬ್ರಹ್ಮರೊಂದಿಗೆ -ಶ್ರೇಷ್ಠ ಮಾರ್ಗದರ್ಶನ ಮಾಡುವವನು, ಹಾಗು ಚತುರ್ಮುಖ ಬ್ರಹ್ಮರಿಗೂ -ಶ್ರೇಷ್ಠ ಮಾರ್ಗದರ್ಶನ ಮಾಡುವವನು, ಮತ್ತು ಮುಕ್ತಿ ಪಡೆದ ಎಲ್ಲಾ ಆತ್ಮರಿಗೆ ತಾಯಿಯಾಗಿರುವ ಸ್ತ್ರೀ ತತ್ವ ಚೇತನ-ಲಕ್ಷ್ಮಿಗೂ ಆಶ್ರಯದಾತನಾಗಿರುವವನು.
13)ಅವ್ಯಯಃ(ಆಯ-ವ್ಯಯ)
ಎಲ್ಲಾ ವಸ್ತುವಿನ ಒಳಗಿದ್ದೂ(ಆಯ) ಏಕರೂಪನಾಗಿ ಇರುವವನು (ಆನೆ ಮತ್ತು ಇರುವೆ ಒಳಗೆ ಇರುವ ಭಗವಂತ ಒಬ್ಬನೇ ಬೇರೆ ಬೇರೆ ಅಲ್ಲ )
ವ್ಯಯ ಅಂದರೆ ಕಮ್ಮಿ ಆಗುವುದು ,ಖರ್ಚು ,ನಾಶ ಇತ್ಯಾದಿ...... ಯಾವುದು, ಯಾವ ಕಾಲದಲ್ಲೂ ಕಡಿಮೆ ಆಗದೆ, ನಾಶವಾಗದೆ, ಅನಾದಿ-ಅನಂತ ಕಾಲದಲ್ಲಿ, ಏಕರೂಪನಾಗಿ ಇರುವ ಶಾಶ್ವತ ತತ್ವ .
14)ಪುರುಷಃ ಪುರು+ಷಃ ಇದು ತುಂಬಾ ಪ್ರಮುಖವಾದ ನಾಮ. ವೇದದ ಸಾರಭೂತವಾದ ಪುರುಷ-ಸೂಕ್ತದಲ್ಲಿ ಬರುವಂತಹ ಸೂಕ್ತಗಳ ಪ್ರತಿಫಲದ ರೂಪವೇ ಭಗವಂತನ ಪುರುಷ ನಾಮಕವಾದ ರೂಪ. ಪುರು ಅಂದರೆ ಎಲ್ಲಕ್ಕಿಂತ ದೊಡ್ಡದು ಅನಂತ.
-ಬ್ರಹ್ಮಾಂಡ ರಚನೆ ಆಗುವ ಮುಂಚೆ ಬ್ರಹ್ಮಾಂಡ ಸೃಷ್ಟಿ ಆದ ಮೇಲೂ ಅನಂತವಾಗಿ ತುಂಬಿರುವವ.
-ಪಿಂಡಾ0ಡದಲ್ಲಿ ತುಂಬಿರುವವನು
-ಪುರು+ಷಃ-> ಪುರ ಅಂದರೆ ಪೂರ್ಣತೆ ಹೊಂದಿದ ದೇಹ(perfect body ) ,
ಷಃ ಅಂದರೆ ನೆಲೆಸಿರುವವನು
Note: ಇಲ್ಲಿ ಪುರುಷಃ ಅಂದರೆ ಗಂಡಸು ಅನ್ನುವ ಅರ್ಥ ಕೊಡುವುದಿಲ್ಲ -ಮನುಷ್ಯ ಶರೀರ ಅನ್ನುವ ಅರ್ಥ ಕೊಡುತ್ತದೆ
-ಪುರದಲ್ಲಿ ಇದ್ದು ಅದರ ಒಡೆತನವನ್ನು ಹೊಂದಿರುವ ಹಾಗೂ ಎಲ್ಲಾ ಪುರದ ಒಡೆಯ -ಎಲ್ಲಾ ಪುರದಲ್ಲಿ, ಪುರದ ಹೊರಗೆ ತುಂಬಿ ಅನಂತವಾಗಿರುವ ಪರಮ ಪುರುಷ .
-ಜ್ಞಾನ,ಶಕ್ತಿ,ಭಲ,ಐಶ್ವರ್ಯ,ವೀರ್ಯ,ತೇಜಸ್ಸು ಈ -ಷಟ್ಗುಣಪೂರ್ಣನಾಗಿ ಜಗತ್ತನ್ನು ನಿಯಂತ್ರಿಸುವವ.
ಪು- ಎಲ್ಲವನ್ನು ಪಾವನ ಗೊಳಿಸುವವನು.
ರು- ತಾನು ಒಳಗಿದ್ದು- ಶತ್ತ್ರು , ಅಜ್ಞಾನ, ದುಃಖ ತಡೆದು, ಜೀವವನ್ನು ಉದ್ದಾರ ಮಾಡುವವನು.
ಷಃ- ಎಲ್ಲೆಡೆ ಮಲಗಿದವ (ಮಲಗಿದವ ಅಂದರೆ ಅನಾಯಾಸವಾಗಿ ಎಲ್ಲಾ ಕಾರ್ಯ ಮಾಡುವವ)
15)ಸಾಕ್ಷೀ
-ಎಲ್ಲವನ್ನು ಕಣ್ಣಾರೆ ಕಾಣಬಲ್ಲವ. ಭಗವಂತನ ಮುಂದೆ ನಾವು ಮುಚ್ಚಿಕೊಳ್ಳುವುದು ಏನೂ ಇಲ್ಲ .ಭಗವಂತನ ಮುಂದೆ ನಾವೆಲ್ಲರೂ ಬತ್ತಲು, ಆತನ ಮುಂದೆ ಮುಚ್ಚಿಟ್ಟುಕೊಂಡು ಮಾಡುವ ಯಾವ ಕೆಲಸವೂ ಇಲ್ಲ. ಭಗವಂತನ ಮುಂದೆ ನಾವು ಬತ್ತಲಾಗದೆ ಭಗವಂತ ನಮಗೆ ಎಂದೂ ಬಿಚ್ಚಿಕೊಳ್ಳುವೂದಿಲ್ಲ
-ಆದುದರಿಂದ ಭಗವಂತ ಎಲ್ಲವನ್ನು ಕಾಣಬಲ್ಲ ಸಾಕ್ಷಿ.
ಅಕ್ಷಿಗಳು ಅಂದರೆ ಇಂದ್ರಿಯ ಉಳ್ಳವರು, ಅಂದರೆ ನಾವು-ನೀವು ; -ಅಕ್ಷಿಗಳ ಸಖನಾಗಿ ನಮ್ಮನ್ನು ಉದ್ದಾರ ಮಾಡುವವನು ಸಾಕ್ಷಿ
Saturday, May 29, 2010
Vishnu Sahasranama 5-7
ಭೂತಕೃದ್ಭೂತಭೃದ್ಭಾವೋ
5) ಭೂತಕೃತ್
ಸಂಸ್ಕೃತದಲ್ಲಿ ಕೃತ್ ಅನ್ನುವ ಪದಕ್ಕೆ ಎರಡು ಅರ್ಥವಿದೆ.
೧. ಸೃಷ್ಟಿ
೨. ಸoಹಾರ
ಅದೇ ರೀತಿ ಭೂತಗಳಲ್ಲಿ ಎರಡು ವಿಧ
೧. ಅಚೇತನ ಭೂತ ಅಂದರೆ ಪಂಚಭೂತಗಳು (ಮಣ್ಣು ,ಬೆಂಕಿ, ನೀರು, ಗಾಳಿ ಮತ್ತು ಆಕಾಶ)
೨. ಚೇತನ ಭೂತ ಅಂದರೆ ಪಂಚಭೂತಗಳಿಂದ ಆದ ಜೀವಗಳು.
ಭೂತಕೃತ್ (ಸೃಷ್ಟಿ) ಅಂದರೆ ಪಂಚಭೂತಗಳ ಸೃಷ್ಟಿಕರ್ತ,ಪಂಚಭೂತಾತ್ಮಕವಾದ ಬ್ರಹ್ಮಾಂಡ ಸೃಷ್ಟಿಕರ್ತ.
ಬ್ರಹ್ಮಾಂಡದಲ್ಲಿ ಪಂಚಭೂತಗಳಿಂದಾದ ಪಿಂಡಾoಡ ಸೃಷ್ಟಿ ಮಾಡಿದವ , ಪಿಂಡಾ0ಡದಲ್ಲಿ ಜೀವವನ್ನು ಇರಿಸಿ ದೇಹ ಸೃಷ್ಟಿ ಮಾಡಿದವ, ಮತ್ತು ಸಾಧನೆ ಮೂಲಕ ಜೀವರಿಗೆ ಮುಕ್ತಿಯನ್ನು ಕರುಣಿಸುವವ.
ಭೂತಕೃತ್ (ಸಂಹಾರ) ಅಂದರೆ ದೇಹ ನಾಶದ ಮೂಲಕ ಜೀವರನ್ನು ನಾಶ ಮಾಡಿದವ, ಅಭಿವೃದ್ದಿ ಹೊಂದದ ತಾಮಸ ಜೀವರನ್ನು ನಾಶ ಮಾಡಿದವ, ಪಂಚಭೂತಾತ್ಮಕವಾದ ಶರೀರ ನಾಶ ಮಾಡಿದವ, ಪಂಚಭೂತಾತ್ಮಕವಾದ ಬ್ರಹ್ಮಾಂಡ ನಾಶ ಮಾಡಿದವ , ಪ್ರಳಯ ಕಾಲದಲ್ಲಿ ಪಂಚಭೂತಗಳನ್ನೂ ನಾಶ ಮಾಡುವವ.
6)ಭೂತಭೃತ್
ಸೃಷ್ಟಿ-ಸ್ಥಿತಿ-ಲಯದಲ್ಲಿ ಪಂಚಭೂತಗಳ ಧಾರಣೆ ಮಾಡಿದವ,ಪಂಚಭೂತಾತ್ಮಕವಾದ ಬ್ರಹ್ಮಾಂಡ ಧಾರಣೆ ಮಾಡಿದವ, ಪಂಚಭೂತಗಳಿಂದಾದ ಪಿಂಡಾ0ಡ ಧಾರಣೆ ಮಾಡಿದವ, ಪಿಂಡಾ0ಡದಲ್ಲಿರುವ ಜೀವವನ್ನು ಧಾರಣೆ ಮಾಡಿದವ ಮತ್ತು ಮುಕ್ತಿಯನ್ನು ಪಡೆದ ಜೀವವನ್ನು ಧಾರಣೆ ಮಾಡಿದವ.
7)ಭಾವಾಯ
ಸೃಷ್ಟಿ-ಸ್ಥಿತಿ-ಲಯ ಇದು ಭಗವಂತನ ಗುಣ. ಆತ ಸಚ್ಚಿದಾನ೦ದ. ಹುಟ್ಟು-ಸಾವು ನೈಸರ್ಗಿಕ ಕ್ರಿಯೆ.
ಸಾವು ಹುಟ್ಟಿನ ಮೂಲ, ಹುಟ್ಟು ಸಾವಿನ ಮೂಲ. ಭಗವಂತ ಎಂದೆಂದಿಗೂ ಶಾಶ್ವತವಾಗಿ ಇರುವವನು.
ಭಾವ ಅಂದರೆ ಸಚ್ಚಿದಾನ೦ದ ಸ್ವರೂಪ.
Friday, May 28, 2010
Vishnu Sahasranama 2-4
2)ವಿಷ್ಣು
ಸಾಮಾನ್ಯವಾಗಿ ವಿಷ್ಣು ಅನ್ನುವ ನಾಮ ಒಬ್ಬ ವ್ಯಕ್ತಿಗೆ ಸಂಬಂದಿಸಿದ್ದು ಎಂದು ತಿಳಿಯುವವರೇ ಹೆಚ್ಚು. ಆದರೆ ಹಿಂದೂ-ಮುಸ್ಲಿಂ-ಕ್ರೈಸ್ತ ಧರ್ಮದಲ್ಲಿ ದೇವರು ಎನ್ನುವುದಕ್ಕೆ ಯಾವ ವಿಶ್ಲೇಷಣೆ ಇದೆಯೋ ಅದರ ಸಂಸ್ಕ್ರತ ಪದ ವಿಷ್ಣು !! ವಿಷ್ಣು ಅಂದರೆ ಸರ್ವಶಬ್ದ ವಾಚ್ಯನಾದ, ಸರ್ವಗತನಾದ ಭಗವಂತ (omnipotent and omnipresent) ಎಂದರ್ಥ. ಇದು ಜಾತಿ ಧರ್ಮವನ್ನು ಮೀರಿ ಎಲ್ಲರೂ ಒಪ್ಪುವಂತ ಅರ್ಥ. ಇನ್ನು ಈ ಪದವನ್ನು ಒಡೆದು ನೋಡಿದರೆ ವಿ-ಷ-ಣು ಆಗುತ್ತದೆ. ವಿಷಣು ಎಂದರೆ-ವಿಶಿಷ್ಟವಾದ ಜ್ಞಾನ(ವಿ) ಕೊಡುವವನು. ಒಳಗೆ ಇದ್ದು, ಸಂಸಾರ ವಿಷವನ್ನು ಪರಿಹರಿಸಿ, ನಮ್ಮ ಕ್ರಿಯೆಯನ್ನು ನಿಯಂತ್ರಿಸುವ ಪರಿಪೂರ್ಣವಾದ (ಷ) ಪ್ರಾಣಶಕ್ತಿ . ಹಾಗೂ ಎಲ್ಲರನ್ನು ರಕ್ಷಿಸುವ ಬಲ ಇರುವ (ಣ) ಸರ್ವ ಶಕ್ತ ಭಗವಂತ ವಿಷ್ಣು.
3) ವಷಟ್ಕಾರ
ಭಗವಂತನನ್ನು ವಷಟ್ಕಾರ ಎಂದು ಕರೆಯುತ್ತಾರೆ ಎನ್ನುವ ವಿಷಯ ಹೆಚ್ಚಿನವರಿಗೆ ತಿಳಿದಿಲ್ಲ. ಹಿಂದಿನ ಕಾಲದಲ್ಲಿ ವೈದಿಕ ಸಂಪ್ರದಾಯವಿರುವ ಪ್ರತಿಯೊಂದು ಮನೆಗಳಲ್ಲಿ ಅಗ್ನಿಹೋತ್ರ ಮಾಡುವುದು ನಿತ್ಯ ಕರ್ಮವಾಗಿತ್ತು. ಅಗ್ನಿಹೋತ್ರದಲ್ಲಿ ಭಗವಂತನಿಗೆ ಐದು ಮಂತ್ರಗಳಿಂದ (ಯಜ್ಞ ನಾಮಕ , ಯಜ್ಞ ಪುರುಷ , ಯಜ್ಞೇಶ್ವರ , ಯಜ್ಞ ಭಾವನ , ಯಜ್ಞ ಭೋಕ್ತ ) ಆಹುತಿಯನ್ನು ಕೊಡುತ್ತಿದ್ದರು. ಈ ಮಂತ್ರದಲ್ಲಿ ಬರುವ ಐದನೇ ಹೆಸರು ಭಗವಂತನ ವಷಟ್ಕಾರ ಅನ್ನುವ ಹೆಸರು.
ಏಕೆ ಅವನು ವಷಟ್ಕಾರ ? ಏಕೆಂದರೆ ತಾನು ಇಚ್ಚಿಸಿದಂತೆ ಜಗತ್ತನ್ನು ಸೃಷ್ಟಿ ಮಾಡಿ ಈ ಕೆಳಗಿನ ಆರು ಮುಖದಲ್ಲಿ ಜಗತ್ತಿನಾದ್ಯಂತ ತುಂಬಿರುವವನು ವಷಟ್ಕಾರ.
೧. ಜ್ಞಾನ- ಒಂದು ವಸ್ತುವನ್ನು ಸೃಷ್ಟಿ ಮಾಡುವ ಸರ್ವಜ್ಞ ಜ್ಞಾನ ಶಕ್ತಿ ಇರುವವನು.
೨. ಶಕ್ತಿ-ಕರ್ತೃತ್ವ ಶಕ್ತಿ ಉಳ್ಳವನು.
೩. ಬಲ-ರಕ್ಷಣೆ ಮಾಡುವ ತಾಕತ್ತು ( ಧಾರಣ ಶಕ್ತಿ ) ಇರುವವನು
೪. ಐಶ್ವರ್ಯ- ಒಡೆತನ
೫. ವೀರ್ಯ- ಪರಾಕ್ರಮ-ದುಷ್ಟ ಶಕ್ತಿಯನ್ನು ಸಂಹಾರ ಮಾಡುವ ಶಕ್ತಿ ಉಳ್ಳವನು
೬. ತೇಜಸ್ಸು - ಜಗತ್ತನ್ನು ಬೆಳಗಿಸುವ ಬೆಳಕು.
ಈ ಮೇಲಿನ ಆರು ಗುಣಗಳಿಂದ ಜಗತ್ತಿನ ಸೃಷ್ಟಿ-ಸ್ಥಿತಿ-ಸಂಹಾರಗಳಿಗೆ ಕಾರಣನಾದ ಪರಬ್ರಹ್ಮ -ವಷಟ್ಕಾರ.
4)ಭೂತಭವ್ಯಭವತ್ಪ್ರಭುಃ
ಭಗವಂತ ಎಲ್ಲಾ ಕಾಲದಲ್ಲೂ ಈ ಲೋಕವನ್ನು ರಕ್ಷಿಸುತ್ತಿರುತ್ತಾನೆ. ಹಿಂದೆ ಅನಂತವಾಗಿ ಇದ್ದದ್ದು (ಭೂತಕಾಲದಲ್ಲಿ) ಮುಂದೆ ಬರುವ ಅನಂತ ಭವಿಷ್ಯತ್ ಕಾಲ ಹಾಗು ವರ್ತಮಾನ ಕಾಲದಲ್ಲಿ ಈ ಲೋಕವನ್ನು ರಕ್ಷಿಸುವವನು. ಈ ನಾಮವನ್ನು ನಾವು ಒಡೆದು ನೋಡಿದಾಗ ಭೂತ+ಭವಿ+ಭವಂತಿ+ಪ್ರಭು ಎನ್ನುವ ನಾಲ್ಕು ಪದಗಳನ್ನು ನೋಡಬಹುದು. ಭೂತಿಯನ್ನು ಪಡೆದವರು ಭೂತಗಳು ಅಂದರೆ ಮುಕ್ತಿಗೆ ಯೋಗ್ಯರಾದ ಸಾತ್ವಿಕರು , ಭವಿಗಳು ಎಂದರೆ ಸಂಸಾರಿಗಳು ಅಥವಾ ರಾಜಸರು , ಭವಂತಿ ಎಂದರೆ ಜೀವನದಲ್ಲಿ ಎತ್ತರಕ್ಕೆ ಏರದ ತಾಮಸರು. ಆದ್ದರಿಂದ ಭೂತಭವ್ಯಭವತ್ಪ್ರಭುಃ ಎಂದರೆ ಸಾತ್ವಿಕರಿಗೂ , ರಾಜಸರಿಗೂ ಹಾಗು ತಾಮಸರಿಗೂ ಪ್ರಭು ಎಂದರ್ಥ.
ಈ ರೀತಿ ಹಿಂದೆ ಇದ್ದವನು, ಈಗಲೂ ಇರುವವನು, ಮುಂದೆ ಎಂದೆಂದೂ ಎಲ್ಲರ ಪ್ರಭುವಾಗಿ ಸರ್ವ ಜೀವ ರಕ್ಷಕನಾಗಿರುವ ಭಗವಂತ ಭೂತಭವ್ಯಭವತ್ಪ್ರಭುಃ
Thursday, May 27, 2010
Vishnu Sahasranama 1
1) ವಿಶ್ವಮ್
ವಿಷ್ಣು ಸಹಸ್ರನಾಮದ ಮೊದಲ ನಾಮ ವಿಶ್ವಂ. ಈ ಹಿಂದೆ ಹೇಳಿದಂತೆ ವಿಷ್ಣು ಸಹಸ್ರನಾಮ ಸರ್ವ ವೇದಗಳ ಸಾರ. ಇಲ್ಲಿ 'ವಿ ' ಎಂದರೆ ಪಕ್ಷಿ ಅನ್ನುವ ಅರ್ಥವನ್ನೂ, ಶ್ವ ಎಂದರೆ ಚಲಿಸುವವನು ಎನ್ನುವ ಅರ್ಥವನ್ನು ಕೊಡುತ್ತದೆ . ಆದ್ದರಿಂದ ವೇದಗಳ ಅಭಿಮಾನಿ ದೇವತೆಯಾದ ಗರುಡನನ್ನು ತನ್ನ ವಾಹನವಾಗಿರಿಸಿಕೊಂಡಿರುವ ಭಗವಂತ ವಿಶ್ವ .
ಮೇಲೆ ಹೇಳಿದ ಅರ್ಥವಲ್ಲದೆ ಇನ್ನೂ ಹತ್ತು ಹಲವು ಅರ್ಥಗಳನ್ನು ವಿಶ್ವ ಅನ್ನುವ ನಾಮದಲ್ಲಿ ನಾವು ನೋಡಬಹುದು.
ಚತುರ್ಮುಖ ಬ್ರಹ್ಮನನ್ನು ವಿಶ್ವ ಎಂದು ಕರೆಯುತ್ತಾರೆ. ಸೃಷ್ಟಿಕರ್ತನಾದ ಬ್ರಹ್ಮನನ್ನು ತನ್ನ ನಾಭಿಯಲ್ಲಿ ಧರಿಸಿರುವ ಭಗವಂತ, ಆತನ ಮೂಲಕ ಈ ಸೃಷ್ಟಿಗೆ ಕಾರಣಕರ್ತನಾಗಿದ್ದಾನೆ . ಆದ್ದರಿಂದ ಆತ ವಿಶ್ವಂ. ಆಂಜನೇಯ ರೂಪಿ ಮುಖ್ಯಪ್ರಾಣನನ್ನು ಕೂಡ ವಿಶ್ವ ಎಂದು ಕರೆಯುತ್ತಾರೆ. ನಮ್ಮ ದೇಹಕ್ಕೆ ಚಲನೆಯನ್ನು ಕೊಡುವಂತಹ, ಪ್ರಾಣಶಕ್ತಿಯಾದ ಮುಖ್ಯಪ್ರಾಣನಲ್ಲಿ ತುಂಬಿದ್ದು, ನಮ್ಮ ದೇಹದಲ್ಲಿ ಬಿಂಬರೂಪದಲ್ಲಿ ಪ್ರವೇಶಿಸಿ (ವಿಶತಿ), ಅಂತರ್ಯಾಮಿಯಾಗಿ ದೇಹದ ಒಳಗೂ ಹೊರಗೂ ತುಂಬಿರುವ ಪರಿಪೂರ್ಣ ಜ್ಞಾನಾನಂದಮಯನಾದ ಭಗವಂತ ವಿಶ್ವಂ.
Wednesday, May 26, 2010
Vishnu sahasranama-Peetike
ಯುಧಿಷ್ಠಿರಃ ಶಾಂತನವಂ ಪುನರೇವಾಭ್ಯಭ್ಯಾಷತ || 1 ||
ಸ್ತುವಂತಃ ಕಂ ಕಮರ್ಚಂತಃ ಪ್ರಾಪ್ನುಯುರ್ಮಾನವಾಃ ಶುಭಮ್ || 2 ||
ಕಿಂ ಜಪನ್ಮುಚ್ಯತೇ ಜಂತುರ್ಜನ್ಮಸಂಸಾರಬಂಧನಾತ್ || 3 ||
ಸ್ತುವನ್ನಾಮಸಹಸ್ರೇಣ ಪುರುಷಃ ಸತತೋತ್ಥಿತಃ || 4 ||
ಧ್ಯಾಯನ್ ಸ್ತುವನ್ನಮಸ್ಯಂಶ್ಚ ಯಜಮಾನಸ್ತಮೇವ ಚ || 5 ||
ಲೋಕಾಧ್ಯಕ್ಷಂ ಸ್ತುವನ್ನಿತ್ಯಂ ಸರ್ವದುಃಖಾತಿಗೋ ಭವೇತ್ || 6 ||
ಲೋಕನಾಥಂ ಮಹದ್ಭೂತಂ ಸರ್ವಭೂತಭವೋಧ್ಭವಮ್ || 7 ||
ಯದ್ಭಕ್ತ್ಯಾ ಪುಂಡರೀಕಾಕ್ಷಂ ಸ್ತವೈರರ್ಚೇನ್ನರಃ ಸದಾ || 8 ||
ಪರಮಂ ಯೋ ಮಹದ್ಬ್ರಹ್ಮ ಪರಮಂ ಯಃ ಪರಾಯಣಮ್ || 9 ||
ದೈವತಂ ದೇವತಾನಾಂ ಚ ಭೂತಾನಾಂ ಯೋವ್ಯಯಃ ಪಿತಾ || 10 ||
ಯಸ್ಮಿಂಶ್ಚ ಪ್ರಲಯಂ ಯಾಂತಿ ಪುನರೇವ ಯುಗಕ್ಷಯೇ || 11 ||
ವಿಷ್ಣೋರ್ನಾಮಸಹಸ್ರಂ ಮೇ ಶ್ರುಣು ಪಾಪಭಯಾಪಹಮ್ || 12 ||
ಋಷಿಭಿಃ ಪರಿಗೀತಾನಿ ತಾನಿ ವಕ್ಷ್ಯಾಮಿ ಭೂತಯೇ || 13 ||
ನಿರ್ವಿಘ್ನಂ ಕುರು ಮೇ ದೇವ ಸರ್ವ ಕಾರ್ಯೇಷು ಸರ್ವದ
ಪ್ರಸನ್ನ ವದನಂ ಧ್ಯಾಯೇತ್ ಸರ್ವ ವಿಘ್ನೋಪ ಶಾಂತಯೇ
Vishnu Sahasranama Preface
ಪೀಠಿಕೆ
ಭಾರತಂ ಸರ್ವವೇದಾಶ್ಚ ತುಲಾಮಾರೋಪಿತಾಃ ಪುರಾ ||
ವ್ಯಾಸಸ್ಯೈವಾಜ್ಞಯಾ ತತ್ರ ತ್ವತ್ಯರಿಚ್ಯತ ಭಾರತಮ್ ||
೨. ಭೀಮಸೇನ - ಭಕ್ತಿ, ಜ್ಞಾನ, ವೈರಾಗ್ಯ, ಪ್ರಜ್ಞಾ, ಮೇಧಾ, ಧೃತಿ, ಸ್ಥಿತಿ, ಯೋಗ, ಪ್ರಾಣ ಮತ್ತು ಬಲ.
೩. ಅರ್ಜುನ - ಶ್ರವಣ, ಮನನ ಮತ್ತು ನಿದಿಧ್ಯಾಸನ
೪.೫. ನಕುಲ-ಸಹದೇವ - ಶೀಲ ಮತ್ತು ವಿನಯ
೬. ದ್ರೌಪದಿ - ವೇದವಿದ್ಯೆ
೭. ಶ್ರೀಕೃಷ್ಣ – ವೇದವೇದ್ಯ