Saturday, October 30, 2010

Vishnusahasranama 484-487


ವಿಷ್ಣು ಸಹಸ್ರನಾಮ:   ಅವಿಜ್ಞಾತಾ ಸಹಸ್ರಾಂಶುರ್ವಿಧಾತಾ ಕೃತಲಕ್ಷಣಃ
484) ಅವಿಜ್ಞಾತಾ
 'ಅ' ಕಾರ ವಾಚ್ಯನಾಗಿ ತನ್ನ ಸ್ವರೂಪವನ್ನು ತಾನೇ ತಿಳಿದವನು  ಅವಿಜ್ಞಾತ. ಸಮಸ್ತ ಚೇತನಾಚೇತನ ಪ್ರಪಂಚದಿಂದ ವಿಲಕ್ಷ
ನಾದ  ಭಗವಂತ ಅವಿಜ್ಞಾತ.
485) ಸಹಸ್ರಾಂಶುಃ
ಸಹಸ್ರಾರು ಕಿರ
ಗಳುಳ್ಳವನು. ಜ್ಞಾನದ ಕಿರಣಗಳಿಂದ ಜಗತ್ತಿನಲ್ಲಿ ಸನ್ನಿಹಿತನಾದ ಭಗವಂತ, ಸೂರ್ಯ ಕಿರಣದಲ್ಲಿ ಸನ್ನಿಹಿತನಾಗಿ ಜಗತ್ತಿಗೆ ಪ್ರಾಣ ಶಕ್ತಿಯನ್ನು ಹರಿಸುತ್ತಾನೆ. ಅಂಶು ಎಂದರೆ 'ಅಂಶ' . ಭಗವಂತ ಅಪರಂಪಾರವಾದ ಸಾಗರದಂತಾದರೆ ಜೀವಗಳು ಒಂದು ಹನಿಯಂತೆ. ಭಗವಂತ ಒಂದು ಬಿಂಬ ಹಾಗು ಆತನಿಗೆ ಕೋಟಿ ಕೋಟಿ ಪ್ರತಿಬಿಂಬ!
486) ವಿಧಾತಾ
ಭಗವಂತ ವಿಶಿಷ್ಟವಾದ, ವಿಲಕ್ಷಣವಾದ, ಧಾರಕ ಶಕ್ತಿ. ನಮ್ಮೊಳಗಿದ್ದು, ನಮ್ಮ ಹೊರಗಿದ್ದು, ನಮ್ಮನ್ನು ಧಾರಣೆ ಮಾಡುವ, ಪೋಷಣೆ ಮಾಡುವ; ಸಂಸಾರದಲ್ಲಿ ಮಾತ್ರವಲ್ಲದೆ ಮೋಕ್ಷದಲ್ಲೂ ರಕ್ಷಿಸುವ ದಿವ್ಯ ಶಕ್ತಿ.
 
487) ಕೃತಲಕ್ಷಣಃ
ಲಕ್ಷಣ ಎಂದರೆ ಗುರುತಿಸುವ ಸಂಗತಿ. ಆಕಾರ, ಗುಣಧರ್ಮ, ಹೆಸರು ಇತ್ಯಾದಿ ಮೂಲಭೂತ ಲಕ್ಷಣಗಳು. ಮನುಷ್ಯರೆಲ್ಲರೂ ಒಂದೇ ತರನಾಗಿದ್ದರೂ ನೂರಕ್ಕೆ ನೂರು ಸಮನಾದ ಎರಡು ವಸ್ತು ಈ ಪ್ರಪಂಚದಲ್ಲಿಲ್ಲ. ಪ್ರತಿಯೊಬ್ಬನೊಳಗೆ ಆಯ ರೂಪನಾಗಿ ಭಗವಂತ ತುಂಬಿದ್ದಾನೆ. ಪ್ರತಿಯೊಂದು ಜೀವಕ್ಕೆ ಒಂದು ಆಕಾರ ಕೊಟ್ಟ, ಆಯಾ ಆಕಾರದ ವಸ್ತುಗಳಿಗೆ ಅದರದ್ದೇ ಆದ ಗುಣಧರ್ಮವನ್ನು ಕೊಟ್ಟ. ಹೀಗಾಗಿ ಪ್ರತಿಯೊಬ್ಬರಿಗೂ ಅವನದೇ ಆದ ಸ್ವಭಾವ. ಒಬ್ಬರ ಸ್ವಭಾವದಂತೆ ಇನ್ನೊಬ್ಬರ ಸ್ವಭಾವ ಇರಲು ಸಾಧ್ಯವಿಲ್ಲ. ಹೀಗೆ ಅನಂತ ರೂಪ ಲಕ್ಷಣವನ್ನು ಹೊಂದಿದ ಭಗವಂತ 
ಕೃತಲಕ್ಷಣಃ

Friday, October 29, 2010

Vishnu sahasranama 477-483


ವಿಷ್ಣು ಸಹಸ್ರನಾಮ:  ಧರ್ಮಗುಬ್ಧರ್ಮಕೃದ್ಧರ್ಮೀ ಸದಸತ್ಕ್ಷರಮಕ್ಷರಮ್
477) ಧರ್ಮಗುಪ್
 
ಧರ್ಮಗುಪ್ ಅಂದರೆ ಧರ್ಮವನ್ನು ಗೊಪನೆ ಮಾಡುವವನು. ಗೊಪನೆ ಎಂದರೆ  ರಕ್ಷಣೆ ಮಾಡುವುದು. ಕೃಷ್ಣ ಗೀತೆಯಲ್ಲಿ ಹೇಳಿದಂತೆ:
ಯದಾಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ |
ಅಭ್ಯುತ್ಥಾನಮಧರ್ಮಸ್ಯ ತದಾssತ್ಮಾನಾಂ ಸೃಜಾಮ್ಯಹಮ್ | (ಅ 4- ಶ್ಲೋ 7)
ಪರಿತ್ರಾಣಾಯ ಸಾಧೂನಾಂ ವಿನಾಶಾಯಚ ದುಷ್ಕೃತಾಮ್ |                      
ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇಯುಗೇ||     (ಅ 4- ಶ್ಲೋ 8)
ಭಗವದ್ ಗೀತೆಯ ಈ ಶ್ಲೋಕದ ಅರ್ಥ ಭಗವಂತನ "
ಧರ್ಮಗುಪ್" ಎನ್ನುವ ನಾಮದಲ್ಲಿ ಅಡಗಿದೆ. ಅಧರ್ಮದ ಕೈ ಮೇಲಾಗಿ,  ಧರ್ಮ ನೆಲೆ ಕಳೆದುಕೊಳ್ಳುವ ಸಂದರ್ಭ ಬಂದಾಗ ಭಗವಂತ ಭೂಮಿಗಿಳಿದು ಬರುತ್ತಾನೆ. ಭಗವಂತನ ಅವತಾರದ ಉದ್ದೇಶವೇ ಧರ್ಮ ಗೊಪನೆ. ನಾವು ಭಗವಂತನ ದಶಾವತಾರವನ್ನು ನೋಡಿದಾಗ ಇದು ಸ್ಪಷ್ಟವಾಗುತ್ತದೆ. ಮತ್ಸ್ಯಾವತಾರದಲ್ಲಿ ವೇದಾಭಿಮಾನಿ ದೇವತೆಗಳನ್ನು ಬಂಧನದಲ್ಲಿಟ್ಟ ಆಸುರಿಶಕ್ತಿಯನ್ನು ನಿಗ್ರಹಿಸಿ ಧರ್ಮ ರಕ್ಷಣೆ ಮಾಡಿದ ಭಗವಂತ, ಧರ್ಮದ ಬಗ್ಗೆ ಅಲಕ್ಷ ತೋರಿದ ದೇವತೆಗಳು ಸೋತಾಗ, ಕೂರ್ಮಾವತಾರಿಯಾಗಿ ಬಂದು ಧರ್ಮ ರಕ್ಷಣೆ ಮಾಡಿದ. ಹೀಗೆ ಆತನ ಎಲ್ಲಾ ಅವತಾರಗಳು ಧರ್ಮದ ರಕ್ಷಣೆಗಾಗಿಯೇ ಆಗಿದೆ. ವೇದವ್ಯಾಸರ ರೂಪದಲ್ಲಿ ಹದಿನೆಂಟು ಪುರಾಣ, ಬ್ರಹ್ಮಸೂತ್ರ, ಮಹಾಭಾರತ ಇತ್ಯಾದಿ ಗ್ರಂಥಗಳನ್ನು ನಮಗೆ ದಯಪಾಲಿಸಿದ ಭಗವಂತ ಧರ್ಮಗುಪ್.
478) ಧರ್ಮಕೃತ್
ಧರ್ಮ ಎಂದರೆ ನಾವು ನಡೆಯಬೇಕಾದ ನಡೆ. ಧರ್ಮಕೃತ್  ಎಂದರೆ ಧರ್ಮವನ್ನು ನಿರ್ಮಾಣ ಮಾಡಿದವ.
ಇನ್ನೊಂದು ಅರ್ಥದಲ್ಲಿ ಧರ್ಮ ಎಂದರೆ ಒಂದು ವಸ್ತುವಿನ ಅಸಾಧಾರಣ ಗುಣ. ಉದಾಹರಣೆಗೆ ಕಣ್ಣಿನ ಧರ್ಮ ನೋಡುವುದು; ಕಿವಿಯ ಧರ್ಮ ಕೇಳುವುದು, ನಾಲಿಗೆಯ ಧರ್ಮ ರುಚಿ ನೋಡುವುದು. ಹೀಗೆ ಒಂದೊಂದು ಇಂದ್ರಿಯಗಳಲ್ಲಿ, ಒಂದೊಂದು ವಸ್ತುವಿನೊಳಗೆ ಒಂದೊಂದು ಧರ್ಮವನ್ನಿಟ್ಟ ಭಗವಂತ ಧರ್ಮಕೃತ್.  
479) ಧರ್ಮೀ
ಎಲ್ಲ ಶುಭ ಧರ್ಮಗಳ ನೆಲೆ, ಮೂಲ ಶಕ್ತಿ  ಹಾಗು  ಜಗತ್ತಿನ ಧಾರಕಶಕ್ತಿಗಳಾದ ದೇವತೆಗಳ ದೊರೆಯಾದ ಭಗವಂತ
ಧರ್ಮೀ.
480) ಸತ್
ಭಗವಂತನನ್ನು ಸತ್ ಚಿತ್ ಆನಂದ ಎಂದು ಉಪಾಸನೆ ಮಾಡುತ್ತೇವೆ. ಇಲ್ಲಿ ಸತ್ ಎಂದರೆ 'ವ್ಯಕ್ತ'. ಆತ ನಿರ್ಧಿಷ್ಟ ಹಾಗು ದೋಷ ರಹಿತ ಜ್ಞಾನಾನಂದ ಮೂರ್ತಿ.
481) ಅಸತ್
ಅಸತ್ ಎಂದರೆ 'ಅವ್ಯಕ್ತ'.  ಭಗವಂತ ಅವ್ಯಕ್ತ ಮೂರ್ತಿ. ಆತ ಎಲ್ಲರ ಕಣ್ಣಿಗೆ ಕಾಣಲಾರ. ಆತನನ್ನು ಒಳಗಣ್ಣಿನಿಂದ ಕಾಣಲು ಪ್ರಯತ್ನಿಸಬೇಕು. 
482) ಕ್ಷರಮ್
ಕ್ಷರಮ್  ಎಂದರೆ ಸಾವಿನ ಒಡೆಯ. ಸಾವು ಯಾರ ಅಧೀನವೋ ಅವನು ಕ್ಷರಮ್. ಕ್ಷರಣ ಎಂದರೆ ನಿರಂತರ ಬಯಸಿದ್ದನ್ನು ಕೊಡುವವನು. ಎಲ್ಲರ ಒಳಗಿದ್ದು ಆನಂದವನ್ನೀಯುವ ಭಗವಂತ ಕ್ಷರಮ್. 
483) ಅಕ್ಷರಮ್
'ನ-ಕ್ಷರತಿ ಅಕ್ಷರಮ್'; ಅಂದರೆ ಎಂದೂ ನಾಶವಿಲ್ಲದವನು. 'ಅಷ್ಣುತೇ  ಇತಿ ಅಕ್ಷರಮ್'; ಅಂದರೆ ಎಲ್ಲಕಡೆ ತುಂಬಿರುವವನು. 'ಅಧಿಕಮ್ ಕ್ಷರತಿ ಅಕ್ಷರಮ್'; ಅಂದರೆ ಎಲ್ಲರಿಗಿಂತ ಹೆಚ್ಚು ಅಭೀಷ್ಟವನ್ನು ಕೊಡತಕ್ಕ ಸರ್ವಶಕ್ತ. 'ಅಕ್ಷ+ರ' ಅಂದರೆ ಸಮಸ್ತ ವರ್ಣಗಳಲ್ಲಿ (ಅಕ್ಷರಗಳಲ್ಲಿ) ರಮಿಸುವವನು. ಹೀಗೆ ಭಗವಂತನ ಈ ನಾಮಕ್ಕೆ ಅನೇಕ ಅರ್ಥಗಳನ್ನು ಕಾಣಬಹುದು.

Monday, October 18, 2010

Vishnu sahasranama 472-476

ವಿಷ್ಣು ಸಹಸ್ರನಾಮ: ವತ್ಸರೋ ವತ್ಸಲೋ ವತ್ಸೀ ರತ್ನಗರ್ಭೋ ಧನೇಶ್ವರಃ
472) ವತ್ಸರಃ
ವತ್ಸರ ಎಂದರೆ ಒಂದು ಅರ್ಥದಲ್ಲಿ 'ವರ್ಷ' ಎನ್ನುವ ಅರ್ಥವನ್ನು ಕೊಡುತ್ತದೆ. ಒಂದು ಪೂರ್ಣ  ವರ್ಷ ಎಂದರೆ 365.2422  ದಿನಗಳು. ಪೂರ್ಣವಾದ ವರ್ಷವನ್ನು ಸಂವಸ್ಸರ ಎನ್ನುತ್ತಾರೆ. ಕಾಲ ನಿಯಾಮಕನಾದ ಚತುರ್ಮುಖ  ಬ್ರಹ್ಮನೊಳಗೆ ಕುಳಿತು ನಿಯಮಿಸುವ ಭಗವಂತ ವತ್ಸರಃ.
ವಸತ್+ರ; ಅಂದರೆ ಯಾರು ತನ್ನ ಹೃದಯದಲ್ಲಿ ಭಗವಂತ ವಾಸವಾಗಿದ್ದಾನೆ ಎಂದು ತಿಳಿದು ನೆಡೆಯುತ್ತಾರೋ ಅವರಿಗೆ ಆನಂದವನ್ನು ಕೊಡುವವ. ವತ್ಸ+ರ- ಮಕ್ಕಳಂತೆ ಜೀವರನ್ನು ರಮಿಸುವ ಭಗವಂತ ವತ್ಸರಃ.
473) ವತ್ಸಲಃ
ಭಗವಂತ ಪರಮ ಭಕ್ತ ವತ್ಸಲ.  ತನ್ನ ಪ್ರೀತಿಯ ಭಕ್ತ ಜಾರಿಬಿದ್ದಾಗ, ಸಂಕಷ್ಟದಲ್ಲಿದ್ದಾಗ ತಾನೇ ಇಳಿದು ಬರುವ ಭಗವಂತ ವತ್ಸಲಃ.
474) ವತ್ಸೀ
ವತ್ಸೀ ಎಂದರೆ ಅನಂತ ಸಂತಾನವುಳ್ಳವನು ಎಂದರ್ಥ! ಚತುರ್ಮುಖ ಬ್ರಹ್ಮನಿಂದ ಹಿಡಿದು ಎಲ್ಲರೂ ಆತನ ಮಕ್ಕಳೇ.  ಬ್ರಹ್ಮ-ವಾಯುಗಳನ್ನು ಮಕ್ಕಳಾಗಿ ಪಡೆದ ಭಗವಂತ ವತ್ಸೀ.
475) ರತ್ನಗರ್ಭಃ
'ರತಿ' ಯನ್ನು ತನ್ನ ಗರ್ಭದಲ್ಲಿ ಧರಿಸಿದವ.  ಅಂದರೆ ಭಗವಂತ ಆನಂದದ ಕಡಲು. ಆತನ ಆನಂದದ ಆವಿರ್ಭಾವವೇ ಈ ಪ್ರಪಂಚ. ಇನ್ನು ರತ್ನ ಎಂದರೆ ಸಂಪತ್ತು ಎನ್ನುವ ಅರ್ಥವನ್ನು ಕೊಡುತ್ತದೆ. ಈ ಪ್ರಪಂಚವೇ ಒಂದು ಮಹಾ ಸಂಪತ್ತು . ಇಂತಹ ಸಂಪತ್ತನ್ನು ತನ್ನ ಗರ್ಭದಲ್ಲಿ ಧರಿಸಿ,ಆನಂದದಿಂದ ತುಂಬಿ ತುಳುಕುವ ಭಗವಂತ ರತ್ನಗರ್ಭಃ.
476) ಧನೇಶ್ವರಃ
ಭಗವಂತ ಸರ್ವ ಸಂಪತ್ತಿನ ಒಡೆಯ. ಇಲ್ಲಿ ಧನ ಎಂದರೆ ಹಣವಿರಬಹುದು, ಜ್ಞಾನವಿರಬಹುದು ಅಥವಾ ಭಕ್ತಿ ಇರಬಹುದು. ಎಲ್ಲಾ ಸಂಪತ್ತಿನ ಅಧಿಪತಿ ಭಗವಂತ. ಆತ ಕೊಟ್ಟರೆ ನಾವು ಧನಿಕರು ಇಲ್ಲದಿದ್ದರೆ ಇಲ್ಲ! ಕೆಲವೊಮ್ಮೆ ಭಗವಂತ  ನಮ್ಮ ಕೈಯನ್ನು ಸಂಪೂರ್ಣ ಖಾಲಿ ಮಾಡಿ ನಮ್ಮನ್ನು ಇನ್ನೊಂದು ರೀತಿಯಲ್ಲಿ ಉದ್ದಾರ ಮಾಡುತ್ತಾನೆ. ಇದನ್ನೇ ಕೃಷ್ಣ ಈ ರೀತಿ ಹೇಳಿದ್ದಾನೆ. "ಯಸ್ಸ್ಯಮ್ ಅನುಗ್ರಹಾಮಿ ತಸ್ಸ್ಯ ವಿತ್ತಮ್ ಹರಾಮ್ಯಹಂ" ಇದಕ್ಕೆ ಉತ್ತಮ ನಿದರ್ಶನ ರಾಜಸೂಯ ಯಾಗ ಮಾಡಿ ಪ್ರಪಂಚವನ್ನೇ ಗೆದ್ದ ಧರ್ಮರಾಯ. ಇಂತಹ ಧರ್ಮರಾಯ ಕೇವಲ ಒಂದು ವಾರದಲ್ಲಿ ಬಿಡಿಗಾಸೂ ಇಲ್ಲದೆ ಕಾಡಿಗೆ ಹೋದ!  ಎಲ್ಲವೂ ಆ ಭಗವಂತನ   ಸಂಕಲ್ಪ. ಆತ ಕೊಟ್ಟರೆ ಇದೆ, ಇಲ್ಲದಿದ್ದರೆ ಇಲ್ಲ. ಆದರೆ ಇರುವುದು ಇಲ್ಲದಿರುವುದು ಎಲ್ಲವೂ ನಮ್ಮ ಒಳಿತಿಗಾಗಿ! ಹೀಗೆ ಜ್ಞಾನ, ಭಕ್ತಿ, ಐಶ್ವರ್ಯ ಎಲ್ಲವುದರ ಈಶ್ವರ ಎಲ್ಲಾ ಸಂಪತ್ತಿನ ಒಡೆಯ ಭಗವಂತ ಧನೇಶ್ವರಃ.

Sunday, October 17, 2010

Vishnu sahasranama 467-471


ವಿಷ್ಣು ಸಹಸ್ರನಾಮ: ಸ್ವಾಪನಸ್ಸ್ವವಶೋ ವ್ಯಾಪೀ ನೈಕಾತ್ಮಾ ನೈಕಕರ್ಮಕೃತ್
467) ಸ್ವಾಪನಃ
ಸ್ವಾಪನ ಎಂದರೆ ನಿದ್ರೆ ಬರಿಸುವವನು! ಈ ಹಿಂದೆ ಹೇಳಿದಂತೆ ಸೃಷ್ಟಿ ಕಾಲ 432 ಕೋಟಿ ವರ್ಷ ಆ ನಂತರ 432 ವರ್ಷ ಪ್ರಳಯಕಾಲ.  ಈ ಪ್ರಳಯ ಕಾಲದಲ್ಲಿ ಸರ್ವ ಜೀವವೂ ಸೂಕ್ಷ್ಮ ಸ್ಥಿತಿಯಲ್ಲಿದ್ದು, ಭಗವಂತನ ಮಡಿಲಲ್ಲಿ  ನಿದ್ರಿಸುತ್ತಿರುತ್ತವೆ. ಜೀವಕ್ಕೆ ಇದು ವಿಶ್ರಾಂತಿ ಕಾಲ. ಪ್ರಳಯದಲ್ಲಿ ಜೀವರನ್ನು ನಿದ್ರಾವಸ್ಥೆಯಲ್ಲಿರಿಸುವ  ಭಗವಂತ ಸ್ವಾಪನಃ.
ಪ್ರಳಯ ಕಾಲದಲ್ಲಷ್ಟೇ ಅಲ್ಲ ದಿನನಿತ್ಯ ನಿದ್ರಾಕಾಲದಲ್ಲಿ ನಾವು ಭಗವಂತನ ಮಡಿಲಲ್ಲಿ ಮಲಗಿರುತ್ತೇವೆ. ಸ್ವಪ್ನ  ಪ್ರಪಂಚದ ವಿಸ್ಮಯವನ್ನು ನಮಗೆ ಕೊಟ್ಟಿರುವ ಭಗವಂತ ಸ್ವಾಪನಃ.
468) ಸ್ವವಶಃ
ಸ್ವತಂತ್ರನಾದವನು; ಇನ್ನೊಬ್ಬರಿಗೆ ಅದೀನನಾಗದವನು.
469) ವ್ಯಾಪೀ
ಎಲ್ಲೆಡೆ ವ್ಯಾಪಿಸಿದವನು; ಎಲ್ಲರ ಮನಸ್ಸಿನಲ್ಲಿ, ಎಲ್ಲರ ಹೃದಯದಲ್ಲಿ, ಎಲ್ಲರ ಒಳಗೆ, ಎಲ್ಲರ ಹೊರಗೆ ಹೀಗೆ ಸರ್ವ ವ್ಯಾಪಿಯಾಗಿರುವ  ಭಗವಂತ 'ವ್ಯಾಪೀ'.
470) ನೈಕಾತ್ಮಾ
ಸಾವಿರಾರು ರೂಪಗಳನ್ನು ತೊಟ್ಟವನು; ಅನಂತ ಜೀವದೊಳಗೆ ಅನಂತ ರೂಪದಲ್ಲಿ ತುಂಬಿರುವ ಬಿಂಬ ರೂಪಿ ಅಂತರ್ಯಾಮಿ ಭಗವಂತ ನೈಕಾತ್ಮಾ.
471) ನೈಕಕರ್ಮಕೃತ್
ಸಾವಿರಾರು ಕ್ರಿಯೆಗಳನ್ನು ನಡೆಸುವವನು; ಅನಂತ ಜೀವದೊಳಗೆ ಅನಂತ ರೂಪದಲ್ಲಿ ತುಂಬಿ ಅನಂತ ಕರ್ಮಗಳನ್ನು ಅನಂತ ಕಾಲದ ತನಕ ಮಾಡುತ್ತಿರುವ ಭಗವಂತ ನೈಕಕರ್ಮಕೃತ್

Saturday, October 16, 2010

Vishnu sahasranama 463-466

ವಿಷ್ಣು ಸಹಸ್ರನಾಮ: ಮನೋಹರೋ ಜಿತಕ್ರೋಧೋ ವೀರಬಾಹುರ್ವಿದಾರಣಃ
463) ಮನೋಹರಃ
ಹಿಂದೆ ಸುಮುಖಃ ಎನ್ನುವ ನಾಮದಲ್ಲಿ ನೋಡಿದಂತೆ ಭಗವಂತ ಸೌಂದರ್ಯದ ಖನಿ. ಬಾಗವತದಲ್ಲಿ ಕವಿಗಳು ಭಗವಂತನನ್ನು ಮನ್ಮಥ ಎನ್ನುತ್ತಾರೆ. ಇದು ಕೇವಲ ದೃಷ್ಟಾಂತ ಅಷ್ಟೇ. ಏಕೆಂದರೆ ಭಗವಂತ ಮನ್ಮಥನ ಅಪ್ಪ! ಎಲ್ಲರ ಮನಸ್ಸನ್ನು ಅಪಹರಿಸುವ ಚಲುವಿನ ಖನಿ ಭಗವಂತ ಮನೋಹರಃ.
ಮನೋಮಯ ಕೋಶದ ನಿಯಾಮಕನಾದ ಹರನೊಳಗಿರುವ ಭಗವಂತ ಮನೋಹರ. ಇನ್ನು ಅನ್ನಮಯ ಕೋಶ, ಮನೋಮಯಕೋಶ, ವಿಜ್ಞಾನಮಯಕೋಶ ಎಲ್ಲವನ್ನೂ ದಾಟಿದರೆ ಅಮರಕೋಶ. ಅದೇ ನಿತ್ಯವಾಗಿರುವ ಮನನಶೀಲವಾದ ಜೀವ. ಈ ಜೀವವನ್ನು ಸಂಸಾರ ಬಂಧದಿಂದ ಕಳಚಿ ಮೋಕ್ಷವನ್ನು ಕೊಡುವ ಭಗವಂತ
ಮನೋಹರಃ.   
464) ಜಿತಕ್ರೋಧಃ
ಭಗವಂತ ಕೋಪವನ್ನು ಗೆದ್ದವ. ಕೋಪ ಮನಸ್ಸಿನ ವಿಕೃತ ರೂಪ. ಸರ್ವವನ್ನು ಗೆದ್ದ ಋಷಿ ಮುನಿಗಳೂ ಕೂಡಾ ಕೆಲವೊಮ್ಮೆ ಕೋಪಕ್ಕೆ ಬಲಿಬೀಳುತ್ತಾರೆ. ಭಗವಂತ ಎಂದೂ ಕೋಪದ ವಶವಾಗುವುದಿಲ್ಲ ಆದರೆ ಕೆಲವೊಮ್ಮೆ ತಾಯಿ ತನ್ನ ಮಗುವಿನ ಉದ್ಧಾರಕ್ಕಾಗಿ  ಕೊಪಗೊಳ್ಳುವಂತೆ ಕೋಪದ ನಟನೆ ಮಾಡುತ್ತಾನೆ. ಆ ಕೋಪ ಮೇಲ್ನೋಟಕ್ಕೆ ದುಃಖಕರವಾಗಿ ಕಂಡರೂ ಸುಖಾಂತವಾಗಿರುತ್ತದೆ. ಕ್ರೋಧ ವಶವಾದ ಧ್ಯತ್ಯ ಪಡೆಯನ್ನು ಗೆದ್ದ ಭಗವಂತ
ಜಿತಕ್ರೋಧಃ.
465) ವೀರಬಾಹುಃ
ಭಗವಂತನ ತೋಳು ಪೌರುಷ ತುಂಬಿದ ತೋಳು. ಸತ್ಯವನ್ನು ವಿರೋಧಿಸುವ, ಯತಾರ್ಥವನ್ನು ದ್ವೇಷಿಸುವ, ಸುಳ್ಳನ್ನು ಸಮರ್ಥಿಸುವ, ದುಷ್ಟ ಶಕ್ತಿಯನ್ನು  ನಿಗ್ರಹಿಸುವ ತೋಳುಗಳುಳ್ಳ ಭಗವಂತ ದ್ವೇಷಿಸುವುದು ಅಜ್ಞಾನವನ್ನು.ಸದಾ ಜ್ಞಾನವನ್ನೂ ಪ್ರೀತಿಸುವ ಹಾಗು ರಕ್ಷಿಸುವ ಭಗವಂತ
ವೀರಬಾಹುಃ. 
466) ವಿದಾರಣಃ
ವಿದಾರಣಃ ಎಂದರೆ ಸೀಳಿಬಿಡುವ ಗುಣದವನು. ವೀರ ಬಾಹುವಾದ ಭಗವಂತ ದುಷ್ಟರನ್ನು, ಎದುರಾಳಿಗಳನ್ನು ಸೀಳಿಬಿಡುವ ಗುಣದವನು.ಕೃಷ್ಣಾವತಾರದಲ್ಲಿ ನರಸಿಂಹಾವತಾರದಲ್ಲಿ ಇದಕ್ಕೆ ನಿದರ್ಶನಗಳಿವೆ. ಜರಾಸಂದನನ್ನು ಭೀಮನೊಳಗೆ ಕೂತು ಸೀಳಿ ಸುಮಾರು 22,800 ರಾಜಕುಮಾರರನ್ನು ಸೆರೆಮನೆಯಿಂದ ಬಿಡಿಸಿದ ಕೃಷ್ಣ, ನರಸಿಂಹಾವತಾರದಲ್ಲಿ ಹಿರಣ್ಯಕಶಿಪುವಿನ ಎದೆಬಗೆದ.ಹೀಗೆ ದುಷ್ಟರ ನಾಶಕ್ಕಾಗಿ ಸೀಳುವ ಗುಣವುಳ್ಳ ಭಗವಂತ ವಿದಾರಣಃ

Friday, October 15, 2010

Vishnu Sahasranama 457-462

ವಿಷ್ಣು ಸಹಸ್ರನಾಮ:  ಸುವ್ರತಃ ಸುಮುಖಃ ಸೂಕ್ಷ್ಮಃ ಸುಘೋಷಃ ಸುಖದಃ ಸುಹೃತ್
"ಸುವ್ರತಃ ಸುಮುಖಃ ಸೂಕ್ಷ್ಮಃ ಸುಘೋಷಃ ಸುಖದಃ ಸುಹೃತ್" ಈ ಶ್ಲೋಕದಲ್ಲಿ ಬರುವ ಎಲ್ಲಾ ನಾಮಗಳು 'ಸು' ಪದದಿಂದ ಆರಂಭವಾಗುತ್ತದೆ. ಭಗವಂತನನ್ನು ಮೂಲ ನಾಮ ವ್ಯಾಹೃತಿಯಲ್ಲಿ 'ಸ್ವಃ' (ಭೂರ್ಭುವಃ ಸ್ವಃ) ಎಂಬ ನಾಮದಿಂದ ಸಂಭೋದಿಸುತ್ತಾರೆ. ಆದ್ದರಿಂದ 'ಸು' ಎಂದರೆ ಸುಂದರ, ಚಲುವ,ಆನಂದಪೂರ್ಣ,ಸುಸ್ಥಿತ, ಸುವ್ಯವಸ್ಥಿತ ಇತ್ಯಾದಿ. ಈ ಅರ್ಥ ಇಲ್ಲಿ ಬರುವ ಎಲ್ಲಾ ನಾಮಗಳಿಗೂ ಅನ್ವಯ.
457) ಸುವ್ರತಃ
ವ್ರತ ಎಂದರೆ ದೀಕ್ಷೆ, ನಿಷ್ಠೆ, ಶಿಸ್ತುಬದ್ಧವಾದ ಕ್ರಿಯೆ. ಇಂದ್ರಿಯ ನಿಗ್ರಹಕ್ಕೆ ಮಾಡುವ ನಿಯತವಾದ ಕ್ರಿಯೆ. ವ್ರತದಲ್ಲಿ ಎರಡು ವಿಧ. ಯಾವುದೋ ಒಂದು ಫಲಾಪೇಕ್ಷೆಯಿಟ್ಟು ಮಾಡುವ ವ್ರತ ಹಾಗು ಭಗವಂತನ ಪ್ರೀತ್ಯರ್ಥವಾಗಿ ಮಾಡುವ ವ್ರತ. ಫಲಾಪೇಕ್ಷೆಯಿಟ್ಟು ಮಾಡುವ ವ್ರತವನ್ನು ಕಾಮ್ಯ ಎನ್ನುತ್ತಾರೆ. ಇದನ್ನು ಶಾಸ್ತ್ರದಲ್ಲಿ ವಿರೋಧಮಾಡುತ್ತಾರೆ. ಭಗವಂತನ ಅನುಗ್ರಹ,ಪ್ರೀತಿಗೋಸ್ಕರ ಮಾಡುವ ವ್ರತ ನಿಷ್ಕಾಮ ವ್ರತ. ಇಲ್ಲಿ ವ್ರತ ಮಾಡುವವರು ಭಗವಂತನ ಪ್ರೀತಿಯನ್ನು ಬಿಟ್ಟು ಇನ್ನೇನನ್ನೂ ಬಯಸುವುದಿಲ್ಲ. ಇದಕ್ಕೆ ಉತ್ತಮ ನಿದರ್ಶನ ಪ್ರಹಲ್ಲಾದನ ವ್ರತ. ತನ್ನ ಮುಂದೆ ಪ್ರತ್ಯಕ್ಷನಾದ ಭಗವಂತ ನಿನಗೇನೂ ಬೇಕು ಎಂದು ಕೇಳಿದಾಗ ಆ ಪುಟ್ಟ ಬಾಲಕ 'ನಾನು ನಿನ್ನನ್ನು ಭಕ್ತಿ ಮಾಡಿದ್ದು ನಿನ್ನಿಂದ ಪ್ರತಿಫಲಪಡೆಯುವುದಕ್ಕಾಗಿ ಅಲ್ಲ, ನನ್ನ ಭಕ್ತಿ ವ್ಯಾಪಾರವಲ್ಲ ಎನ್ನುತ್ತಾನೆ'! ಸೃಷ್ಟಿ-ಸ್ಥಿತಿ-ಸಂಹಾರ ಭಗವಂತನ ನಿಷ್ಕಾಮ ವ್ರತ. ರಾಮಾಯಣದಲ್ಲಿ ಶ್ರೀರಾಮಚಂದ್ರ ಹೇಳುವಂತೆ "ಅಭಯಂ ಸರ್ವ ಭೂತೇಭ್ಯೋ ದದಾಮಿ ಏತದ್ ವ್ರತಂ ಮಮಃ" ಅಂದರೆ 'ಯಾರು ನನ್ನಲ್ಲಿ ಶರಣು ಕೋರಿ ಬರುತ್ತಾರೋ ಅವರಿಗೆ ಜಗತ್ತಿನಿಂದ ರಕ್ಷಣೆ ಕೊಡುವುದು ನನ್ನ ವ್ರತ'. ಇದನ್ನೇ ಕೃಷ್ಣ ಗೀತೆಯಲ್ಲಿ ಹೀಗೆ ಹೇಳಿದ್ದಾನೆ:
ಅನನ್ಯಾಶ್ಚಿಂತಯಂತೋ ಮಾಂ ಯೇ ಜನಾಃ ಪರ್ಯುಪಾಸತೇ

ತೇಷಾಂ ನಿತ್ಯಾಭಿಯುಕ್ತಾನಾಂ ಯೋಗಕ್ಷೇಮಂ ವಹಾಮ್ಯಹಮ್
ಅಂದರೆ 'ಬೇರೆಲ್ಲಾ ತೊರೆದು ನನ್ನನ್ನೇ ನೆನೆಯುತ್ತ ಪರಿಪರಿಯಿಂದ ಪೂಜಿಸುವ(ನಿತ್ಯ ನಿಷ್ಕಾಮ ಕರ್ಮ) ಜನರು ಎಲ್ಲೆಲ್ಲೂ ನನ್ನ ಸೇವೆಗೆ ಮುಡಿಪಾದವರು. ಅವರ ಯೋಗ-ಕ್ಷೇಮದ ಹೊಣೆ ನನ್ನದು'. ಭಗವಂತ ಎಂದೂ ಹೂಡಿದ ಬಾಣ ಹಿಂದೆ ಪಡೆಯುವುದಿಲ್ಲ, ಆಡಿದ ಮಾತನ್ನು ತಪ್ಪುವುದಿಲ್ಲ. ಆದರೆ ಕೆಲವೊಮ್ಮೆ ಆತನ ನುಡಿ ನೆರವೇರಲು ಅನೇಕ ಜನ್ಮಗಳೇ ಹಿಡಿಯಬಹುದು! ಹೀಗೆ ನಿರಂತರ ರಕ್ಷಣೆಯ ವ್ರತವನ್ನು ಮಾಡುವ ಆನಂದಮಯ ಭಗವಂತ ಸುವ್ರತಃ.
458) ಸುಮುಖಃ
ಮೇಲೆ ಹೇಳಿದ 'ಸು' ಪದದ ಅರ್ಥವನ್ನು 'ಮುಖ' ಪದದೊಂದಿಗೆ ಸೇರಿಸಿದರೆ ಭಗವಂತನ 'ಸುಮುಖಃ' ನಾಮದ ಅರ್ಥ ತೆರೆದುಕೊಳ್ಳುತ್ತದೆ. ಭಗವಂತ ಸುಂದರವಾದ ರೂಪವನ್ನು ಈ ನಾಮ ಹೇಳುತ್ತದೆ. ವಿಶೇಷವಾಗಿ ಕೃಷ್ಣಾವತಾರದಲ್ಲಿ ಭಗವಂತ ತನ್ನ ಸುಮುಖ ರೂಪವನ್ನು ತೋರಿದ್ದಾನೆ.
459) ಸೂಕ್ಷ್ಮಃ
ಭಗವಂತ ಜ್ಞಾನಾನಂದಮಯ. ಆತ ಸೂಕ್ಷ್ಮದಲ್ಲಿ ಸೂಕ್ಷ್ಮ ಹಾಗು ಬೃಹತ್ ರೂಪಿ (Smaller than Smallest and Bigger than Biggest). ಹೀಗಿದ್ದರೂ ಕೂಡಾ ಆತ ಇಷ್ಟಪಟ್ಟರೆ ಭಕ್ತರ ಮುಂದೆ ಕಾಣಿಸಿಕೊಳ್ಳುತ್ತಾನೆ. ರಾಮನ ಕಾಲದಲ್ಲಿದ್ದವರು ರಾಮನನ್ನು, ಕೃಷ್ಣನ ಕಾಲದಲ್ಲಿದ್ದವರು ಕೃಷ್ಣನನ್ನು ಕಂಡಿದ್ದಾರೆ. ಒಳ್ಳೆಯವರು-ಕೆಟ್ಟವರು, ಸಜ್ಜನರು-ದುರ್ಜನರು, ಪಂಡಿತರು-ಪಾಮರರು, ಗಂಡಸರು-ಹೆಂಗಸರು, ಎಳೆಯರು-ಮುದುಕರು, ಹೀಗೆ ಎಲ್ಲರೂ ಕಂಡಿದ್ದಾರೆ. ನಿಜವಾಗಿ ಅವರು ಕಂಡಿದ್ದು ನಮ್ಮ ಕಣ್ಣಿಗೆ ಕಾಣದ ಸೂಕ್ಷ್ಮ ತತ್ವವನ್ನು. ಇಂತಹ ಸೂಕ್ಷ್ಮಾತಿ-ಸೂಕ್ಷ್ಮ ತತ್ವ ಭಗವಂತ ಸೂಕ್ಷ್ಮಃ.
460) ಸುಘೋಷಃ
ಭಗವಂತನ ಮಾತು ಬಹಳ ಸುಂದರ. ಭಗವಂತನ ಆದೇಶ ಪಡೆದು ಭೂಮಿಯಲ್ಲಿ ಹುಟ್ಟಿದ ಮಹಾಪುರುಷರ ಮಾತಿನ ನಾದದಲ್ಲೇ ಭಗವಂತನನ್ನು ದ್ವನಿಸುವ ಶಕ್ತಿ ಇರುತ್ತದೆ.
ಮಂತ್ರಗಳಲ್ಲಿ ಶಕ್ತಿ ಅಡಗಿರುವುದು ಅದರ ನಾದದಲ್ಲಿ. ಮಂತ್ರವನ್ನು ಪಠಿಸುವವರ ಇಷ್ಟಾರ್ಥ ಸಿದ್ಧಿಗಾಗಿ ಅದನ್ನು Compose ಮಾಡಿದ್ದಾರೆ. ಇದರ ಹಿಂದೆ ಶಕ್ತಿಯುತ ಮನೋಬಲ (Will power) ಅಡಗಿದೆ. ಭಗವಂತನ ಭಕ್ತರ ನಾದವೇ ಇಷ್ಟೊಂದು ಶಕ್ತಿಶಾಲಿಯಾಗಿರುವಾಗ ಇನ್ನು ಭಗವಂತನ ನಾದ ಹಾಗು ಮನೋಬಲ ನಮ್ಮಿಂದ ಊಹಿಸುವುದು ಅಸಾಧ್ಯ. ಜಗತ್ತಿನಲ್ಲಿ ಯಾವ ಯಾವ ಘೋಷಗಳಿವೆ ಅವುಗಳೆಲ್ಲವೂ ಸಮೀಚೀನವಾದ ಭಗವಂತನನ್ನೇ ಹೇಳುತ್ತವೆ. ಈ ಪ್ರಪಂಚದಲ್ಲಿರುವ ಎಲ್ಲಾ ನಾದಗಳೂ, ಎಲ್ಲಾ ಬಾಷೆಗಳು ಭಗವಂತನನ್ನೇ ಹೇಳುತ್ತವೆ. ಪಕ್ಷಿಗಳ ಚಿಲಿಪಿಲಿ, ಪ್ರಾಣಿಗಳ ಕೂಗು, ನೀರಿನ ಝುಳು-ಝುಳು, ಸಮುದ್ರದ ಮೊರೆತ, ಗಾಳಿಯ ಸುಯಿಲು, ಎಳೆಗಳ ಮರ್ಮರ ಎಲ್ಲಾ ಸಮಸ್ತ ನಾದವೂ ಕೂಡಾ ಭಗವಂತನ ಗುಣಗಾನ ಮಾಡುವುದರಿಂದ ಆತ ಸುಘೋಷಃ.
461) ಸುಖದಃ
ಭಗವಂತನ ಬಗ್ಗೆ ಕೇಳುವುದೇ ಆನಂದ. ಆನಂದಮಯನಾದ ಆತನ ಚಿಂತನೆ ನಮ್ಮನ್ನು ಆನಂದಮಯರನ್ನಾಗಿ ಮಾಡುತ್ತದೆ. ಆತ ಆನಂದ ಸಾಗರ. ಆತನ ಬಳಿಗೆ ಹೋದವರು ಆನಂದ ಸಾಗರದಲ್ಲಿ ಮುಳುಗಿರುತ್ತಾರೆ. ಇನ್ನೊಂದು ಅರ್ಥದಲ್ಲಿ ಆತ ಸುಖವನ್ನು 'ಧ್ಯತಿಸುವವನು'. ಯಾರು ಅಸತ್ಯದ ದಾರಿಯಲ್ಲಿ ಸಾಗುತ್ತಾರೋ ಅವರ ಸುಖವನ್ನು ಕಸಿದುಕೊಳ್ಳುವ, ಸುಖ-ದುಃಖದ ಮಿಶ್ರಣದ ಬದುಕನ್ನು ಕೊಟ್ಟು ನಮ್ಮನ್ನು ಮುಕ್ತಿಯತ್ತ ಕೊಂಡೊಯ್ಯುವ ಭಗವಂತ ಸುಖದಃ.
462) ಸುಹೃತ್
ಎಲ್ಲಾ ಜೀವ ಜಾತಕ್ಕೆ ಆತ್ಮೀಯ ಗೆಳೆಯ. ಭಗವಂತ ನಮಗೆ ಕೊಡುವ ಕಷ್ಟ ನಮ್ಮ ಒಳಿತಿಗಾಗಿ, ನಮ್ಮ ಜೀವನದಲ್ಲಿ ನಮಗರಿವಿಲ್ಲದಿದ್ದರೂ, ಅವನು ಮಾಡುವ ಉಪಕಾರ ಅಪರಿಮಿತ. ಹೀಗೆ ಆತ್ಮೀಯನಾಗಿ ಎಂದೆಂದೂ ನಮ್ಮೊಂದಿಗಿರುವ ಭಗವಂತ ಸುಹೃತ್.

Thursday, October 14, 2010

Vishnusahasranama 453-456

ವಿಷ್ಣು ಸಹಸ್ರನಾಮ: ಸರ್ವದರ್ಶೀ ವಿಮುಕ್ತಾತ್ಮಾ ಸರ್ವಜ್ಞೋ ಜ್ಞಾನಮುತ್ತಮಮ್
453) ಸರ್ವದರ್ಶೀ
ಎಲ್ಲವನ್ನು ಕಾಣುವವನು ಹಾಗು ಕಾಣಿಸುವವನು ಸರ್ವದರ್ಶೀ. ನಮಗೆ ಗೊತ್ತಿರುವುದು ಕೇವಲ ವರ್ತಮಾನ ಜನ್ಮದ ವಿಷಯ ಮಾತ್ರ. ನಮ್ಮ ಪೂರ್ವ ಜನ್ಮದಲ್ಲಿ ನಾವು ಏನೇನು ಕರ್ಮಗಳನ್ನು ಮಾಡಿ ಈ ಜನ್ಮ ಪಡೆದಿದ್ದೇವೆ ಎನ್ನುವ ಪರಿಜ್ಞಾನ ನಮಗಿರುವುದಿಲ್ಲ. ಭಗವಂತನಿಗೆ ನಮ್ಮ ಸರ್ವ ಜನ್ಮದ, ಸರ್ವ ಕಾಲದ, ಸರ್ವಜೀವನದ ಸ್ಥಿತಿ ಗತಿಗಳು ತಿಳಿದಿರುತ್ತವೆ. ನಮಗೆ ನಮ್ಮ ಹಿಂದಿನ ಜನ್ಮದ ಫಲ ಎಂದೂ ತಪ್ಪುವುದಿಲ್ಲ. ಹುಟ್ಟುವಾಗಲೇ ನಾವು ಜನ್ಮಾಂತರದ ನಂಟಿನೊಂದಿಗೆ ಹುಟ್ಟುತ್ತೇವೆ. ಇದು ಕರ್ಮಚಕ್ರ. ಇದನ್ನೆಲ್ಲ ಬಲ್ಲ ಭಗವಂತ ಸರ್ವದರ್ಶಿ.
454) ವಿಮುಕ್ತಾತ್ಮಾ
ಯಾವ ಪೂರ್ವಾಗ್ರಹಗಳೂ, ಯಾವ ಲೇಪವೂ ಇಲ್ಲದ ಭಗವಂತ ವಿಮುಕ್ತಾತ್ಮಾ. ಭಗವಂತ ಯಾವುದೂ ದ್ವೇಷ ಅಥವಾ ಸ್ವಂತ ಹಿತಾಸಕ್ತಿಗಾಗಿ ಜ್ಞಾನ-ಅಜ್ಞಾನ ಬಡತನ-ಶ್ರೀಮಂತಿಕೆಯನ್ನು ಕೊಡುವುದಿಲ್ಲ. ಅವರವರ ಕರ್ಮಫಲಕ್ಕನುಗುಣವಾಗಿ ನಿರ್ಲಿಪ್ತನಾಗಿ ಈ ಸೃಷ್ಟಿ-ಸ್ಥಿತಿ-ಸಂಹಾರ ಕಾರ್ಯವನ್ನು ನಿರಂತರ ನಿಯಮಬದ್ದವಾಗಿ ಮಾಡುತ್ತಿರುತ್ತಾನೆ. ಇಂತಹ ಭಗವಂತನಿಗೆ ವಿಮುಕ್ತಾತ್ಮಾ ಅನ್ವರ್ಥ ನಾಮ. ಮುಕ್ತಿಯನ್ನು ಪಡೆದ ವಿಮುಕ್ತರಿಗೆ ಮುಕ್ತಿಯಲ್ಲೂ ನಿಯಾಮಕನಾದ ಭಗವಂತ ವಿಮುಕ್ತಾತ್ಮಾ.
455) ಸರ್ವಜ್ಞಃ
ಎಲ್ಲವನ್ನು ಬಲ್ಲವನು ಸರ್ವಜ್ಞ. ಜ್ಞಾನಸ್ವರೂಪನೂ, ಪರಿಪೂರ್ಣನೂ ಆದ ಭಗವಂತ ಸರ್ವಜ್ಞಃ
456)ಜ್ಞಾನಮುತ್ತಮಮ್
'ಜ್ಞಾ' ಎಂದರೆ ತಿಳಿದವನು, 'ಜ್ಞಾನಂ' ಎಂದರೆ ತಿಳಿವು. ಭಗವಂತ ಸರ್ವೋತ್ತಮ ಜ್ಞಾನ ಸ್ವರೂಪನೂ ಹೌದು, ಜ್ಞಾನ ಉಳ್ಳವನೂ ಹೌದು. ಎಲ್ಲಕ್ಕಿಂತ ಮಿಗಿಲಾದ ಅನಂತ ಜ್ಞಾನ ಸ್ವರೂಪಿ ಭಗವಂತ ಜ್ಞಾನಮುತ್ತಮಮ್.

Tuesday, October 12, 2010

Vishnu sahasranama 447-452


ವಿಷ್ಣು ಸಹಸ್ರನಾಮ: ಯಜ್ಞ ಇಜ್ಯೋ ಮಹೇಜ್ಯಶ್ಚ ಕ್ರತುಃ ಸತ್ರಂ ಸತಾಂ ಗತಿಃ
447) ಯಜ್ಞಃ

ವಿಶ್ವದ ಸೃಷ್ಟಿಯೇ ಒಂದು ಯಜ್ಞ. ಎಲ್ಲೆಲ್ಲೂ ಹರಡಿರುವ ವಸ್ತುವನ್ನು ಒಂದು ಕಡೆ ಒಂದುಗೂಡಿಸುವುದು ಯಜ್ಞ. ಬೇರೆ ಬೇರೆ ಕಡೆಯಿಂದ ಬಂದು ಒಂದು ಕಡೆ ಸೇರಿ ಜ್ಞಾನಾರ್ಜನೆ ಮಾಡುವುದು ಜ್ಞಾನ ಯಜ್ಞ. ಸೃಷ್ಟಿಯ ಆದಿಯಲ್ಲಿ ಪರಮಾಣುರೂಪದಲ್ಲಿದ್ದ ಈ ಸೃಷ್ಟಿಯನ್ನು ಒಂದುಗೂಡಿಸಿ ಪ್ರಪಂಚ ಸೃಷ್ಟಿಮಾಡಿದ ಭಗವಂತ ಯಜ್ಞಃ. ನಾವು ಮಾಡುವ ಯಜ್ಞ ಕೂಡಾ ಈ ಸೃಷ್ಟಿಯ ಸಂಕೇತ. ಯಜ್ಞ ಕುಂಡ ಸೃಷ್ಟಿಗೆ ಕಾರಣವಾದ ಗರ್ಭ; ಅದರೊಳಗಿನ ಪ್ರಜ್ವಲಿಸುವ ಅಗ್ನಿ 'ಜೀವ'; ತುಪ್ಪದ ಆಹುತಿ ಸೃಷ್ಟಿಗೆ ಮೂಲಕಾರಣವಾದ ವೀರ್ಯ.
ಇರುವುದನ್ನೆಲ್ಲ ಬಲ್ಲವನು; ಯಜ್ಞದಲ್ಲಿ ನೆಲೆಸಿದವನು ಆದ ಭಗವಂತ ಯಜ್ಞಃ.
448) ಇಜ್ಯಃ
ಎಲ್ಲರಿಂದ ಇಜ್ಯನಾದ ಭಗವಂತ ಇಜ್ಯ. ಇಲ್ಲಿ ಇಜ್ಯ ಎಂದರೆ ಎಲ್ಲರಿಂದ ಪೂಜಿಸಲ್ಪಡುವವನು. ಯಜ್ಞದಲ್ಲಿ ನಾವು ಪೂಜೆ ಮಾಡುವುದು ಬೆಂಕಿಯನ್ನಲ್ಲ, ಅಗ್ನಿ ಮುಖೇನ ಅಗ್ನಿನಾರಾಯಣನ ಪೂಜೆ ಯಜ್ಞ. ಈ ಅರಿವಿಲ್ಲದೆ ಯಜ್ಞವನ್ನು ಮಾಡಿದರೆ ಹೊಗೆ ತಿಂದು ಸಾಯಬೇಕಾದೀತು! ನಮ್ಮ ಪೂಜೆ ಅಗ್ನಿನಾರಾಯಣನಿಂದ ಸೂರ್ಯ ನಾರಾಯಣನನ್ನು ಸೇರಿ ಮರಳಿ ನರನಾರಾಯಣನನ್ನು ತಲುಪುತ್ತದೆ. ಇದಕ್ಕಾಗಿ ದೇವರನ್ನು ಕುರಿತು ಮಾಡುವ ಯಜ್ಞ ಯಾವಾಗಲೂ ಹಗಲು ಹೊತ್ತಿನಲ್ಲೇ ನಡೆಯುತ್ತದೆ. ಅಗ್ನಿಯ ಏಳು ಬಣ್ಣಗಳ ಮುಖೇನ ಸೂರ್ಯನ ಏಳು ಬಣ್ಣಗಳಲ್ಲಿ ವಿಲೀನವಾಗುವ ಯಜ್ಞಶಕ್ತಿ, ವಾತಾವರಣವನ್ನು ಸೇರಿ ಲೋಕಕ್ಕೆ ಮಂಗಳಕಾರಿಯಾಗುತ್ತದೆ. ಹೀಗೆ ಯಜ್ಞಗಳಿಂದ ಆರಾಧ್ಯನಾದ ಭಗವಂತ ಇಜ್ಯಃ.
449) ಮಹೇಜ್ಯಃ
ಯಜ್ಞಗಳಿಂದ ಪೂಜಿಸಲ್ಪಡುವ ಶಕ್ತಿಗಳಲ್ಲಿ 'ಮಹತ್ತಾದ ಶಕ್ತಿ' ಮಹೇಜ್ಯಃ. ಇಲ್ಲಿ 'ಮಹ' ಎಂದರೆ ಮಹತ್ತಾದ, ನಮ್ಮಿಂದ ದೊಡ್ಡದಾದ, ಪೂಜನೀಯ ಇತ್ಯಾದಿ. ಮಹಹ+ಇಜ್ಯ-ಮಹೇಜ್ಯ; ಮಹಹ ಎಂದರೆ ಉತ್ಸವ, ಸಂಭ್ರಮ ಆಚರಣೆ, ಹಬ್ಬ ಇತ್ಯಾದಿ. ಸರ್ವ "ಸರ್ವ ದೇವ ನಮಸ್ಕಾರಃ ಕೇಶವಂ ಪ್ರತಿಗಚ್ಛತಿ". ಉತ್ಸವಗಳ ಪೂಜೆಯನ್ನು ಸ್ವೀಕರಿಸುವವನು ದೇವತೆಗಳ ಅಂತರ್ಯಾಮಿ ಭಗವಂತ. ಉದಾಹರಣೆಗೆ 'ಹನುಮ ಜಯಂತಿ' ಈ ಉತ್ಸವದಲ್ಲಿ ನಾವು ಆಂಜನೇಯನನ್ನು ಪೂಜಿಸುತ್ತೇವೆ, ಆದರೆ ಶ್ರೀರಾಮಚಂದ್ರ ಸ್ವೀಕರಿಸದೆ ಅಂಜನೇಯ ಯಾವ ಪೂಜೆಯನ್ನೂ ಸ್ವೀಕರಿಸಲಾರ. ಉತ್ಸವಗಳಷ್ಟೇ ಅಲ್ಲ, ಹುಟ್ಟು ಹಬ್ಬ ಮದುವೆ ಇನ್ಯಾವುದೋ ಸಂಭ್ರಮದಲ್ಲಿ, ಪೂಜೆಯನ್ನು ಸ್ವೀಕರಿಸುವವ ಮಹೇಜ್ಯನಾದ ಭಗವಂತನೇ. ಉದಾಹರಣೆಗೆ ಹುಟ್ಟು ಹಬ್ಬ, ನಾವು ನಮ್ಮ ಮಗುವಿನ ಹುಟ್ಟು ಹಬ್ಬ ಆಚರಿಸುತ್ತೇವೆ. ಈ ಹಿಂದೆ ಹೇಳಿದಂತೆ ಒಂದು ಜೀವ ಹುಟ್ಟುವಾಗ ಆ ಜೀವದೊಂದಿಗೆ ರಕ್ಷಕನಾಗಿ ಬಿಂಬ ರೂಪಿ ಭಗವಂತನ ಜನನವಾಗುತ್ತದೆ. ಅಂದರೆ ನಾವು ಆಚರಿಸುವ ಹುಟ್ಟು ಹಬ್ಬ ಬಿಂಬರೂಪಿ ಭಗವಂತನ ಹುಟ್ಟು ಹಬ್ಬ ಕೂಡಾ ಹೌದು. ಒಬ್ಬ ಮನುಷ್ಯ ನೂರು ವರ್ಷ ಬದುಕಿದ ಎಂದರೆ ಆತನ ದೇಹದೊಳಗೆ ಬಿಂಬ ರೂಪಿ ಭಗವಂತ ನೂರು ವರ್ಷ ಕೂತ ಎಂದರ್ಥ. ಆದ್ದರಿಂದ ಭಗವಂತನನ್ನು 'ಶತರ್ಷಿ' ಎನ್ನುತ್ತಾರೆ. ಇನ್ನು ಮದುವೆ, ಪ್ರೀತಿ, ದಾಪತ್ಯ, ಭಾಂದವ್ಯ ಇತ್ಯಾದಿ. ಇಲ್ಲಿ ನಮ್ಮೊಳಗೆ ಕೂತ ಭಗವಂತ ಪ್ರೀತಿಯ ಬೀಜವನ್ನು ಬಿತ್ತದಿದ್ದರೆ ಅಲ್ಲಿ ಪ್ರೀತಿ ಇರುವುದಿಲ್ಲ. ಕೆಲವೊಮ್ಮೆ ನಮಗರಿವಿಲ್ಲದಂತೆ ನಾವು ಇನ್ನೊಬ್ಬರ ಸ್ನೇಹ ಪ್ರೀತಿಯ ಪಾಶದಲ್ಲಿ ಬಂಧಿಗಳಾಗುತ್ತೇವೆ. ಇನ್ನು ಕೆಲವೊಮ್ಮೆ ಕಾರಣವಿಲ್ಲದೆ ಇನ್ನೊಬ್ಬರಿಂದ ದೂರವಿರುತ್ತೇವೆ. "I don't know why, but i don't like him" ಎಂದು ಹೇಳುವ ಜನರನ್ನು ನೀವು ನೋಡಿರಬಹುದು. ಇದಕ್ಕೆ ಕಾರಣ ನಮ್ಮ ಪೂರ್ವ ಕರ್ಮ ಹಾಗು ನಮ್ಮೊಳಗಿದ್ದು ನಮ್ಮಲ್ಲಿ ಪ್ರೀತಿಯ ಬೀಜವನ್ನು ಚಿಗುರಿಸುವ ಭಗವಂತ. ಜೀವನದಲ್ಲಿ ಗಂಡು ಹೆಣ್ಣಿನ ನಡುವೆ ಅನ್ಯೋನ್ಯ ಪ್ರೀತಿ ಕೊನೆಯ ತನಕ ಬೆಸೆದುಕೊಂಡಿರುವುದು ಅತೀ ವಿರಳ. ಅಂತಹ ದಾಂಪತ್ಯವನ್ನು ಎಲ್ಲರೂ ಬಯಸುತ್ತಾರೆ, ಆದರೆ ಸಿಗುವುದು ಅತೀ ವಿರಳ. ಆದ್ದರಿಂದ ದಾಂಪತ್ಯ ಕೂಡಾ ಭಗವಂತನ ದಾಂಪತ್ಯ Anniversary ಕೂಡಾ ಅವನದ್ದೇ!, ನಾವು ಕೇವಲ ಮಾಧ್ಯಮ ಅಷ್ಟೇ. ಆದ್ದರಿಂದ ಪ್ರತಿಯೊಂದು ಉತ್ಸವದಲ್ಲಿ ಪೂಜಿಸಲ್ಪಡುವವನು ಮಹೇಜ್ಯನಾದ ಭಗವಂತನೇ.
ಗೋಪೂಜೆಯ ದಿನ ನಾವು ಗೋವುಗಳನ್ನು, ತುಳಸಿ ಪೂಜೆಯ ದಿನ ತುಳಸಿಯನ್ನು ಆರಾದಿಸುತ್ತೇವೆ. ಆದರೆ ಗೋವು, ತುಳಸಿ ಎಲ್ಲವೂ ಭಗವಂತನ ಪ್ರತೀಕ. ಹೀಗೆ ಪ್ರತಿಯೊಂದು ಹಬ್ಬ ಹರಿದಿನಗಳಲ್ಲಿ ಆಯಾ ಪ್ರತೀಕದಲ್ಲಿದ್ದು ಇಜ್ಯನಾಗುವ ಭಗವಂತ ಮಹೇಜ್ಯಃ.
450) ಕ್ರತುಃ
ಯಜ್ಞಗಳಲ್ಲಿ ಅನೇಕ ವಿಧದ ಪ್ರಕ್ರಿಯೆಗಳು ವೇದಕಾಲದಲ್ಲಿ ಪ್ರಚಲಿತದಲ್ಲಿತ್ತು. ಮೂರುದಿನದ ಯಜ್ಞ, ಆರು ದಿನದ ಯಜ್ಞ , ಚಾತುರ್ಮಾಸದ ಯಜ್ಞ, ಇತ್ಯಾದಿ. ಇಂತಹ ಯಜ್ಞದಲ್ಲಿ ದಿನಂಪ್ರತಿ ಮೂರು ಭಾರಿ ಭಗವಂತನಿಗೆ ಆಹುತಿ ಕೊಡುತ್ತಾರೆ. ಈ ಕ್ರಿಯೆ ಯಜ್ಞದ ಎಲ್ಲಾ ದಿನಗಳಲ್ಲೂ ನಡೆಯುತ್ತದೆ. ಈ ಕ್ರಿಯೆಯನ್ನು 'ಕ್ರತು' ಎನ್ನುತ್ತಾರೆ. ನಮ್ಮ ಕೈಯಿಂದ ಕ್ರತುವನ್ನು ಮಾಡಿಸಿ, ಪ್ರತಿದಿನ ಕ್ರತುವನ್ನು ಸ್ವೀಕಾರ ಮಾಡುವ ಭಗವಂತ ಕ್ರತುಃ. ಕ್ರತು ಸಾಂಗವಾಗಿ ನೆರವೇರಬೇಕಿದ್ದರೆ ನಮ್ಮಲ್ಲಿ ನಂಬಿಕೆ, ಇಚ್ಛಾಶಕ್ತಿ, ಕ್ರಿಯಾಶಕ್ತಿ ಹಾಗು ಅನುಕೂಲತೆ ಅತ್ಯಗತ್ಯ. ನಮ್ಮ ಹಿಂದೆ ನಿಂತು ಈ ಕ್ರಿಯಾ ಕಲಾಪಗಳನ್ನು ನಡೆಸುವ, ಜ್ಞಾನ ಸ್ವರೂಪನು; ಕರ್ಮದ ಕಟ್ಟಿನಿಂದ ನಮ್ಮನ್ನು ಪಾರು ಮಾಡುವನು ಆದ ಭಗವಂತ ಕ್ರತುಃ.
451) ಸತ್ರಮ್.
ಸತ್ರ ಎಂದರೂ ಯಜ್ಞ ಎನ್ನುವ ಅರ್ಥವನ್ನು ಕೊಡುತ್ತದೆ. ಮನೆಯಲ್ಲಿ ನಮಗೋಸ್ಕರ ಅಗ್ನಿಮುಖದಲ್ಲಿ ಮಾಡುವ ಕ್ರಿಯೆ 'ಯಾಗ' ; ಹತ್ತಾರು ಜನ ಸೇರಿ ಸಮಷ್ಟಿಯಾಗಿ ಮಾಡಿದರೆ ಅದು 'ಸತ್ರಯಾಗ'. ಸಕಲರನ್ನೂ ರಕ್ಷಿಸುವ, ಎಲ್ಲವನ್ನು ಏಕರೀತಿಯಿಂದ ಪಾಲಿಸುವ ಭಗವಂತ ಸತ್ರಮ್.
452) ಸತಾಂಗತಿಃ
ಸಾತ್ವಿಕ ಗುಣಗಳಿಂದ ತುಂಬಿದ, ಯಾವಾಗಲೂ ಜ್ಞಾನದ ಮಾರ್ಗದಲ್ಲಿ ನಡೆವ 'ಸಜ್ಜನರರಿಗೆ' , 'ವಿದ್ವಾಂಸರಿಗೆ' ವಿಶಿಷ್ಟವಾದ ಪ್ರೀತಿ ಹಾಗು ರಕ್ಷಣೆಯನ್ನು ಕೊಡುವ ಭಗವಂತ ಸತಾಂಗತಿಃ. ಇದಕ್ಕೆ ಉತ್ತಮ ನಿದರ್ಶನ 'ಮಹಾಭಾರತ'. ಸಜ್ಜನರಾದ ಪಾಂಡವರಿಗೆ ದ್ರೋಹವನ್ನು ಮಾಡಿದ ಕೌರವರನ್ನು ಹಾಗು ಅವರಿಗೆ ಸಹಾಯ ಮಾಡಿದ ಪ್ರತಿಯೊಬ್ಬರನ್ನು ಶಿಕ್ಷಿಸಿ ಸಾತ್ವಿಕತೆಯ ರಕ್ಷಣೆ ಮಾಡಿದ ಭಗವಂತ ಸತಾಂಗತಿಃ

Monday, October 11, 2010

Vishnusahasranama 442-446


ವಿಷ್ಣು ಸಹಸ್ರನಾಮ: ನಕ್ಷತ್ರನೇಮಿರ್ನಕ್ಷತ್ರೀ ಕ್ಷಮಃ, ಕ್ಷಾಮಃ ಸಮೀಹನಃ
442) ನಕ್ಷತ್ರನೇಮಿಃ

ನಕ್ಷತ್ರ ಎಂದಾಕ್ಷಣ ನಮಗೆ ತಿಳಿದಿರುವುದು ಆಕಾಶದಲ್ಲಿ ಅನೇಕ ಜ್ಯೋತಿರ್ವರ್ಷ ದೂರದಲ್ಲಿರುವ ಅಸಂಖ್ಯ ನಕ್ಷತ್ರಗಳ ಒಂದು ವಿಸ್ಮಯ ಲೋಕ. ಇಂತಹ ನಕ್ಷತ್ರ ಮಂಡಲಕ್ಕೆ ಆಧಾರವಾಗಿ(ನೇಮಿ) ನಿಂತಿರುವ ಭಗವಂತ ನಕ್ಷತ್ರನೇಮಿಃ.
'ಕ್ಷತ್ರ' ಎಂದರೆ ಕ್ಷತಿಗೊಂಡವರನ್ನು ರಕ್ಷಿಸುವವರು ಹಾಗು ಆಳುವವರು (ಉದಾಹರಣೆಗೆ ಕ್ಷತ್ರಿಯರು). ನಕ್ಷತ್ರರು ಎಂದರೆ ಭಗವಂತನಲ್ಲದೆ ಇನ್ನು ಯಾರ ನಿಯಂತ್ರಣದಲ್ಲೂ ಇಲ್ಲದವರು. ಭಗವಂತನೋಬ್ಬನೆ ಜಗದೊಡೆಯ ಎಂದು ನಂಬುವ ಭಕ್ತರಿಗೆ ಆಸರೆಯಾದ ಭಗವಂತ ನಕ್ಷತ್ರನೇಮಿಃ.
443) ನಕ್ಷತ್ರೀ
ಇಪ್ಪತ್ತೇಳು ತಾರೆಗಳ ಅಭಿಮಾನಿ ದೇವಿಯರ ಪತಿಯಾದ ಚಂದ್ರನೊಳಗಿರುವ ಅಭಿಮಾನಿ ದೇವತೆಯೊಳಗೆ ಇರುವ ಧನ್ವಂತರಿ ರೂಪಿ ಭಗವಂತ ನಕ್ಷತ್ರೀ. (ಶೀತಾಂಶು ಮಂಡಲಗತ). ಅಸಂಖ್ಯ ನಕ್ಷತ್ರಗಳನ್ನು ಸೃಷ್ಟಿಸಿ ನಿಯಮಿಸುವ ಭಗವಂತ ನಕ್ಷತ್ರೀ.
444) ಕ್ಷಮಃ
ಕ್ಷಮತೇ ಇತಿ ಕ್ಷಮಃ ; ಎಲ್ಲವನ್ನೂ ಕ್ಷಮಿಸುವ ಭಗವಂತ ಕ್ಷಮಃ. ಕ್ಷಮೆ ಎಂದರೆ ಎದುರಾಳಿಗಳ ಪ್ರತಿಭಟನೆಯನ್ನು ತಡೆದುಕೊಳ್ಳುವ ಸೋಲಿಲ್ಲದ ಸಹನಾಶಕ್ತಿ. ಭಗವಂತನ ಕ್ಷಮಾ ಗುಣವನ್ನು ಹೇಳುವ ಅನೇಕ ದೃಷ್ಟಾಂತವನ್ನು ಆತನ ಲೀಲೆಗಳಲ್ಲಿ ಕಾಣುತ್ತೇವೆ. ರಾಮಾವತಾರ ಸಂಪೂರ್ಣ ಕ್ಷಮೆ ತಾಳ್ಮೆ ಸಹನೆಯ ಅವತಾರ.
ಕೋಪಗೊಂಡು ಕರ್ತವ್ಯ ನಿರತ ದ್ವಾರಪಾಲಕರಾದ ಜಯ-ವಿಜಯರ ಮೇಲೆ ಶಾಪವನ್ನಿತ್ತ ಸನಕಾದಿಗಳನ್ನು ಭಗವಂತ ಕಂಡ ಬಗೆ; ಕೋಪಗೊಂಡು ಭಗವಂತನ ಎದೆಯನ್ನು ತುಳಿದ ಭೃಗು ಮಹರ್ಷಿಯನ್ನು ಭಗವಂತ ನಡೆಸಿಕೊಂಡ ರೀತಿ; ಇತ್ಯಾದಿ ಆತನ ಕ್ಷಮಾ ಗುಣಕ್ಕೆ ಶ್ರೇಷ್ಠ ನಿದರ್ಶನಗಳು. ಭಗವಂತ ಕ್ಷಮಿಸದೆ ಇದ್ದರೆ ನಾವು ನಮ್ಮ ಪಾಪದಿಂದ ಈಚೆ ಬರಲು ಅಸಾಧ್ಯ. ಒಂದು ಜನ್ಮದಲ್ಲಿ ಮುಂದಿನ ಹತ್ತು ಜನ್ಮಕ್ಕೆ ಬೇಕಾಗುವಷ್ಟು ಪಾಪವನ್ನು ಕಲೆಹಾಕುವ ನಮ್ಮನ್ನು ಕ್ಷಮಿಸಿ, ನಮ್ಮ ಪಾಪವನ್ನು ಅಳಿಸಿ ಮುಕ್ತಿಯ ಮಾರ್ಗದತ್ತ ಕೊಂಡೊಯ್ಯುವ ಭಗವಂತ ಕ್ಷಮಃ.
445) ಕ್ಷಾಮಃ
ಎಲ್ಲವನ್ನೂ ಕ್ಷಮಿಸಿ ಮೋಕ್ಷ ಮಾರ್ಗವನ್ನು ತೋರುವ ಭಗವಂತ ಕೆಲವೊಮ್ಮೆ ಅನ್ನಕ್ಕೂ ಗತಿಯಿಲ್ಲದಂತೆ ಮಾಡಿ ಕ್ಷಾಮನೆನಿಸುತ್ತಾನೆ. ಇದು ಅವನು ಅಜ್ಞಾನವನ್ನು ತೊಳೆಯುವ ರೀತಿ. ಕ್ಷ+ಅಮ; ಕ್ಷ ಎಂದರೆ ಕ್ಷಪಯತಿ ಅಂದರೆ ನಾಶಮಾಡುವುದು, 'ಅಮ' ಎಂದರೆ ಅಜ್ಞಾನ. ಭಗವಂತ ಕೊಡುವ ಕಷ್ಟದಲ್ಲಿ ಅಸಾಧಾರಣ ಕಾರುಣ್ಯ ಅಡಗಿದೆ. ನಮ್ಮ ಅಜ್ಞಾನ ನಾಶಮಾಡಿ ಜ್ಞಾನ ಪಕ್ವತೆಯತ್ತ ಕೊಂಡೊಯ್ಯುವ ಭಗವಂತ ಕ್ಷಾಮಃ
446) ಸಮೀಹನಃ
'ಸಮೀಹ' ಎಂದರೆ ಸಮೀಚೀನವಾದ ಕ್ರಿಯೆ. ಭಗವಂತನ ಸರ್ವ ಕ್ರಿಯೆಯೂ ನೂರಕ್ಕೆ ನೂರು ಪರಿಪೂರ್ಣ. ಆತನ ಸೃಷ್ಟಿಯಲ್ಲಿ ಅಪರಿಪೂರ್ಣತೆ ಇಲ್ಲ. ಆದರೆ ನಾವು ಪರಿಪೂರ್ಣರಲ್ಲ. ನಮ್ಮ ಯೋಗ್ಯತೆಗೆ ತಕ್ಕಂತೆ ನಮ್ಮನ್ನು ನಡೆಸುವ, ಒಳಿತನ್ನೇ ಮಾಡುವ ಭಗವಂತ ಸಮೀಹನಃ

Sunday, October 10, 2010

Vishnu sahasranama 437-441


ವಿಷ್ಣು ಸಹಸ್ರನಾಮ: ಅನಿರ್ವಿಣ್ಣಃ ಸ್ಥವಿಷ್ಠೋಭೂರ್ಧರ್ಮಯೂಪೋ ಮಹಾಮಖಃ
437) ಅನಿರ್ವಿಣ್ಣಃ

'ನಿರ್ವಿಣ್ಣ' ಎಂದರೆ ಸಾಕು ಅಥವಾ ಬೇಡ ಅನ್ನಿಸಿ ಆಸಕ್ತಿ ಕಳೆದುಕೊಳ್ಳುವವ. ಆದರೆ ಭಗವಂತ ಅನಿರ್ವಿಣ್ಣ. ಈ ಹಿಂದೆ ಹೇಳಿದಂತೆ ಸೃಷ್ಟಿ-ಸ್ಥಿತಿ-ಸಂಹಾರ ಅನಂತ ಅನಾದಿ ಕಾಲದಿಂದ ನಡೆಯುತ್ತಿದೆ ಹಾಗು ಅನಂತವಾಗಿ ನಡೆಯುತ್ತದೆ. ಭಗವಂತ ಎಂದೂ ತನ್ನ ಕ್ರಿಯೆಯಲ್ಲಿ ಆಸಕ್ತಿ ಕಳೆದು ಕೊಳ್ಳುವುದಿಲ್ಲ; ಸೃಷ್ಟಿ-ಸಂಹಾರ ಮಾಡಿ ಸಾಕು ಅನ್ನಿಸುವುದು ಅಥವಾ ಸೋಲುವುದು ಅನ್ನುವ ಪ್ರಶ್ನೆ ಭಗವಂತನಲ್ಲಿಲ್ಲ. ಅದ್ದರಿಂದ ಭಗವಂತ ಅನಿರ್ವಿಣ್ಣಃ
ಅ+ನಿರ್+ವಿತ್+ಣ; ಇಲ್ಲಿ 'ನಿರ್' ಎಂದರೆ ನಾಶವಿಲ್ಲದ; 'ವಿತ್' ಎಂದರೆ 'ಜ್ಞಾನ'; 'ಣ' ಎಂದರೆ ಭಲ ಅಥವಾ ಆನಂದ. ಆದ್ದರಿಂದ ಅನಿರ್ವಿಣ್ಣ ಎಂದರೆ ನಿಶ್ಚಯಾತ್ಮಕವಾದ, ನಿರ್ಣಾಯಾತ್ಮಕವಾದ, ನಿರಂತರ ಜ್ಞಾನಾನಂದದ ಸೆಲೆಯಾದ, ಭಲರೂಪಿ 'ಅ'ಕಾರ ವಾಚ್ಯ ಭಗವಂತ. ಆದ್ದರಿಂದ ಆತ ಎಂದೆಂದೂ ಪರಿಪೂರ್ಣ ಹಾಗು ಜ್ಞಾನಾನಂದದ ಖನಿ.
438) ಸ್ಥವಿಷ್ಠಃ
'ಸ್ಥವಿರ' ಎಂದರೆ 'ಮುದುಕರು' ಸ್ಥವಿಷ್ಠ ಎಂದರೆ ಹಣ್ಣು ಹಣ್ಣು ಮುದುಕರು! ಇಲ್ಲಿ ಭಗವಂತ ಮುದುಕನಲ್ಲ ಆತ ಹಿರಿಯರಹಿರಿಯ ಆದ್ದರಿಂದ ಆತ ಸ್ಥವಿಷ್ಠಃ. ಇಡೀ ವಿಶ್ವಕ್ಕೆ ಪಿತಾಮಹನೆನಿಸಿರುವ ಚತುರ್ಮುಖ ಬ್ರಹ್ಮನನ್ನು ಮಗನಾಗಿ ಪಡೆದ ಭಗವಂತ ಹಿರಿಯರ ಹಿರಿಯ. ಯಾರು ಸೃಷ್ಟಿ ಮೊದಲು, ಸೃಷ್ಟಿಯಲ್ಲಿ ಹಾಗು ಸಂಹಾರದ ನಂತರವೂ ಇರುತ್ತಾನೋ ಅವನು ಸ್ಥವಿಷ್ಠಃ ನಾಮಕ ಭಗವಂತ.
ಈ ನಾಮವನ್ನು ಭಗವಂತನ ಬೇರೆ ಬೇರೆ ಲೀಲೆಗಳೊಂದಿಗೆ ನೋಡಿದರೆ ವಿಶಿಷ್ಟ ಅರ್ಥಗಳು ಬೇರೆ ಬೇರೆ ಆಯಾಮದಲ್ಲಿ ತೆರೆದುಕೊಳ್ಳುತ್ತವೆ. 'ಸ್ಥ' ಎಂದರೆ ನೆಲೆಸಿರುವವನು; 'ವಿಷ್ಠ' ಎಂದರೆ ವಿಶಿಷ್ಟವಾಗಿ ನೆಲೆಸಿರುವವನು. ಇದು ಭಗವಂತನ ವಿಭೂತಿಯನ್ನು ಹೇಳುತ್ತದೆ. ಭಗವಂತ ಎಲ್ಲಾ ಗಿಡ-ಪ್ರಾಣಿ-ಜೀವಜಂತುವಿನಲ್ಲಿ ನೆಲೆಸಿದ್ದಾನೆ, ಆದರೆ ಕೆಲವೊಂದು ಜೀವದಲ್ಲಿ ಆತನ ವಿಶೇಷ ಸನ್ನಿದಾನ ಅಭಿವ್ಯಕ್ತವಾಗುತ್ತದೆ. ಉದಾಹರಣೆಗೆ ಮರಗಳಲ್ಲಿ ಅಶ್ವಥ ಮರ ಅತೀ ಶ್ರೇಷ್ಠ. ಏಕೆಂದರೆ ಅದು ನಮ್ಮ ಜೀವ ಅನಿಲವಾದ ಆಮ್ಲಜನಕವನ್ನು ಅತೀ ಹೆಚ್ಚು ಪ್ರಮಾಣದಲ್ಲಿ ಹೊರಸೂಸುವ ವೃಕ್ಷ . ಪಕ್ಷಿಗಳಲ್ಲಿ ನವಿಲು ಶ್ರೇಷ್ಠ ಪಕ್ಷಿ, ಏಕೆಂದರೆ ಅದು ತನ್ನ ಸೌಂದರ್ಯ ಹಾಗು ವಿಶಿಷ್ಟ ನೃತ್ಯಕ್ಕೆ ಹೆಸರುವಾಸಿ. ಹೀಗೆ ಭಗವಂತ ಎಲ್ಲಾ ಜೀವರೊಳಗಿದ್ದರೂ, ಕೆಲವು ಜೀವ ಜಂತುಗಳಲ್ಲಿ ವಿಶಿಷ್ಟವಾಗಿ ಕಾಣಿಸಿಕೊಳ್ಳುತ್ತಾನೆ. ಇಂತಹ ಭಗವಂತನಿಗೆ ಸ್ಥವಿಷ್ಠಃ ಅನ್ವರ್ಥ ನಾಮ.
439) ಭೂಃ (ಅಭೂಃ)
ಈ ನಾಮವನ್ನು ಭೂಃ ಅಥವಾ ಅಭೂಃ ಎಂದು ಎರಡು ರೂಪದಲ್ಲಿ ನೋಡಬಹುದು. ಇದು ಭಗವಂತನ ಅತ್ಯಂತ ಮುಖ್ಯವಾದ ನಾಮಗಳಲ್ಲಿ ಒಂದು. ಏಕೆಂದರೆ ಭಗವಂತನ ಮೊದಲ ನಾಮ ಮೂರು ಅಕ್ಷರಗಳುಳ್ಳ 'ಓಂಕಾರ' (ಅ,ಉ,ಮ). ನಂತರ ಮೂರು ಪದಗಳುಳ್ಳ ವ್ಯಾಹೃತಿ (ಭೂಃ ಭುವಃ ಸುವಃ), ನಂತರ ಮೂರು ಪಾದದ ಗಾಯತ್ರಿ (ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋನಃ ಪ್ರಚೋದಯಾತ್). ಓಂಕಾರದ ಮೊದಲ ಅಕ್ಷರ 'ಅ' ಕಾರದ ವಿವರಣಾ ರೂಪ ಭೂಃ. 'ಭವತೀತಿ ಭೂಃ' ; ಭವತಿ ಎಂದರೆ ಪೂರ್ಣವಾಗಿರುವುದು, ನಿರ್ಧಿಷ್ಟವಾದ ಇರುವಿಕೆಯುಳ್ಳ ಭಗವಂತ. ಎಲ್ಲಾ ಕಡೆ ಅಭಿವ್ಯಕ್ತನಾಗುವ ಭಗವಂತ ಸ್ಪೂರ್ತಿಯ ಸೆಲೆ. ಎಲ್ಲಾ ಚಟುವಟಿಕೆಗಳ ಮೂಲ ಸ್ಫೂರ್ತಿ, ಎಲ್ಲಾಕಡೆ ಪ್ರಕಾಶಮಾನನಾಗಿ ಎಲ್ಲರನ್ನೂ ಪ್ರೇರಣೆ ಮಾಡುವ ಅಂತಃಶಕ್ತಿ ಭಗವಂತ ಭೂಃ. ಭೂಮಿಯನ್ನು ನಿಯಂತ್ರಿಸುವ ದೇವತೆಯ ಒಳಗಿದ್ದು ಎಲ್ಲವನ್ನೂ ನಿಯಮ ಬದ್ದವಾಗಿ ನಡೆಸುವ ಭಗವಂತ ಭೂಃ.
ಭಗವಂತನಿಗೆ ಎಂದೂ ಹುಟ್ಟಿಲ್ಲ! 'ನಭವತಿ' ಹಾಗು 'ಅದಿಕಂ ಭವತಿ'. ಎಂದೂ ಹುಟ್ಟಿಲ್ಲದ ಸರ್ವ ಶ್ರೇಷ್ಠ ಭಗವಂತ ಅಭೂಃ.
440)ಧರ್ಮಯೂಪಃ
ಈ ನಾಮವನ್ನು ಸಂಪೂರ್ಣ ತಿಳಿಯಬೇಕಾದರೆ ನಾವು 'ಯೂಪ' ಪದದ ಅರ್ಥವನ್ನು ಮೊದಲು ತಿಳಿಯಬೇಕು. ಹಿಂದೆ ದೇಶ ರಕ್ಷಣೆ ಮಾಡುತ್ತಿದ್ದ ಕ್ಷತ್ರಿಯರು ಮಾಂಸಹಾರಿಗಳಾಗಿದ್ದರು. ನಾವು ಏನನ್ನೂ ತಿನ್ನುತ್ತೆವೋ ಅದನ್ನು ದೇವರಿಗೆ ಅರ್ಪಿಸಿ ತಿನ್ನುವುದು ಸಂಪ್ರದಾಯ ಹಾಗು ಶಾಸ್ತ್ರಸಮ್ಮತ. ಅದಕ್ಕಾಗಿ ಕ್ಷತ್ರಿಯರು ತಮ್ಮ ಆಹಾರವಾದ ಪ್ರಾಣಿಯನ್ನು ಯಜ್ಞದಲ್ಲಿ ಬಲಿಕೊಟ್ಟು ದೇವರಿಗೆ ಅರ್ಪಿಸಿ ನಂತರ ತಿನ್ನುತ್ತಿದ್ದರು. ಪ್ರಾಣಿಬಲಿ ಕೊಡುವ ಮೊದಲು ಆ ಪ್ರಾಣಿಯನ್ನು ಕಟ್ಟುವ ಕಂಬವನ್ನು 'ಯೂಪ' ಎನ್ನುತ್ತಾರೆ. ಹಾಗು ಈ ಕ್ರಿಯಯನ್ನು 'ಆಲಿಂಬನ' ಎನ್ನುತ್ತಾರೆ. ಯಜ್ಞದಲ್ಲಿ ಪ್ರಾಣಿಯನ್ನು ಬಲಿ ಕೊಡುವುದು ಹಿಂಸೆಯಲ್ಲ ಧರ್ಮ ಎಂದು ಶಾಸ್ತ್ರಕಾರರು ಪರಿಗಣಿಸಿದ್ದಾರೆ. ಇಂತಹ ಯೂಪದಲ್ಲಿ ಧರ್ಮ ಸ್ವರೂಪನಾಗಿ ಕುಳಿತು ಯಜ್ಞದಲ್ಲಿ ಕೊಟ್ಟ ಆಹುತಿಯನ್ನು ಸ್ವೀಕಾರ ಮಾಡಿ, ಧರ್ಮಕ್ಕೆ ಆಧಾರ ಸ್ಥಂಭನಾಗಿ ನಿಂತ ಭಗವಂತ ಧರ್ಮಯೂಪಃ.
ಇನ್ನೊಂದು ಅರ್ಥದಲ್ಲಿ 'ಧರ್ಮಯೂಗಳು' ಎಂದರೆ ಧರ್ಮದ ಜೊತೆಗೆ ಕೂಡಿಕೊಂಡವರು. ಧರ್ಮಯೂಗಳಿಗೆ-ಪಾಹಿ(ರಕ್ಷಕ) ಭಗವಂತ ಧರ್ಮಯೂಪಃ.
441) ಮಹಾಮಖಃ
'ಮಖ' ಎಂದರೆ ಯಜ್ಞ, ಯಶಸ್ಸು, ಸಂಪತ್ತು ಇತ್ಯಾದಿ. ಎಲ್ಲಾ ಯಜ್ಞಗಳು, ಎಲಾ ಯಶಸ್ಸು, ಎಲ್ಲಾ ಸಂಪತ್ತು ಯಾರಲ್ಲಿ ಮಹತ್ತಾಗಿದೆಯೋ; ಯಾರ ಕುರಿತಾಗಿ ಮಾಡಿದ ಯಜ್ಞ ಮಹತ್ತದಾಗಿರುತ್ತದೋ, ಅವನು ಮಹಾಮಖಃ. ಮಖ(ಯಜ್ಞ) ಭಗವಂತನಿಂದಾಗಿ ಮಹತ್ತಾಗಿದೆ. ಯಜ್ಞಗಳ ಸರ್ವಾದಾರ ಇಡಿಯ ವಿಶ್ವವೆಂಬ ಸಿರಿಗೊಡೆಯ ಭಗವಂತ ಮಹಾಮಖಃ

Saturday, October 9, 2010

Vishnu sahasranama 432-436


ವಿಷ್ಣು ಸಹಸ್ರನಾಮ: ಅರ್ಥೋನರ್ಥೋ ಮಹಾಕೋಶೋ ಮಹಾಭೋಗೋ ಮಹಾಧನಃ
432) ಅರ್ಥಃ
ಅರ್ಥಃ ಎಂದರೆ ಎಲ್ಲರೂ ಬಯಸುವಂತವನು;ಮನುಷ್ಯನು ಬಯಸುವ ಬಯಕೆಗಳಲ್ಲಿ ಶ್ರೇಷ್ಠವಾದ ಬಯಕೆ ಭಗವಂತನ ಬಯಕೆ. ಬಯಕೆಗಳ ಬಗ್ಗೆ ಹೇಳುವಾಗ ಮಹಾಭಾರತದ ಒಂದು ಘಟನೆ ಇಲ್ಲಿ ನೆನಪಿಗೆ ಬರುತ್ತದೆ. ಒಮ್ಮೆ ಧರ್ಮರಾಯನ ಸಮ್ಮುಖದಲ್ಲಿ ಧರ್ಮ,ಅರ್ಥ ಮತ್ತು ಕಾಮ ಈ ಮೂರು ಪುರುಷಾರ್ಥಗಳಲ್ಲಿ ಶ್ರೇಷ್ಠವಾದ ಪುರುಷಾರ್ಥ ಯಾವುದು ಎನ್ನುವ ವಿಷಯದ ಬಗ್ಗೆ ಚರ್ಚೆಯಾಗುತ್ತದೆ. ಆಗ ಸಭೆಯಲ್ಲಿದ್ದ ಪ್ರಮುಖರು 'ಧರ್ಮವೇ' ಶ್ರೇಷ್ಠವಾದ ಪುರುಷಾರ್ಥ ಎಂದು ಹೇಳುತ್ತಾರೆ. ಇದಕ್ಕೆ ವಿರೋದಿಸಿದ ಅರ್ಜುನ ಧರ್ಮಕ್ಕಿಂತ ಅರ್ಥವೇ ಮೇಲು, ಏಕೆಂದರೆ ಬಡವನನ್ನು ಈ ಪ್ರಪಂಚದಲ್ಲಿ ಯಾರೂ ಗುರುತಿಸಲಾರರು. ಧರ್ಮವನ್ನು ಪಾಲಿಸಲು 'ಅರ್ಥ' ಮುಖ್ಯ ಎಂದು ವಾದಿಸುತ್ತಾನೆ. ಕೊನೆಯದಾಗಿ ಭೀಮಸೇನ ಎಲ್ಲರ ವಾದವನ್ನು ಬದಿಗಿರಿಸಿ ಸರ್ವ ಶ್ರೇಷ್ಠ ಪುರುಷಾರ್ಥ 'ಕಾಮ' ಎನ್ನುತ್ತಾನೆ! ಎಲ್ಲರಿಗೂ ಈ ಬಗ್ಗೆ ಆಶ್ಚರ್ಯವಾಗುತ್ತದೆ. ನಾವು 'ಕಾಮ' ಎಂದಾಗ ಅದರ ಅತ್ಯಂತ ಸೀಮಿತ ಅರ್ಥವನ್ನು ಮಾತ್ರ ನೋಡುತ್ತೇವೆ. 'ಕಾಮ' ಎಂದರೆ ಬಯಕೆ (desire). ನಮಗೆ ಬಯಕೆಗಳೇ ಇಲ್ಲದಿದ್ದರೆ ಧರ್ಮವೂ ಇಲ್ಲ, ಅರ್ಥವೂ ಇಲ್ಲ! ಧರ್ಮ ಮಾರ್ಗದಲ್ಲಿ ನಡೆಯಬೇಕು ಎನ್ನುವ ಬಯಕೆ ಇಲ್ಲದಿದ್ದರೆ ಧರ್ಮ ಅಸಾಧ್ಯ! ಜ್ಞಾನಿಗಳಿಗೆ ಇರುವ ಅತ್ಯಂತ ಮಹಾನ್ ಬಯಕೆ ದೇವರನ್ನು ಕಾಣಬೇಕು ಎನ್ನುವುದು. ಹೀಗೆ ಎಲ್ಲರೂ ಬಯಸುವ ಭಗವಂತ ಅರ್ಥಃ.
ಸಮಸ್ತ ವೇದಗಳ ಮುಖ್ಯಾರ್ಥ ಭಗವಂತನೊಬ್ಬನೆ. ಮೇಲ್ನೋಟಕ್ಕೆ ವೇದ ‘ಕರ್ಮ’, ‘ವ್ಯವಹಾರ’, ‘ಪ್ರಪಂಚವನ್ನು’ ಹೇಳುವಂತೆ ಕಾಣಿಸಿದರೂ, ವೇದದ ಮುಖ್ಯಾರ್ಥ ಭಗವಂತ. ಹೀಗೆ ಸರ್ವ ವೇದಗಳಿಂದ, ಸರ್ವ ಶಬ್ದಗಳಿಂದ ವಾಚ್ಯನಾದ, ಎಲ್ಲರೂ ಬಯಸುವ ಭಗವಂತ ಅರ್ಥಃ
433) ಅನರ್ಥಃ
ಸೃಷ್ಟ್ಯಾದಿಗಳಿಂದ ತನಗೆ ಯಾವ ಪ್ರಯೋಜನವೂ ಇರದವನು ಅನರ್ಥಃ. ಈ ಪ್ರಪಂಚವನ್ನು ಯಾವುದೇ ಸ್ವಪ್ರಯೋಜನವಿಲ್ಲದೆ ನಮಗಾಗಿ ನಿರ್ಮಿಸಿರುವ ಭಗವಂತ, ತನ್ನ ನಿಯಮವನ್ನು ತಾನೂ ಪಾಲಿಸುತ್ತಾನೆ. ಪ್ರಕೃತಿಯ ನಿಯಮವನ್ನು ಮೀರಿ ನಡೆಯುವವರಿಗೆ ಆತ ಅನರ್ಥ. ವೇದಗಳನ್ನು ನಾಶಮಾಡಲು ಹೊರಟ ಹಯಗ್ರೀವನಿಗೆ ಮತ್ಸ್ಯಾವತಾರಿ ಭಗವಂತ 'ಅನರ್ಥಕಾರಿಯಾದ' ; ಭೂಮಿಯ ಆಕರ್ಷಣ ಶಕ್ತಿಯನ್ನು ಕಳಚಲು ಹೋದ ಹಿರಣ್ಯಾಕ್ಷನಿಗೆ ವರಾಹರೂಪಿ ಭಗವಂತ ಅನರ್ಥಕಾರಿಯಾದ; ಧರ್ಮ ಕಾರ್ಯ ನಡೆಯಬಾರದು, ಯಾರ ಬಾಯಲ್ಲೂ ದೇವರ ಹೆಸರು ಬರಬಾರದು, ನಾನೇ ದೇವರು ಎಂದ ಹಿರಣ್ಯಕಶಿಪುವಿಗೆ 'ನರಸಿಂಹನಾಗಿ' ಭಗವಂತ ಅನರ್ಥಕಾರಿಯಾದ. ರಾಮನಾಗಿ ರಾವಣ ಕುಂಭಕರ್ಣರಿಗೆ; ಕೃಷ್ಣನಾಗಿ ಶಿಶುಪಾಲ ದಂತವಕ್ರರಿಗೆ ಅನರ್ಥನಾಗಿ, ಶಸ್ತ್ರವನ್ನು ಹಿಡಿಯದೆ ಹದಿನೆಂಟು ಅಕ್ಷೋಹಿಣಿ ಸೈನ್ಯಕ್ಕೆ ಅನರ್ಥಕಾರಿಯಾದ ಭಗವಂತ ಅನರ್ಥಃ.
434) ಮಹಾಕೊಶಃ
ವೇದವೆಂಬ ಹಿರಿಯ ಅರಿವಿನ ಕೋಶದಲ್ಲಿ ತುಂಬಿದ ಭಗವಂತ, ಬ್ರಹ್ಮಾಂಡವೆಂಬ ಮಹಾಕೊಶದೊಳಗೆ ಅಂತರ್ಯಾಮಿಯಾಗಿ ತುಂಬಿರುವ ಮಹಾನ್ ಶಕ್ತಿ. ನಮ್ಮಲ್ಲಿರುವ ಪಂಚಕೋಶ (ಅನ್ನಮಯಕೋಶ, ಪ್ರಾಣಮಯಕೋಶ, ಮನೋಮಯಕೋಶ,ವಿಜ್ಞಾನಮಯಕೋಶ ಹಾಗು ಆನಂದಮಯಕೋಶ)ದ ಒಳಗೆ ಅಡಗಿರುವ ಭಗವಂತ ಮಹಾಕೊಶಃ.
435) ಮಹಾಭೋಗಃ
ಈ ಪ್ರಪಂಚದಲ್ಲಿ ಯಾರ್ಯಾರು ಏನೇನು ಭೋಗಿಸುತ್ತಾರೆ ಅವೆಲ್ಲವನ್ನು ಭೋಗಿಸುವವನು ಭಗವಂತ. ಇಡಿಯ ಜಗವನ್ನೇ ಕಬಳಿಸುವ ಹಿರಿಯ ಪೂರ್ಣಾನಂದ ಭೋಗಿ ಭಗವಂತ ಮಹಾಭೋಗಃ.
436) ಮಹಾಧನಃ
ಈ ಜಗತ್ತಿನಲ್ಲಿರುವ ಅತ್ಯಂತ ದೊಡ್ಡ ಸಂಪತ್ತು ಭಗವಂತ. ಈ ಜಗತ್ತಿನಲ್ಲಿ ಏನೇನು ಸಂಪತ್ತಿದೆ ಅವೆಲ್ಲವೂ ಅವನಿಗೆ ಸೇರಿದ್ದು. ಅರಿವೆಂಬ ಹಿರಿಯ ಸಿರಿಯನ್ನೀಯುವ ಭಗವಂತ ಮಹಾಧನಃ.

Friday, October 8, 2010

Vishnu sahasranama 427-431


ವಿಷ್ಣು ಸಹಸ್ರನಾಮ: ವಿಸ್ತಾರಃ ಸ್ಥಾವರಸ್ಥಾಣುಃ ಪ್ರಮಾಣಂ ಬೀಜಮವ್ಯಯಮ್
427) ವಿಸ್ತಾರಃ
ಇದು ಸೃಷ್ಟಿಯ ರಹಸ್ಯವನ್ನು ಹೇಳುವ ಒಂದು ಸುಂದರವಾದ ನಾಮ. ಪ್ರಳಯಕಾಲದಲ್ಲಿ ಸ್ಥೂಲವಾದ ಈ ಪ್ರಪಂಚ ಸೂಕ್ಷ್ಮ ರೂಪದಲ್ಲಿ ಉಳಿಯುತ್ತದೆ. ಸೃಷ್ಟಿ ಕಾಲದಲ್ಲಿ ಸೂಕ್ಷ್ಮವಾಗಿರುವ ಪ್ರಪಂಚವನ್ನು ಭಗವಂತ ವಿಸ್ತಾರಗೊಳಿಸಿ ಸ್ಥೂಲ ಪ್ರಪಂಚ ನಿರ್ಮಾಣ ಮಾಡುತ್ತಾನೆ. ಮಹತತ್ವ-ಅಹಂಕಾರ ತತ್ವ-ಆಕಾಶ-ಗಾಳಿ-ಬೆಂಕಿ-ನೀರು-ಭೂಮಿ ಹೀಗೆ ಸೃಷ್ಟಿ ಸೂಕ್ಷ್ಮ ರೂಪದಿಂದ ಸ್ಥೂಲ ಪ್ರಪಂಚವಾಗಿ ವಿಸ್ತಾರಗೊಳ್ಳುತ್ತದೆ. ಇಲ್ಲಿ ಸೃಷ್ಟಿ ಎಂದರೆ ಇಲ್ಲದ ಸೃಷ್ಟಿ ಅಲ್ಲ. ಇದ್ದದ್ದನ್ನು ಸ್ಥೂಲ ರೂಪಗೊಳಿಸಿ ಕಾಣುವ ರೂಪ ಕೊಡುವುದು. ನಾಮಾತ್ಮಕ ಪ್ರಪಂಚದಿಂದ ನಾದ, ನಾದದಿಂದ ತರಂಗ, ನಾದ ತರಂಗದಿಂದ ರೂಪ, ಈ ರೂಪ ಬೆಳೆದು ವಿಸ್ತಾರವಾಗಿ ಅಖಂಡ ಬ್ರಹ್ಮಾಂಡ ನಿರ್ಮಾಣ. ಪ್ರಪಂಚವನ್ನು ಸೂಕ್ಷ್ಮ ರೂಪದಿಂದ ಸ್ಥೂಲ ರೂಪವನ್ನಾಗಿ ವಿಸ್ತರಿಸಿ ಪ್ರತಿಯೊಂದು ವಸ್ತುವಿನಲ್ಲೂ ಆಯಾ ರೂಪದಲ್ಲಿ ಭಗವಂತ ತುಂಬಿಕೊಂಡ. ಇದು ಒಂದು ಹಣತೆಯಿಂದ ಸಹಸ್ರಾರು ಹಣತೆಗಳನ್ನು ಹಚ್ಚಿದಂತೆ. ಒಂದು ದೀಪದಿಂದ ಇನ್ನೊಂದು ದೀಪ ಹಚ್ಚಿದಾಗ ಮೂಲ ದೀಪ ತನ್ನ ಪ್ರಕಾಶವನ್ನು ಕಳೆದುಕೊಳ್ಳುವುದಿಲ್ಲ. ಇದೇ ರೀತಿ ಭಗವಂತ ಸಮಸ್ತ ಬ್ರಹ್ಮಾಂಡದಲ್ಲಿ ಸಮಸ್ತ ಚರಾಚರಗಳಲ್ಲಿ ಬೆಳಕಾಗಿ ತುಂಬಿದ. ಪ್ರತಿಯೊಂದು ಜೀವರಲ್ಲಿ ಸಂತಾನ ವಿಸ್ತಾರ ಅಥವಾ ಜ್ಞಾನ ವಿಸ್ತಾರದ ಬಯಕೆಯ ಬೀಜವನ್ನು ಬಿತ್ತಿ ಈ ಪ್ರಪಂಚದ ವಿಸ್ತಾರಕ್ಕೆ ಕಾರಣನಾದ. ಹೀಗೆ ಪ್ರಪಂಚ ಸೃಷ್ಟಿ ಹಾಗು ಅದರ ವಿಸ್ತಾರದ ಮೂಲನಾದ ಭಗವಂತ ವಿಸ್ತಾರಃ.
428) ಸ್ಥಾವರಃ
ಸ್ಥಾ+ಅವ+ರ; 'ಸ್ಥಾ' ಎಂದರೆ ಪ್ರತಿಯೊಂದು ವಸ್ತುವಿನಲ್ಲಿ ಸನ್ನಿಹಿತನಾದ, ನಮ್ಮ ಹಿತಕ್ಕೋಸ್ಕರ, ನಮ್ಮ ರಕ್ಷಣೆಗೋಸ್ಕರ ಸ್ಥಿತನಾದ ಭಗವಂತ, 'ಅವ' ಎಂದರೆ ನಮ್ಮ ಆಗು ಹೋಗುಗಳನ್ನು, ನಾವು ಮಾಡಲಾಗದ್ದನ್ನು ನಮ್ಮೊಳಗೆ ಕುಳಿತು ಮಾಡಿಸುವ ಭಗವಂತ. 'ರ' ಎಂದರೆ ರಮಿಸುವುದು. ಇಡೀ ವಿಶ್ವವನ್ನು ಸೃಷ್ಟಿ ಮಾಡುವುದು, ಸೃಷ್ಟಿ ಮಾಡಿ ಅದರೊಳಗೆ ಪ್ರವೇಶ ಮಾಡುವುದು, ಪ್ರವೇಶಿಸಿ ಎಲ್ಲರನ್ನೂ ರಕ್ಷಿಸಿ ನಡೆಸಿ ಕೊನೆಗೆ ಸಂಹಾರ ಮಾಡುವುದು ಭಗವಂತನ ಆನಂದದ ಲೀಲೆ. ಇಂತಹ ಭಗವಂತನಿಗೆ 'ಸ್ಥಾವರಃ' ಅನ್ವರ್ಥ ನಾಮ.
429) ಸ್ಥಾಣುಃ
ಎಂದೂ ಸ್ಥಿರತೆಯನ್ನು ಕಳೆದುಕೊಳ್ಳದ ವಸ್ತು, ಜೀವ ಸ್ವರೂಪದೊಳಗೆ ಅಣುವಿಗಿಂತ ಅಣುವಾಗಿ ಕುಳಿತ ಹೃತ್ಕಮಲ ಮಧ್ಯ ನಿವಾಸಿ ಭಗವಂತ ಸ್ಥಾಣುಃ. ನಮ್ಮೊಳಗಿರುವ ವಿಶ್ವ ರೂಪಿ ಭಗವಂತ ಎಷ್ಟು ಸೂಕ್ಷ್ಮ ಎಂದರೆ ಅದನ್ನು ಊಹಿಸುವುದು ಅಸಾಧ್ಯ. ಕುದುರೆಯ ಬಾಲದ ಕೂದಲಿನ ತುದಿ ಭಾಗವನ್ನು ಸುಮಾರು ಹತ್ತು ಸಾವಿರ ಭಾಗವನ್ನಾಗಿ ಮಾಡಿದರೆ ಅದರ ಒಂದು ಭಾಗ ಎಷ್ಟು ಗಾತ್ರದಲ್ಲಿರಬಹುದೋ ಅಷ್ಟು ಸೂಕ್ಷ್ಮಾತಿ ಸೂಕ್ಷ್ಮ ರೂಪದಲ್ಲಿರುವ ನಮ್ಮ ಸ್ವರೂಪ ಭೂತ ಜೀವದೊಳಗೆ ಭಗವಂತ ಸ್ಥಿತನಾಗಿದ್ದಾನೆ. ಹೀಗೆ ಅಚಲನಾದ, ಯಾವ ಶಕ್ತಿಗೂ ಅಭೇದ್ಯನಾದ, ನಿರ್ವಿಕಾರ ಭಗವಂತ ಸ್ಥಾಣುಃ.
430) ಪ್ರಮಾಣಮ್
ಎಲ್ಲಕ್ಕೂ ಕೊನೆಯ ಪ್ರಮಾಣ ಭಗವಂತ. ಯಾವುದು ಸರಿ, ಯಾವುದು ತಪ್ಪು, ಯಾವುದು ಧರ್ಮ, ಯಾವುದು ಅಧರ್ಮ ಎನ್ನುವುದಕ್ಕೆ ಭಗವಂತನೊಬ್ಬನೇ ಕೊನೆಯ ಪ್ರಮಾಣ. ಜಗತ್ತಿನ ಎಲ್ಲಾ ಪ್ರಮಾಣಗಳು(ಎಲ್ಲಾ ವೇದ ಶಾಸ್ತ್ರಗಳು) ಯಾರನ್ನು ಹೇಳುತ್ತವೋ ಅವನು ಪ್ರಮಾಣಃ
'ಪ್ರಮಾ' ಎಂದರೆ 'ಯಥಾರ್ಥ ಜ್ಞಾನ' 'ಅಣಯತಿ' ಎಂದರೆ ನಮ್ಮೊಳಗಿದ್ದು ದಯಪಾಲಿಸುವುದು. ಭಗವಂತನನ್ನು ಬರಿದೆ ವೇದಗಳನ್ನೋದುವುದರಿಂದ ಕಾಣಲು ಸಾಧ್ಯವಿಲ್ಲ. ತಪಸ್ಸಿನಿಂದ, ದಾನದಿಂದ, ಇಲ್ಲ ಯಜ್ಞದಿಂದ ಕಾಣಲು ಸಾಧ್ಯವಿಲ್ಲ. ಆತನನ್ನು ಕಾಣಲು ಆತನ ಬಗ್ಗೆ ಯಥಾರ್ಥ ಜ್ಞಾನ ಬೇಕು. ನಮ್ಮೊಳಗಿದ್ದು ನಮಗೆ ಇಂತಹ ಜ್ಞಾನವನ್ನು ಕೊಡುವ ಭಗವಂತ ಪ್ರಮಾಣಮ್. ಆತನನ್ನು ಕಾಣಲು ಕೇವಲ ಭಕ್ತಿಯಿಂದ ಮಾತ್ರ ಸಾಧ್ಯ. ಇದನ್ನೇ ಶ್ರೀಕೃಷ್ಣ ಗೀತೆಯಲ್ಲಿ ಹೀಗೆ ಹೇಳಿದ್ದಾನೆ.
ನಾಹಂ ವೇದೈರ್ನ ತಪಸಾ ನ ದಾನೇನ ನಚೇಜ್ಯಯಾ
ಶಕ್ಯ ಏವಂವಿಧೋ ದ್ರಷ್ಟುಂ ದೃಷ್ಟವಾನಸಿ ಮಾಂ ಯಥಾ (ಅ-೧೧, ಶ್ಲೋ -೫೩)
ಭಕ್ತ್ಯಾ ತ್ವನನ್ಯಯಾ ಶಕ್ಯ ಅಹಮೇವಂವಿಧೋsರ್ಜುನ
ಜ್ಞಾತುಂ ದ್ರಷ್ಟುಂ ಚ ತತ್ವೇನ ಪ್ರವೇಷ್ಟುಂ ಚ ಪರಂತಪ (ಅ-೧೧, ಶ್ಲೋ ೫೪)
431) ಬೀಜಮವ್ಯಯಮ್
ಭಗವಂತ ಎಂದೂ ವಿಕಾರಗೊಳ್ಳದ, ನಾಶವಾಗದ ಬೀಜ. ಈ ಜಗತ್ತು ಭಗವಂತನೆಂಬ ಬೀಜದಿಂದಲೇ ಹುಟ್ಟಿ ಬಂತು. ಆದರೆ ಆ ಬೀಜ ಜಗತ್ತಾಗಿ ವಿಕಾರಗೊಂಡ ಬೀಜವಲ್ಲ. ಭಗವಂತನಿಂದ ಈ ಪ್ರಪಂಚ ಅಭಿವ್ಯಕ್ತವಾಯಿತೇ ಹೊರತು ಭಗವಂತ ಪ್ರಪಂಚವಾಗಿ ರೂಪಾಂತರಗೊಂಡಿದ್ದಲ್ಲ. ಈ ಪ್ರಪಂಚ ಆತನ ಶರೀರವಲ್ಲ. ಜ್ಞಾನಾನಂದಮಯನಾದ ಭಗವಂತ ಈ ಪ್ರಪಂಚದ ಮೂಲ ಕಾರಣ ಹಾಗು ಧಾರಕ ಶಕ್ತಿ. ಹೀಗೆ ಅಳಿವಿರದ, ವಿಕಾರಗೊಳ್ಳದ ಜಗದ ಮೂಲ ಕಾರಣ ಭಗವಂತ ಬೀಜಮವ್ಯಯಮ್.

Monday, October 4, 2010

Vishnu sahasranama 422-426


ವಿಷ್ಣು ಸಹಸ್ರನಾಮ: ಉಗ್ರಃ ಸಂವತ್ಸರೋ ದಕ್ಷೋ ವಿಶ್ರಾಮೋ ವಿಶ್ವದಕ್ಷಿಣಃ
422) ಉಗ್ರಃ

ಮೇಲೆ ಹೇಳಿದಂತೆ ಎಲ್ಲರನ್ನೂ ಪ್ರೀತಿಸುವ ಭಗವಂತ ಅಂತಃಕರಣ ಶುದ್ಧಿ ಇಲ್ಲದೆ ಬಾಹ್ಯ ಪ್ರಪಂಚದಲ್ಲಿ ಸೋಗು ಹಾಕಿಕೊಂಡು ಬದುಕುವವರಿಗೆ ಉಗ್ರ! ಕರ್ತವ್ಯ ಚ್ಯುತನಾದರೆ ಭಗವಂತನ ರಾಜ್ಯದಲ್ಲಿ ಕ್ಷಮೆ ಇಲ್ಲ. ಭಗವಂತ ನಮ್ಮಲ್ಲಿ ಬಯಸುವುದು ಚಿನ್ನದ ಆಭರಣವನ್ನಲ್ಲ, ನಮ್ಮ ಕರ್ತವ್ಯ ನಿಷ್ಠೆಯನ್ನು. ಕರ್ತವ್ಯ ಭ್ರಷ್ಟನಾಗಿ ವೈಭವದ ಪೂಜೆ ಮಾಡಿದರೆ ಆತ ಎಂದೂ ಒಲಿಯುವುದಿಲ್ಲ. ಆತನ ರಾಜ್ಯದಲ್ಲಿ ಎಂದೂ ತಪ್ಪಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ತಪ್ಪು ಮಾಡಿದವನು ತಪ್ಪಿನ ಫಲ ಉಣ್ಣಲೇಬೇಕು. ಇದೇ "ಕರ್ಮಫಲ". ನಮಗೆ ಬರುವ ಅತಿಯಾದ ಕಷ್ಟ, ನಮ್ಮ ಮುಂದೆ ನಡೆಯುವ ದುರ್ಘಟನೆ, ಎಲ್ಲವೂ ನಮ್ಮ ಪೂರ್ವ ಪಾಪದ ಪ್ರತಿಫಲನ. "ಪುಣ್ಯ ಫಲವಿರಲಿ, ಪಾಪ ಫಲ ಬೇಡ" ಎಂದರೆ ಅದು ಸಾಧ್ಯವಿಲ್ಲ, ಅದನ್ನು ಅನುಭವಿಸಿಯೇ ತೀರಬೇಕು ! ಈ ವಿಷಯದಲ್ಲಿ ದಾಕ್ಷಣ್ಯವೇ ಇಲ್ಲ. ತಪ್ಪು ಮಾಡಿದವರಿಗೆ ನಿರ್ದಯವಾಗಿ ಶಿಕ್ಷೆ ಕೊಡುವ ಭಗವಂತ ಏಲ್ಲಿ ಅಪ್ರಮಾಣಿಕತೆ ಅಹಂಕಾರವಿದೆಯೋ ಅಲ್ಲಿ ಉಗ್ರನಾಗಿದ್ದು ನಮಗೆ ಶಿಕ್ಷಣವನ್ನು ಕೊಡುತ್ತಾನೆ!
423) ಸಂವಸ್ಸರಃ
ಈ ಹಿಂದೆ ಹೇಳಿದಂತೆ ಈ ನಮ್ಮ ದೇಹದಲ್ಲಿ ನಾಲ್ಕು ವಿಧದ "ಪುರುಷರಿದ್ದಾರೆ'. ಶರೀರ ಪುರುಷ, ಛಂದಃಪುರುಷ, ವೇದಪುರುಷ ಮತ್ತು ಸಂವತ್ಸರ ಪುರುಷ. ಈ ದೇಹ ನಿಂತು ನಡೆದಾಡಬೇಕಾದರೆ ದೇಹದಲ್ಲಿ ಶರೀರಪುರುಷನಾದ ಶಿವಶಕ್ತಿ ಬೇಕು. ಮನಸ್ಸು ಯೋಚಿಸಿದ್ದನ್ನು ಸ್ಪಂದನ, ಪರಾಶರ, ಪಶ್ಯಂತಿ, ಮಧ್ಯಮ ಮತ್ತು ವೈಖರಿ ರೂಪದಲ್ಲಿ ವಾಕ್ ಶಕ್ತಿ ಯಾಗಿ ಹೊರಹೊಮ್ಮುವಂತೆ ಮಾಡಲು ಛಂದಃಪುರುಷನಾದ ಶೇಷ ಶಕ್ತಿ ಅಗತ್ಯ, ವೇದದ ಅರ್ಥವನ್ನು ಮನನ ಮಾಡಿ ತಿಳಿಯುವ ಶಕ್ತಿ "ಗರುಡ ಶಕ್ತಿ" ಅದೇ "ವೇದಪುರುಷ". ಇದರಿಂದಾಚೆಗೆ ಚಿತ್ತವನ್ನು ಒಳಗಿನಿಂದ ಜಾಗೃತಗೊಳಿಸುವ ವಿಜ್ಞಾನಮಯ ಕೋಶದ ಅಭಿಮಾನಿ "ಬ್ರಹ್ಮ-ವಾಯು" ಇದುವೇ "ಸಂವತ್ಸರ ಪುರುಷ". ಈ ಸಂವತ್ಸರ ಪುರುಷರಲ್ಲಿ ನಿಯಾಮಕನಾಗಿ ಕುಳಿತ ಭಗವಂತ "ಪರಮ ಪುರುಷ". ಇದಕ್ಕಾಗಿ ಆತ ಸಂವತ್ಸರಃ.
ಸಂ+ವಸತ್+ರ; ಇಲ್ಲಿ "ಸಂ" ಎಂದರೆ ಸಂಪೂರ್ಣವಾದ ವಸ್ತು-ಭಗವಂತ, ವಸತ್ ಎಂದರೆ ನೆಲೆಸಿರುವುದು, 'ರ' ಎಂದರೆ ರಮೆಯತಿ. ಆದ್ದರಿಂದ ಸಂವಸ್ಸರಃ ಎಂದರೆ "ಭಗವಂತನಲ್ಲಿ ತಮ್ಮ ಮನಸ್ಸನ್ನು ನೆಲೆಗೊಳಿಸಿದವರಿಗೆ ಪೂರ್ಣಾನಂದವನ್ನು ಕೊಡುವವ.
'ಸಂ' ಎಂದರೆ 'ಸಮ್ಯಕ್' ಎನ್ನುವ ಅರ್ಥವನ್ನೂ ಕೊಡುತ್ತದೆ. ಆದ್ದರಿಂದ ಸಂವಸ್ಸರಃ ಎಂದರೆ ತನ್ನ ಪರಿಸರದೊಂದಿಗೆ ಚೆನ್ನಾಗಿ ಬದುಕುವವರಿಗೆ ಆನಂದವನ್ನು ಕೊಡುವವ ಎಂದರ್ಥ. ಇಲ್ಲಿ ಪರಿಸರದೊಂದಿಗೆ ಚನ್ನಾಗಿ ಬದುಕುವುದು ಎಂದರೆ "ಇನ್ನೊಬ್ಬರ ಖುಷಿಯನ್ನು ಕಂಡು ತಾನೂ ಖುಷಿ ಪಡುವುದು, ಇನ್ನೊಬ್ಬರ ಕಷ್ಟಕ್ಕೆ ಕರಗುವುದು, ಒಳ್ಳೆಯತನವನ್ನು ಪ್ರೀತಿಸುವುದು, ಕೆಟ್ಟತನದಿಂದ ದೂರ ನಿಲ್ಲುವುದು". ಇದನ್ನು 'ಸಂ-ವಾಸ' ಎನ್ನುತ್ತಾರೆ. ಇಷ್ಟೇ ಅಲ್ಲದೆ 'ನನಗೆ ಯಾವುದು ಕಷ್ಟ ಕೊಡುತ್ತದೋ ಅದು ಇನ್ನೊಬ್ಬರಿಗೂ ಕಷ್ಟ ಕೊಡುತ್ತದೆ ಎಂದು ತಿಳಿದು ಬದುಕುವುದು'; 'ಇನ್ನೊಬ್ಬರಿಗೆ ಸುಖ-ದುಃಖದ ಸ್ಪಂದನವಿದೆ ಎಂದು ತಿಳಿದು ಬದುಕುವುದು'; 'ಇನ್ನೊಬ್ಬರ ಸುಖಕ್ಕೊಸ್ಕರ ತಾನು ಕಷ್ಟ ಪಡುವುದು', ಇತ್ಯಾದಿ.
ಭಗವಂತನ ಕಡೆ ಮುಖ ಹಾಕಿ ಸಾಗುವವರಿಗೆ ಆನಂದವನ್ನು ಕೊಡುವ ಭಗವಂತ ಸಂವತ್ಸರಃ.
424) ದಕ್ಷಃ
ದಕ್ಷ ಎಂದರೆ ಸಮರ್ಥ. ಭಗವಂತ ಸರ್ವಸಮರ್ಥ (Omnipotent). ಆತ ಇಡೀ ವಿಶ್ವದ ಪ್ರತಿಯೊಂದು ವಸ್ತುವಿನ ಭೂತ-ಭವಿಷ್ಯತ್ ಹಾಗು ವರ್ತಮಾನವನ್ನು ಸಂಪೂರ್ಣ ತಿಳಿದಿರುತ್ತಾನೆ. ಭಗವಂತ ಸರ್ವವನ್ನೂ ಕಾಣಬಲ್ಲ ಶಕ್ತಿ. ನಮ್ಮಲ್ಲಿರುವ ಕಿಂಚಿತ್ ದಕ್ಷತೆ ಭಗವಂತನ ಪ್ರಸಾದ. ಎಲ್ಲಾ ದಕ್ಷರಿಗೂ ದಕ್ಷತೆಯನ್ನು ಕೊಡುವ ಪೂರ್ಣ ದಕ್ಷ ಭಗವಂತನೊಬ್ಬನೆ. ಆತನ ದಕ್ಷತೆಯನ್ನು ವರ್ಣಿಸುವುದು ಅಸಾಧ್ಯ. ಆತನೊಬ್ಬ ವೈಶಿಷ್ಟ್ಯಪೂರ್ಣ ವಿನ್ಯಾಸಕಾರ. ಈ ಜಗತ್ತಿಗೆ ವೈಶಿಷ್ಟವನ್ನು ಕೊಟ್ಟು ನಿರ್ಮಿಸಿ ಸಲಹುವ ಕಾರ್ಯ ಸಮರ್ಥ ಭಗವಂತ ದಕ್ಷಃ
425) ವಿಶ್ರಾಮಃ
ಭಗವಂತ ಸಂಹಾರ ಕರ್ತ ಎಂದಾಗ ನಮಗೆ ಆಶ್ಚರ್ಯವಾಗುತ್ತದೆ. ಯಾರೂ ತನ್ನ ಕೈಯಾರೆ ತನ್ನ ಮಕ್ಕಳನ್ನು ಸಂಹಾರ ಮಾಡುವುದಿಲ್ಲ, ಆದರೆ ಭಗವಂತ ಪ್ರಳಯಕಾಲದಲ್ಲಿ ತನ್ನ ಅದ್ಭುತ ಸೃಷ್ಟಿಯನ್ನು ತಾನೇ ಸಂಹಾರ ಮಾಡುತ್ತಾನೆ! ಭಗವಂತನ ಸಂಹಾರ ನಾಶವಲ್ಲ ! ಅದು ವಿಶ್ರಾಂತಿ. ಜೀವನ ಚಕ್ರದಲ್ಲಿ ಬಳಲಿ ಬೆಂಡಾದ ಜೀವಕ್ಕೆ ವಿಶ್ರಾಂತಿ ಕೊಡುವ ಕಾಲ 'ಪ್ರಳಯ ಕಾಲ'. ಅನೇಕ ಜನ್ಮಗಳಲ್ಲಿ ದೇಹ ಬದಲಾವಣೆ ಮಾಡುತ್ತಾ ಸಾಧನೆಯಲ್ಲಿ ಮುಂದೆ ಸಾಗಿ, ಕೊನೇಯ ದೇಹವೂ ಕಳಚಿ ಬಿದ್ದ ಮೇಲೆ, ಪೂರ್ತಿಯಾಗಿ ವಿಶ್ರಾಂತಿ ಕೊಟ್ಟು ಮೋಕ್ಷ ಸುಖ ಕೊಡುವ ಭಗವಂತ ವಿಶ್ರಾಮಃ.
426)ವಿಶ್ವದಕ್ಷಿಣಃ
'ದಕ್ಷಿಣ' ಎಂದರೆ 'ನಿಷ್ಪಕ್ಷಪಾತಿ'. ಭಗವಂತ ಇಡೀ ವಿಶ್ವವನ್ನು ಸೃಷ್ಟಿಮಾಡಿ ಸಲಹುವಾಗ ಎಂದೂ ಎಲ್ಲಿಯೂ ಪಕ್ಷಪಾತ ಮಾಡಿಲ್ಲ. ಇಡೀ ವಿಶ್ವವನ್ನು ನಿಷ್ಪಕ್ಷಪಾತವಾಗಿ ದಕ್ಷತೆಯಿಂದ ನಿರ್ವಹಿಸುವ, ಸರ್ವಸ್ವವನ್ನೀಯುವ ಮಹಾ ಉದಾರಿ ಭಗವಂತ ವಿಶ್ವದಕ್ಷಿಣಃ.

Sunday, October 3, 2010

Vishnu sahasranama 417-421

ವಿಷ್ಣು ಸಹಸ್ರನಾಮ: ಋತುಃ ಸುದರ್ಶನಃ ಕಾಲಃ ಪರಮೇಷ್ಠೀ ಪರಿಗ್ರಹಃ
417) ಋತುಃ

ಕಾಲ ಚಕ್ರಕ್ಕೆ ಋತು ಎನ್ನುತ್ತೇವೆ. ನಾವು ವಸಂತ, ಗ್ರೀಷ್ಮ, ವರ್ಷ,ಶರತ್, ಹೇಮಂತ ಹಾಗು ಶಿಶಿರ ಎನ್ನುವ ಆರು ಋತುಗಳನ್ನು ಕಾಣುತ್ತೇವೆ. ವಸ್ತುತಃ ಋತುಗಳು ಐದೇ. ಹಿಮವನ್ನು ಕೊಡುವ ಹೇಮಂತ ಋತು ಹಾಗು ಚಳಿಯನ್ನು ಕೊಡುವ ಶಿಶಿರ ಋತು ಎರಡೂ ಒಂದೇ. ಋತುಗಳು ಕಾಲ ಚಕ್ರದ ಅರೆಗಳು(spokes); ಈ ಋತು ಚಕ್ರವನ್ನು ತಿರುಗಿಸಿ, ಕಾಲ ಕಾಲಕ್ಕೆ ಪರಿವರ್ತನೆಯನ್ನು ಮಾಡತಕ್ಕ ಭಗವಂತ ಋತುಃ. ಋತುವಾಗಿ ಬೇರೆ ಬೇರೆ ಕಾಲ ಧರ್ಮಗಳಿಂದ ಮನುಷ್ಯನಿಗೆ ಉಷ್ಣ, ಮಳೆ, ಚಳಿ, ಬೆಳೆ,ಚಿಗುರು,ಹೂ,ಹಣ್ಣನ್ನು ಕೊಟ್ಟು ಪ್ರಪಂಚಕ್ಕೆ ವೈವಿಧ್ಯವನ್ನು ಕೊಡುವ ಭಗವಂತ ಋತುಃ.
ಹೆಣ್ಣಿನಲ್ಲಿ ಋತುವಾಗಿ ಕೂತು ಹೊಸ ಜೀವ ಚಿಗುರಲು ಕಾರಣಕರ್ತನಾಗುವ ಭಗವಂತ ಋತುಃ; ಸಮಸ್ತ ವೇದಗಳಿಂದ ಜ್ಞಾನಿಗಳು ಅರಿಯುವ 'ಬದಲಾಗದ ಸತ್ಯ' ಭಗವಂತ ಋತುಃ.
418) ಸುದರ್ಶನಃ
ಸುದರ್ಶನವನ್ನು ಕೈಯಲ್ಲಿ ಆಯುಧವಾಗಿ ತೊಟ್ಟ; ಸಮೀಚೀನವಾದ ಸುಂದರ ದರ್ಶನವನ್ನು ಕೊಡುವ; ಜ್ಞಾನಿಗಳ ರೂಪದಲ್ಲಿ ಸಮಸ್ತ ವೇದಗಳ ದರ್ಶನವನ್ನು ಕೊಡುವ; ಚಲುನೋಟದ ಭಗವಂತ "ಸು-ದರ್ಶನಃ"
419) ಕಾಲಃ
ಕಾಲ ಎನ್ನುವುದು 'ಕಲ' ಎನ್ನುವ ಧಾತುವಿನಿಂದ ಬಂದ ಪದ. ಈ ಧಾತು ಅನೇಕ ಅರ್ಥವನ್ನು ಕೊಡುತ್ತದೆ.ಎಲ್ಲಾ ಗುಣಗಳನ್ನು, ಎಲ್ಲಾ ಸಾಮರ್ಥ್ಯವನ್ನು ತನ್ನೊಳಗೆ 'ಕಲೆ' ಹಾಕಿದವನು ಕಾಲಃ. ಭಗವಂತ ಸಮಸ್ತ ಸದ್ಗುಣಗಳಿಂದ ಪರಿಪೂರ್ಣವಾದ ತತ್ವ. ಈ ತತ್ವವನ್ನು ನಾವು ಅರಿಯದೆ ಅಹಂಕಾರಿಗಳಾದಾಗ, ಅದೇ ತತ್ವ 'ಕಾಲ ಪುರುಷನಾಗಿ' ನಮ್ಮ ಸಂಹಾರಕ್ಕೆ ಕಾರಣವಾಗುತ್ತದೆ. ಕೆಲವೊಮ್ಮೆ 'ಬದುಕಿನಲ್ಲಿ'
ನಮ್ಮ ಉದ್ಧಾರವಿರುತ್ತದೆ, ಕೆಲವೊಮ್ಮೆ ನಮ್ಮ 'ಸಾವಿನಲ್ಲಿ' ನಮ್ಮ ಉದ್ಧಾರವಿರುತ್ತದೆ, ಕೆಲವೊಮ್ಮೆ ನಮ್ಮ 'ಮಾನದಲ್ಲಿ', ಇನ್ನು ಕೆಲವೊಮ್ಮೆ ನಮ್ಮ 'ಅವಮಾನದಲ್ಲಿ'; ಕೆಲವೊಮ್ಮೆ ನಮ್ಮ 'ಜ್ಞಾನದಲ್ಲಿ' , ಇನ್ನು ಕೆಲವೊಮ್ಮೆ ನಮ್ಮ 'ಅಜ್ಞಾನದಲ್ಲಿ' ನಮ್ಮ ಉದ್ಧಾರವಿರುತ್ತದೆ. ಆದರೆ ನಮ್ಮ 'ಅಹಂಕಾರದಲ್ಲಿ' ಎಂದೆಂದೂ ಉದ್ಧಾರವಿಲ್ಲ. ಜಗತ್ತಿನಲ್ಲಿ ಅಹಂಕಾರ ಭರಿತ ಅಜ್ಞಾನ ತುಂಬಿದಾಗ ಭಗವಂತ 'ಕಾಲ ಪುರುಷನಾಗಿ' ಬೆಳೆದು ನಿಲ್ಲುತ್ತಾನೆ. ಇದನ್ನೇ ಗೀತೆಯಲ್ಲಿ ಕೃಷ್ಣ ಹೀಗೆ ಹೇಳಿದ್ದಾನೆ:
ಕಾಲೋsಸ್ಮಿ ಲೋಕಕ್ಷಯಕೃತ್ ಪ್ರವೃದ್ಧೋ ಲೋಕಾನ್ ಸಮಾಹರ್ತುಮಿಹ ಪ್ರವೃತ್ತಃ (ಅ-೧೧ ಶ್ಲೋ-೩೨)
ಅಂದರೆ "ಲೋಕಗಳನ್ನು ಕಬಳಿಸಲು ಬೆಳೆದು ನಿಂತಿರುವ ಕಾಲಪುರುಷ ನಾನು" ಎಂದರ್ಥ.

ಕಾಲ ಎನ್ನುವುದಕ್ಕೆ ಇನ್ನೊಂದು ಅರ್ಥ 'ಸಮಯ'. ಪ್ರತಿಯೊಂದು ಕ್ರಿಯೆಯ ಹಿಂದೆ 'ಕಾಲ' ಸರ್ವ ಕಾರಣವಾಗಿರುತ್ತದೆ. ಕಾಲ ನಿಯಾಮಕ ಭಗವಂತ ಕಾಲಃ.
ಜ್ಞಾನಕಾರಕವಾದ ಅವತಾರಗಳಿಂದ(ವ್ಯಾಸ,ಕಪಿಲ,ದತ್ತಾತ್ರಯ, ನರ-ನಾರಾಯಣ, ಇತ್ಯಾದಿ) ಅಜ್ಞಾನಕ್ಕೆ 'ಕಾಲವಾದ' ಭಗವಂತ, ಬಲಕಾರಕ ಅವತಾರಗಳಿಂದ(ನರಸಿಂಹ, ವರಾಹ, ರಾಮ,ಪರಶುರಾಮ, ಇತ್ಯಾದಿ) ಅಹಂಕಾರಕ್ಕೆ 'ಕಾಲನಾದ'
ಹೀಗೆ ಸರ್ವ ಗುಣಪೂರ್ಣ, ಸರ್ವ ಸಂಹಾರಕ ಹಾಗು ಕಾಲ ನಿಯಾಮಕ ಭಗವಂತ ಕಾಲಃ
420) ಪರಮೇಷ್ಠೀ
ಪರಮದಲ್ಲಿ ಸ್ಥಿತನಾದವನು. ಪರಮಾಕಾಶವೆಂಬ ಹೃತ್ಕಮಲ ಮಧ್ಯ ನಿವಾಸಿ. ಇಡೀ ವಿಶ್ವದ ಅನಂತ ಶಕ್ತಿ ಪ್ರತಿಯೊಬ್ಬ ಮನುಷ್ಯನ ಹೃತ್ಕಮಲದಲ್ಲಿ ಪೂರ್ಣ ಪ್ರಮಾಣದಲ್ಲಿ ಅಡಗಿದೆ. ನಮ್ಮ ಹೃದಯದ ಸ್ವಲ್ಪ ಮೇಲ್ಬಾಗದಲ್ಲಿನ ಥೈಮಸ್ ಗ್ಲಾಂಡ್ ಒಳಗೆ ಕಮಲರೂಪದಲ್ಲಿ ಒಂದು ಸೂಜಿಯ ಮೊನೆಯಷ್ಟು ಸೂಕ್ಷ್ಮ ರೂಪದಲ್ಲಿ ಈ ಶಕ್ತಿಯ ಕೇಂದ್ರ ಅಡಗಿದೆ. ಇಂತಹ ಅದ್ಭುತ ಶಕ್ತಿ ಭಗವಂತ ಪರಮೇಷ್ಠೀ. ಎಲ್ಲಕ್ಕಿಂತ ಉತ್ಕೃಷ್ಟವಾದ ನಿತ್ಯ ಲೋಕ ವೈಕುಂಠ ನಿವಾಸಿ ಭಗವಂತ ಪರಮೇಷ್ಠೀ.
421) ಪರಿಗ್ರಹಃಪರಿಗ್ರಹ ಎಂದರೆ 'ಪರಿವಾರ' ಎನ್ನುವುದು ಒಂದು ಅರ್ಥ. ಎಲ್ಲಕ್ಕೂ ಮೂಲ ಸ್ವಾಮಿಯಾದ ಭಗವಂತನಿಗೆ ಸರ್ವರೂ ಪರಿಗ್ರಹವಾದರೆ, ಸ್ವಯಂ ಭಗವಂತ ಭಕ್ತರ, ಜ್ಞಾನಿಗಳ ಪರಿಗ್ರಹ. "ಹೂವ ತರುವವರ ಮನೆಗೆ ಹುಲ್ಲತರುವ" ಎನ್ನುವಂತೆ, ಭಕ್ತಿಯಿಂದ ಭಗವಂತನಿಗೆ ನಾವು ಹೂವನ್ನು ಅರ್ಪಿಸಿದರೆ ಆತ ನಮ್ಮ ಪರಿವಾರದವರಲೋಬ್ಬನಾಗಿ ಭಕ್ತರ ಸೇವೆ ಮಾಡುತ್ತಾನೆ.
ಪರಿತಃ+ಗ್ರಹ್ಯತಿ, ಅಂದರೆ ಎಲ್ಲಾ ಕಡೆ ಜ್ಞಾನಿಗಳ, ಭಕ್ತರ ಉಪಾಸ್ಯ ಮೂರ್ತಿಯಾಗಿ ಪೂಜೆಯನ್ನು ಸ್ವೀಕರಿಸುವ ಭಗವಂತ ಪರಿಗ್ರಹಃ. ನಾವು ಯಾವ ದೇವತೆಯನ್ನು ಶ್ರೆದ್ಧೆಯಿಂದ ಪೂಜಿಸಿದರೂ ಅದು ತಲುಪುವುದು ಭಗವಂತನನ್ನೇ. ಗೀತೆಯಲ್ಲಿ ಹೇಳುವಂತೆ:
ಯೇsಪ್ಯನ್ಯ ದೇವತಾಭಕ್ತಾ ಯಜಂತೇ ಶ್ರದ್ಧಯಾsನ್ವಿತಾಃ

ತೇsಪಿ ಮಾಮೇವ ಕೌಂತೇಯ ಯಜಂತ್ಯವಿಧಿಪೂರ್ವಕಮ್ (ಅ-೯, ಶ್ಲೋ-೨೩)
"ಕೌಂತೇಯ- ಯಾರು ಬೇರೆ ದೇವತೆಗಳ ಭಕ್ತರಾಗಿ ಶ್ರದ್ಧೆಯಿಂದ ಅವರನ್ನು ಆರಾಧಿಸುತ್ತಾರೆ ಅಂತವರೂ ಕೂಡಾ ತಪ್ಪು ದಾರಿಯಿಂದ ನನ್ನನ್ನೇ ಪೂಜಿಸುತ್ತಾರೆ"
ಭಕ್ತರು ಪ್ರೀತಿಯಿಂದ,ಭಕ್ತಿಯಿಂದ ನೀಡುವ ಎಲ್ಲವನ್ನೂ ಎಲ್ಲೆಡೆ ಸ್ವೀಕರಿಸಿ ಉದ್ಧಾರ ಮಾಡುವ ಭಗವಂತ ಪರಿಗ್ರಹಃ.

Saturday, October 2, 2010

Vishnu sahasranama 412-416

ವಿಷ್ಣು ಸಹಸ್ರನಾಮ: ಹಿರಣ್ಯಗರ್ಭಃ ಶತ್ರುಘ್ನೋ ವ್ಯಾಪ್ತೋ ವಾಯುರಧೋಕ್ಷಜಃ
412) ಹಿರಣ್ಯಗರ್ಭಃ

ಒಡಲಲ್ಲಿ ವಿಶ್ವವೆಂಬ ಬಂಗಾರ ತುಂಬಿರುವ ಭಗವಂತ ಹಿರಣ್ಯಗರ್ಭಃ. ಇಲ್ಲಿ ಹಿರಣ್ಯ ಎಂದರೆ ಬಾಹ್ಯ ಪ್ರಪಂಚದ ಅಪೇಕ್ಷೆ ಇಲ್ಲದೆ ಅಂತರಂಗದಿಂದ ಚಿಮ್ಮುವ ಆನಂದ. ನಮ್ಮೊಳಗಿರುವ ಜ್ಞಾನಾನಂದವೇ ನಿಜವಾದ ಚಿನ್ನ. ಇದನ್ನು ಬಿಟ್ಟು ಹೊರಗಿನ ಚಿನ್ನದ ಬೆನ್ನು ಹತ್ತುವವರಿಗೆ ಭಗವಂತ ಎಂದೂ ದಕ್ಕುವುದಿಲ್ಲ. ಬಂಗಾರದ ಮೊಟ್ಟೆಯಾದ ಈ ಬ್ರಹ್ಮಾಂಡವನ್ನು ಸೃಷ್ಟಿಸಿದ ಚತುರ್ಮುಖನ ಅಂತರ್ಯಾಮಿ ಭಗವಂತ ಹಿರಣ್ಯಗರ್ಭಃ

413) ಶತ್ರುಘ್ನಃ
ಶ್ರೀರಾಮಚಂದ್ರನಿಗೆ ಶತ್ರುಘ್ನನೆಂಬ ತಮ್ಮನಿದ್ದ. ವಾಸುದೇವ, ಸಂಕರ್ಷಣ, ಪ್ರದ್ಯುಮ್ನ ಹಾಗು ಅನಿರುದ್ಧ ಎಂಬ ಭಗವಂತನ ರೂಪವೇ ರಾಮ, ಲಕ್ಷ್ಮಣ, ಭರತ ಮತ್ತು ಶತ್ರುಘ್ನ ಎಂದು ಅವತಾರದಲ್ಲಿ ನಮಗೆ ಕಾಣಿಸಿಕೊಂಡ ರೂಪ. ಶಂಖಾಭಿಮಾನಿ ಅನಿರುದ್ಧ ನಾಮಕ ಭಗವಂತ ಶತ್ರುಘ್ನನಲ್ಲಿ ಸನ್ನಿಹಿತನಾಗಿದ್ದ. ಶತ್ರು ನಾಶಕ ಭಗವಂತನನ್ನು ಶತ್ರುಘ್ನ ಎನ್ನುತ್ತಾರೆ. ಭಗವಂತನಿಗೆ ಶತ್ರುಗಳು ಯಾರು ? ಎನ್ನುವ ಪ್ರಶ್ನೆ ನಮ್ಮಲ್ಲಿ ಹುಟ್ಟಬಹುದು. ಭಗವಂತ ದ್ವೇಷ ಮಾಡುವ ವಸ್ತು ಅಜ್ಞಾನ, ವಿಪರೀತ ಜ್ಞಾನ, ಅತಿಕಾಮ, ಕ್ರೋಧ ಇತ್ಯಾದಿ. ಸಾಧಕನ ಸಾಧನೆಗೆ ಅಂತರಂಗದ ಶತ್ರುಗಳು ದುರ್ಗುಣಗಳು.ನಮ್ಮ ಅಂತರಂಗದ ಶತ್ರುಗಳು ತುಂಬಾ ಅಪಾಯಕಾರಿ. ಇದಕ್ಕೆ ನಿದರ್ಶನ 'ಮಹಾಭಾರತದ ದೃತರಾಷ್ಟ್ರ'. ದೃತರಾಷ್ಟ್ರನ ಒಳಗಿದ್ದ 'ಪುತ್ರಮೋಹ' ಎನ್ನುವ ಶತ್ರು ಆತನನ್ನು ಅಧಃಪತನಕ್ಕೆ ಕೊಂಡೊಯ್ದ ವಿಷಯ ನಮಗೆಲ್ಲ ತಿಳಿದೇ ಇದೆ. ನಾವು ಭಗವಂತನ ಬಗ್ಗೆ ಚಿಂತನೆ ಮಾಡಬೇಕಿದ್ದರೆ ಮೊದಲು ನಮ್ಮ ಮನಸ್ಸು ದುರ್ಗುಣಗಳಿಂದ ಈಚೆ ಬರಬೇಕು. ನಾವು ಚಿಂತನೆ ಮಾಡಬೇಕೆಂದುಕೊಂಡಾಗ ಮನಸ್ಸು ನಿಂತ ಕಡೆ ನಿಲ್ಲುವುದಿಲ್ಲ. ಮಗು ತಾಯೆಯೇ ಬೇಕು ಎಂದು ಹಂಬಲಿಸಿ ಹೇಗೆ ಹಠ ಮಾಡಿ ತಾಯಿಯನ್ನು ಸೇರುತ್ತದೋ ಅದೇ ರೀತಿ ನಾವು ಹಠ ಬಿಡದೆ ಭಗವಂತನನ್ನು ನೆನೆದರೆ ಆತ ಶತ್ರುಘ್ನನಾಗಿ ಬಂದು ನಮ್ಮ ಅಂತರಂಗದ ಶತ್ರುಗಳನ್ನು ನಾಶ ಮಾಡಿ ಸಾದನೆಯ ಹಾದಿಯಲ್ಲಿ ನಮ್ಮನ್ನು ಮುಂದೆ ನಡೆಸುತ್ತಾನೆ. ಹೀಗೆ ಜ್ಞಾನ ಮಾರ್ಗದ ಅರಿಗಳನ್ನು ತರಿಯುವವನು ಶತ್ರುಘ್ನ.
414) ವ್ಯಾಪ್ತಃ
ಭಗವಂತ ಪರಮ ಆಪ್ತನಾದವನು; ಆತ ಜ್ಞಾನಿಗಳ ಆಪ್ತ ಗೆಳೆಯ ಹಾಗು ಅಭಯ. ಹೀಗೆ ಜ್ಞಾನಿಗಳ ಮಿತ್ರನಾಗಿ ಎಲ್ಲೆಡೆ ತುಂಬಿರುವ ಭಗವಂತ ವ್ಯಾಪ್ತಃ
415) ವಾಯುಃ
ಪ್ರತಿಯೊಂದು ಜೀವ ಜಾತದ ಒಳಗೂ ಹೊರಗೂ ತುಂಬಿರುವ; ಜಗವನ್ನು ಬೆಸೆದ; ಜ್ಞಾನ ಸ್ವರೂಪ ಹಾಗು ನಮಗೆ ಉಸಿರನ್ನಿತ್ತ ಭಗವಂತ ವಾಯುಃ
416) ಅಧೋಕ್ಷಜಃ
ಎಂದೂ ಕೆಳಕ್ಕೆ ಕುಸಿಯದವನು; ಪ್ರತ್ಯಕ್ಷಕ್ಕೆ ಗೋಚರವಾಗದವನು.ಭಾರತದಲ್ಲಿ ಹೇಳುವಂತೆ "ಅದೋ ನಕ್ಷೀಯತೆ ಜಾತು ಯಸ್ಮಾತ್ ತಸ್ಮಃ ಅಧೋಕ್ಷಜಃ". ಅಂದರೆ ಭಗವಂತ ಎಂದೂ ತನ್ನ ಎತ್ತರದ ಸ್ಥಿತಿಯಿಂದ ಕೆಳಕ್ಕಿಳಿಯುವುದಿಲ್ಲ. ಆ ಎತ್ತರ ಆತನ ಸ್ವರೂಪ ಧರ್ಮ. ಹೀಗೆ ಎಂದೆಂದೂ ಶ್ರೇಷ್ಟನಾಗಿರುವ, ಪ್ರತ್ಯಕ್ಷ ಗೋಚರವಾಗದ ಭಗವಂತ ಅಧೋಕ್ಷಜಃ.